ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು online desk
ಅಂಕಣಗಳು

ಇಷ್ಟಕ್ಕೂ ಇಸ್ರೇಲ್ ಮೂರನೇ ಮಹಾಯುದ್ಧ ಸೃಷ್ಟಿಸುತ್ತಿದೆಯೋ ಅಥವಾ ಹುಟ್ಟದಂತೆ ಸಂಹರಿಸುತ್ತಿದೆಯೋ? (ತೆರೆದ ಕಿಟಕಿ)

ಎರಡನೇ ಮಹಾಯುದ್ಧದಲ್ಲಿ ಆಕ್ರಮಣಕಾರರ ಸಾಲಿನಲ್ಲಿದ್ದ ಮೂರು ದೇಶಗಳು - ಜರ್ಮನಿ, ಇಟಲಿ, ಜಪಾನ್ - ತಮ್ಮನ್ನು ಗುರುತಿಸಿಕೊಂಡಿದ್ದು ‘ಆ್ಯಕ್ಸಿಸ್ ಪವರ್’ ಎಂದು.

ಇಸ್ರೇಲ್ ಪರಾಕ್ರಮದ ಕತೆಗಳನ್ನು ಕೇಳುತ್ತಲೇ ಬಂದಿದ್ದೇವೆ. ಆದರೆ ಕಳೆದ ವರ್ಷದ ಅಕ್ಟೋಬರ್ 7ರಂದು ಹಮಾಸ್ ದಾಳಿಯನ್ನು ಎದುರಿಸಿದ ನಂತರ ಒಂದು ವರ್ಷದಲ್ಲಿ ಇಸ್ರೇಲ್ ನಡೆಸಿರುವ ಸಾಹಸಗಳ ಬಿಡಿ ಬಿಡಿ ಚಿತ್ರವನ್ನೆಲ್ಲ ಒಗ್ಗೂಡಿಸಿದರೆ ಆ ಪರಾಕ್ರಮದ ವಿಸ್ತಾರ ಅರಿವಾಗುತ್ತದೆ.

ಇಸ್ರೇಲ್ ತಕ್ಕ ಪ್ರತ್ಯುತ್ತರ ಕೊಡುತ್ತಿದೆ ಎಂಬುದೇನೋ ನಮಗೆ ಅನಿಸಿದ್ದಿರಬಹುದು, ಆದರೆ ಈ ಒಂದು ವರ್ಷದಲ್ಲಿ ಅದು ಮೂರನೇ ಮಿನಿ ವಿಶ್ವಯುದ್ಧವೊಂದನ್ನು ನಾಜೂಕಾಗಿ ಯಶಸ್ವಿಯಾಗಿಸುತ್ತಿದೆ ಎಂಬಂಶ ಮಾತ್ರ ಹೆಚ್ಚಿನವರಿಗೆ ತೋಚಿದ್ದಿರಲಿಕ್ಕಿಲ್ಲ! ಬಹಳಷ್ಟು ವಿಶ್ಲೇಷಕರು ಹಮಾಸ್ ಮೇಲೆ ಇಸ್ರೇಲ್ ದಾಳಿಯಾದಾಗ, ಅದು ಇರಾನಿಗೆ ರಾಕೆಟ್ಟುಗಳನ್ನು ತೂರಿದಾಗ, ಲೆಬನಾನಿನ ಹಿಜ್ಬೊಲ್ಲ ಮೇಲೆ ದಾಳಿ ನಡೆಸಿದಾಗ, “ಅಯ್ಯಯ್ಯೋ ಇದು ಯುದ್ಧೋತ್ಕರ್ಷಕ್ಕೆ ಕಾರಣವಾಗಿ ಪ್ರಾಂತೀಯ ಯುದ್ಧಬಿಕ್ಕಟ್ಟು ಸೃಷ್ಟಿಸಬಹುದು” ಅಂತೆಲ್ಲ ಬರೆದುಕೊಂಡಿರುತ್ತಾರೆ.

ಆದರೆ ಈ ಒಂದು ವರ್ಷದ ವಿದ್ಯಮಾನವನ್ನು ಗಮನಿಸಿದರೆ ಇಸ್ರೇಲ್ ಪ್ರಾಂತೀಯ ಯುದ್ಧವನ್ನು ಆರಂಭಿಸಿ ಒಂದುಮಟ್ಟಿಗೆ ಅದನ್ನು ಗೆದ್ದೂಬಿಟ್ಟಿದೆ!

ಅಕ್ಟೋಬರ್ 7,2023ರ ಆಘಾತದ ನಂತರ ಇಸ್ರೇಲ್ ಸಾಧಿಸಿರುವ ಪ್ರಮುಖ ಗೆಲವುಗಳನ್ನು ಮೊದಲಿಗೆ ಪಟ್ಟಿಮಾಡಿಬಿಡೋಣ. 

  • ಅವೆಷ್ಟೇ ಜಾಗತಿಕ ಪ್ರತಿರೋಧ ಬಂದರೂ ಅದು ತನ್ನ ಮೇಲೆ ದಾಳಿಗೆ ಕಾರಣವಾದ ನೆಲ ಗಾಜಾವನ್ನು ಅಕ್ಷರಶಃ ನೆಲಸಮ ಮಾಡಿಬಿಟ್ಟಿದೆ. 

  • ಇಸ್ರೇಲ್ ವಿರುದ್ಧ ಹಮಾಸ್ ದಾಳಿಗೆ ತಾನು ಸಹಕರಿಸಿದ್ದಾಗಿ ಇರಾನ್ ಬಹಿರಂಗವಾಗಿಯೇ ಹೇಳಿಕೊಂಡಿತ್ತು. ಹಮಾಸಿನ ರಾಜಕೀಯ ಅಧ್ಯಕ್ಷನೆಂಬ ಅಗ್ರಪಟ್ಟದಲ್ಲಿದ್ದ ಇಸ್ಮಾಯಿಲ್ ಹನಿಯೆ, ಇರಾನಿನ ಹೊಸ ಅಧ್ಯಕ್ಷನ ಪದಗ್ರಹಣದ ಸಂದರ್ಭಕ್ಕೆ ಕತಾರಿನಿಂದ ಟೆಹರಾನಿಗೆ ತೆರಳಿದ್ದಾಗ ಅವರದ್ದೇ ನೆಲದಲ್ಲಿ ಹತ್ಯೆ ಮಾಡಿ ತನ್ನ ಸಾಮರ್ಥ್ಯ ತೋರಿದೆ ಇಸ್ರೇಲ್.

  • ಈ ಹಿಂದೆ ಇರಾನ್ ತೂರಿಬಿಟ್ಟಿದ್ದ ಕ್ಷಿಪಣಿಗಳನ್ನು ಅವು ತನ್ನ ವಾತಾವರಣ ಪ್ರವೇಶಿಸುವುದಕ್ಕೆ ಮುಂಚೆಯೇ ಪ್ರತಿಘಾತದಿಂದ ಕೆಡವಿದ್ದ ಇಸ್ರೇಲ್, ನಂತರ ಇರಾನಿನಲ್ಲಿ ಅಣುಶಕ್ತಿ ಘಟಕಗಳು ಸಕ್ರಿಯವಾಗಿರುವ ಇಸ್ಪಹಾನ್ ಎಂಬ ಪ್ರಾಂತ್ಯದೊಳಗೆ ಕ್ಷಿಪಣಿ ಕಳುಹಿಸಿ ತನ್ನ ತಾಕತ್ತೇನೆಂಬುದನ್ನು ತೋರಿಸಿತ್ತು. 

  • ಹಮಾಸ್ ಮತ್ತು ಇರಾನ್ ಕತೆ ಹೀಗಾಯಿತು. ಲೆಬನಾನಿನಲ್ಲಿ ಕ್ಷಿಪಣಿಬಲ ಸನ್ನದ್ಧ ಹಿಜ್ಬೊಲ್ಲ ಉಗ್ರರ ಸೇನಾಪಡೆ ಇರಾನಿನಿಂದಲೇ ತರಬೇತುಗೊಂಡ ಶಕ್ತಿಶಾಲಿ ಕೂಟ ಎಂದೇ ಪರಿಗಣಿಸಲಾಗುತ್ತದೆ. ಹಮಾಸ್ ಅನ್ನು ಒಂದುಹಂತಕ್ಕೆ ಹಿಮ್ಮೆಟ್ಟಿಸುತ್ತಲೇ ಹಿಜ್ಬೊಲ್ಲ ಮೇಲೆ ಅಗ್ನಿಮಳೆಗರೆದಿರುವ ಇಸ್ರೇಲ್, ಸೆಪ್ಟೆಂಬರ್ 27ರಂದು ಹಿಜ್ಬೊಲ್ಲ ಮುಖ್ಯಸ್ಥ ಹಸನ್ ನಸ್ರಲ್ಲಾನನ್ನು ಲೆಬನಾನಿನ ಅವನದ್ದೇ ಗುಹೆಯಲ್ಲಿ ಸಂಹರಿಸಿದೆ.

  • ನಸ್ರಲ್ಲಾನನ್ನು ಸಂಹರಿಸುವುದಕ್ಕೂ ಮುಂಚೆ ಹಿಜ್ಬೊಲ್ಲ ಉಗ್ರರು ಬಳಸುತ್ತಿದ್ದ ಪೇಜರ್ ಮತ್ತು ದೂರಸಂಪರ್ಕ ಸಾಧನಗಳೆಲ್ಲ ಸ್ಫೋಟಗೊಳ್ಳುವಂತೆ ಮಾಡಿ ಹಲವರನ್ನು ಯಮಪುರಿಗಟ್ಟಿದ ಇಸ್ರೇಲಿನ ಚಾಕಚಕ್ಯತೆ ಬಗ್ಗೆ ಇನ್ನು ಬಹಳ ಕಾಲದವರೆಗೆ ಈ ಜಗತ್ತು ಬೆರಗಿನಿಂದ ಚರ್ಚೆ ಮಾಡುತ್ತಲೇ ಇರುತ್ತದೆ!

  • ಹಮಾಸ್ ಮತ್ತು ಹಿಜ್ಬೊಲ್ಲಗಳನ್ನು ವಿಚಾರಿಸಿಕೊಂಡ ನಂತರ ಇಸ್ರೇಲಿನಿಂದ ಬಹುದೂರವೇ ಇರುವ ಯೆಮನ್ ನಿಂದ ಕಾರ್ಯನಿರ್ವಹಿಸುತ್ತಿರುವ, ಇರಾನ್ ಬೆಂಬಲಿತ ಹೂತಿ ಉಗ್ರರ ಮೇಲೆ ವೈಮಾನಿಕ ದಾಳಿಗಳನ್ನು ಪ್ರಾರಂಭಿಸಿದೆ ಇಸ್ರೆಲ್.

ಅಂದರೆ, ಯಾವುದೋ ಒಂದು ಹಮಾಸ್, ಇನ್ಯಾವುದೋ ಒಂದು ಇರಾನ್ ಅಂತಲ್ಲದೇ ತನ್ನ ವಿರುದ್ಧ ನಿಂತವರೆಲ್ಲರನ್ನೂ ವಿಚಾರಿಸಿಕೊಂಡಿದೆ ಇಸ್ರೇಲ್. ಇದರ ಜಾಗದಲ್ಲಿ ಬೇರೆಯದೊಂದು ಪರಾಕ್ರಮಶಾಲಿ ದೇಶವೇ ಇದ್ದಿದ್ದರೂ ಅದು ತನ್ನ ಮೇಲೆ ಆರಂಭದಲ್ಲಿ ದಾಳಿ ಮಾಡಿದ್ದ ಹಮಾಸಿಗೆ ಒಂದು ಗತಿ ಕಾಣಿಸಿ, ಇನ್ನೂ ಪ್ರಾಣ ಉಳಿಸಿಕೊಂಡಿರುವ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿಕೊಂಡು ಬಂದು ಜಗತ್ತಿಗೆ ತಾನು ಒಂದು ಹಂತಕ್ಕೆ ಪ್ರತೀಕಾರ ತೀರಿಸಿಕೊಂಡೆ ಎಂಬುದನ್ನು ತೋರಿಸಿ, ಬಾಕಿ ಯುದ್ಧಗಳನ್ನು ಆಮೇಲೆ ಮಾಡೋಣ ಎಂದುಕೊಂಡು “ಬಿಸಿನೆಸ್ ಆ್ಯಸ್ ಯೂಸುವಲ್” ಎಂಬ ಹಂತಕ್ಕೆ ಮರಳುತ್ತಿತ್ತು. ಮತ್ತೋನೂ ಬೇಡ, ಎರಡು ವರ್ಷಗಳಿಂದ ಜಾರಿಯಲ್ಲಿರುವ ರಷ್ಯ-ಉಕ್ರೇನ್ ಯುದ್ಧವನ್ನೇ ಗಮನಿಸಿ.

ಯಾರಿಗೂ ನಿರ್ಣಾಯಕ ಯಶಸ್ಸು ಸಾಧ್ಯವಾಗಿಲ್ಲ. ಎರಡೂ ಕಡೆ ಯೋಧರು ಸಹಸ್ರ-ಸಹಸ್ರ ಸಂಖ್ಯೆಗಳಲ್ಲಿ ಸಾಯುತ್ತಿದ್ದಾರೆ. ಆದರೆ, ಪಾಶ್ಚಾತ್ಯ ಬೆಂಬಲಿತ ಉಕ್ರೇನಿಗಾಗಲೀ, ಇತ್ತ ರಷ್ಯಕ್ಕಾಗಲೀ ಸಮರವನ್ನು ನಿರ್ಣಾಯಕ ಹಂತ ಮುಟ್ಟಿಸುವುದು ಇವತ್ತಿನವರೆಗೆ ಸಾಧ್ಯವಾಗಿಲ್ಲ. ಇತ್ತ ಇಸ್ರೇಲ್ ಮಾತ್ರ ಹಮಾಸ್, ಹಿಜ್ಬೊಲ್ಲ, ಇರಾನ್, ಹೂತಿ ಎಲ್ಲರನ್ನೂ ವಿಚಾರಿಸಿಕೊಂಡಿದೆ. ಅಷ್ಟೇ ಅಲ್ಲ, ಅಮೆರಿಕದ ಬೆಂಬಲವಿದ್ದರೂ ಆ ದೇಶವೂ ಸೇರಿದಂತೆ ಒಟ್ಟಾರೆ ಜಗತ್ತಿನ ‘ಉದಾರವಾದಿ’ಗಳೆನಿಸಿಕೊಂಡವರು ಜಾಗತಿಕ ರಾಜಕಾರಣದಲ್ಲಿ ಸೃಷ್ಟಿಸುವ ಯಾವ ಒತ್ತಡಗಳಿಗೂ ಇಸ್ರೇಲ್ ಮಣಿಯಲಿಲ್ಲ. 

ಮೂರನೇ ಮಹಾಯುದ್ಧದ ಮಿನಿ ಅವತರಣಿಕೆ ಎಂಬುದು ಉತ್ಪ್ರೇಕ್ಷೆಯೇ?

ಇಸ್ರೇಲ್ ಸಾಧಿಸಿರುವುದೇನು ಎಂಬುದನ್ನು ಅರ್ಥಮಾಡಿಕೊಳ್ಳುವುದಕ್ಕೆ ಈ ಹಿಂದೆ ಜಗತ್ತು ಎರಡನೇ ಮಹಾಯುದ್ಧದಲ್ಲಿ ಕಂಡಿದ್ದ ಚೌಕಟ್ಟನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಇಲ್ಲದಿದ್ದರೆ, ಲಾಗಾಯ್ತಿನಿಂದ ಜಾರಿಯಲ್ಲಿರುವ ಇಸ್ರೇಲ್ ಮತ್ತು ಮುಸ್ಲಿಂ ದೇಶಗಳ ನಡುವಿನ ಸಂಘರ್ಷವನ್ನು ಉತ್ಪ್ರೇಕ್ಷಿಸಲಾಗುತ್ತಿದೆ ಎಂಬ ಭಾವನೆ ಬರಬಹುದು. 

ಎರಡನೇ ಮಹಾಯುದ್ಧದಲ್ಲಿ ಆಕ್ರಮಣಕಾರರ ಸಾಲಿನಲ್ಲಿದ್ದ ಮೂರು ದೇಶಗಳು - ಜರ್ಮನಿ, ಇಟಲಿ, ಜಪಾನ್ - ತಮ್ಮನ್ನು ಗುರುತಿಸಿಕೊಂಡಿದ್ದು ‘ಆ್ಯಕ್ಸಿಸ್ ಪವರ್’ ಎಂದು. ತಮ್ಮನ್ನು ತಾವು ಅಧಿಕಾರಕೇಂದ್ರಿತ ರೇಖಾಪಥವಾಗಿ ಅವು ಪರಿಭಾವಿಸಿಕೊಂಡಿದ್ದವು. ಪಶ್ಚಿಮ ಏಷ್ಯದಿಂದ ಯಹೂದಿಗಳ ನೆಲೆಯನ್ನು ಇಲ್ಲವಾಗಿಸುತ್ತೇನೆ ಎಂಬುದನ್ನು ತನ್ನ ಗುರಿಯಾಗಿಸಿಕೊಂಡಿರುವ ಇರಾನ್ ತನ್ನ ಪರವಾಗಿ ಸೃಷ್ಟಿಸಿಕೊಂಡಿರುವ ಹಿಜ್ಬೊಲ್ಲ, ಹಮಾಸ್, ಹೂತಿ ಉಗ್ರಪಡೆಗಳಿಗೆ ಇಟ್ಟುಕೊಂಡಿರುವ ಹೆಸರು ‘ಆ್ಯಕ್ಸಿಸ್ ಆಫ್ ರೆಸಿಸ್ಟೆನ್ಸ್’. 

ವಿಶ್ವಭೂಪಟದಿಂದ ಇಸ್ರೇಲನ್ನು ಇಲ್ಲವಾಗಿಸಬೇಕು ಎಂಬುದು ಇರಾನಿನ ಈ ಕ್ಷಣದ ಗುರಿಯಾದರೂ ಅದರ ದೀರ್ಘಾವಧಿ ಉದ್ದೇಶವೆಂದರೆ ಪಶ್ಚಿಮ ಏಷ್ಯದಲ್ಲಿ ತನ್ನನ್ನು ಪ್ರಬಲ ಶಕ್ತಿಯಾಗಿ ಸ್ಥಾಪಿಸಿಕೊಳ್ಳುವುದು. ಭಾರತವೂ ಸೇರಿದಂತೆ ಏಷ್ಯ ಮತ್ತು ಯುರೋಪಿನ ಕೊಂಡಿ ಈ ಪಶ್ಚಿಮ ಏಷ್ಯ. ಸೂಯಜ್ ಕಾಲುವೆ, ರೆಡ್ ಸೀ ಸಮುದ್ರ ಮಾರ್ಗ, ತೈಲ ಸಂಪನ್ಮೂಲ, ಜಾಗತಿಕ ವಹಿವಾಟಿನ ರಹದಾರಿ ಎಲ್ಲವೂ ಈ ಭಾಗವೇ. ಹೀಗಾಗಿ ತನ್ನನ್ನು ತಾನು ಪ್ರತಿರೋಧದ ಗುಂಪು ಎಂದು ಗುರುತಿಸಿಕೊಳ್ಳುವ ಇರಾನ್ ಕ್ರಮೇಣ ಜಗತ್ತಿಗೆ ತಲೆನೋವಾಗುವುದರಲ್ಲಿ ಸಂದೇಹವೇನಿಲ್ಲ. ಇಸ್ರೇಲ್ ಜತೆಜತೆಯಲ್ಲಿ ಡೆತ್ ಟು ಅಮೆರಿಕ ಎಂಬುದು ಸಹ ಇರಾನಿನ ಘೋಷವಾಕ್ಯ. ಯಾವತ್ತೋ ನ್ಯೂಕ್ಲಿಯರ್ ಬಾಂಬ್ ಹೊಂದಿರುತ್ತಿದ್ದ ಈ ದೇಶವನ್ನು ತನ್ನ ರಹಸ್ಯ ಕಾರ್ಯಾಚರಣೆಗಳ ಮೂಲಕ ನಿಯಂತ್ರಿಸಿಕೊಂಡು ಬಂದಿದ್ದರಲ್ಲಿ ಇಸ್ರೇಲಿನ ದೊಡ್ಡ ಯೋಗದಾನವಿದೆ. 

ಈ ಇರಾನಿಗೆ ಭೂಪ್ರದೇಶಗಳನ್ನು ತನ್ನ ವಶವಾಗಿಸಿಕೊಂಡು ಸಂಪನ್ಮೂಲಗಳ ಮೇಲೆ ನಿಯಂತ್ರಣ ಸಾಧಿಸುವ ಮಟೀರಿಯಲ್ ಗೋಲ್ ಮಾತ್ರವೇ ಇದೆ ಎಂದೇನಿಲ್ಲ. ಪಶ್ಚಿಮ ಏಷ್ಯದಿಂದ ಆರಂಭಿಸಿ ಎಲ್ಲೆಡೆ ತನ್ನ ವ್ಯಾಖ್ಯಾನದ ಇಸ್ಲಾಂ ಅನ್ನು ಹರಡಬೇಕೆಂಬುದು ಇರಾನಿನ ಇಚ್ಛೆ. ಹಾಗೆಂದೇ ಅದು ಮುಸ್ಲಿಂ ದೇಶವೇ ಆಗಿರುವ ಸೌದಿ ಅರೇಬಿಯಾದೊಂದಿಗೆ ಬದ್ಧವೈರ ಹೊಂದಿದೆ. ಸುನ್ನಿ ಪ್ರಾಬಲ್ಯದ ಸೌದಿ ರಾಜಮನೆತನವನ್ನು ಅಧಿಕಾರದಿಂದ ಕೆಳಗಿಳಿಸಿ ಅರಬ್ ಸಾಮ್ರಾಜ್ಯದ ಪ್ರಶ್ನಾತೀತ ಅಧಿಪತಿ ತಾನಾಗಬೇಕೆಂಬುದು ಶಿಯಾ ಪ್ರಾಬಲ್ಯದ ಇರಾನಿನ ಕನಸು. ಇದನ್ನು ಅದು ಬಹಿರಂಗವಾಗಿಯೇ ಹೇಳಿಕೊಂಡಿದೆ ಸಹ. ಅವತ್ತಿಗೆ ಆ್ಯಕ್ಸಿಸ್ ಪವರ್ ಅನ್ನು ಮುನ್ನಡೆಸಿದ್ದ ಜರ್ಮನಿಯ ಹಿಟ್ಲರನಿಗೆ ಜನಾಂಗೀಯ ಶ್ರೇಷ್ಟತೆ, ಪರಿಶುದ್ಧ ರಕ್ತ ಎಂಬೆಲ್ಲ ಕಲ್ಪನೆಗಳಿದ್ದವು. ಇರಾನಿನ ಅಧಿಕಾರಸೂತ್ರದಲ್ಲಿರುವ ಮತಾಧಿಕಾರಿ ಖೊಮೇನಿಗಳಿಗೆ ಸಹ ಇಸ್ಲಾಂ ಚೌಕಟ್ಟಿನಲ್ಲಿ ಇಂಥದೇ ಆದ ಶ್ರೇಷ್ಟತೆಯ ಕಲ್ಪನೆಗಳಿವೆ. ಹೀಗಾಗಿ ಇರಾನ್ ಬಲಗೊಳ್ಳುವುದೆಂದರೆ ಭವಿಷ್ಯದಲ್ಲಿ ಯಹೂದಿಗಳಷ್ಟೇ ಮತ್ತೆ ವಿಷಾನಿಲದ ಚೇಂಬರಿಗೆ ಹೋಗುವುದಲ್ಲ, ಜಗತ್ತಿನ ಬೇರೆ ಜನಾಂಗಗಳಿಗೂ ಆ ಗತಿ ಎದುರಾದೀತೆಂದು ಶಂಕಿಸುವಲ್ಲಿ ತಪ್ಪೇನಿಲ್ಲ. 

ಯೆಮನ್ ಅನ್ನು ಅರ್ಧ ಆಕ್ರಮಿಸಿರುವ ಹೂತಿ ಉಗ್ರರಿಗೆ ಇರಾನಿನದ್ದೇ ಕೃಪಾಕಟಾಕ್ಷ. ಇತ್ತೀಚಿನ ತಿಂಗಳುಗಳಲ್ಲಿ ರೆಡ್ ಸೀ ಸಮುದ್ರಮಾರ್ಗದಲ್ಲಿ ಸರಕು ಸಾಗಣೆ ಹಡಗುಗಳನ್ನು ಗುರಿಯಾಗಿಸಿಕೊಂಡು ಜಾಗತಿಕ ಅರ್ಥವ್ಯವಸ್ಥೆಯನ್ನೇ ದುಬಾರಿಯಾಗಿಸಲು ಹೊರಟವರಿವರು. ಇಂಥ ಹೂತಿಗಳ ಜತೆ ಚೀನಾ ಮತ್ತು ರಷ್ಯಗಳು ತಮಗೆ ಸೇರಿದ ಹಡಗುಗಳನ್ನು ಮಾತ್ರ ದಾಳಿ ಮಾಡಬೇಡಿ ಎಂದು ಒಪ್ಪಂದ ಮಾಡಿಕೊಂಡಿದ್ದವೆಂಬ ಅಂಶ ಗಮನಿಸಿದರೆ ಈ ‘ಪವರ್ ಆಫ್ ರೆಸಿಸ್ಟೆನ್ಸ್’ ಹೇಗೆಲ್ಲ ಬೆಳೆಯಹೊರಟಿತ್ತು ಎಂಬುದು ಸ್ಪಷ್ಟವಾಗುತ್ತದೆ. 

ರಕ್ಷಣೆಯ ಯಹೂದಿ ಮಾದರಿ

ಯಹೂದಿಗಳ ಪರಾಕ್ರಮವನ್ನು ತೀರ ಹೊಗಳುವಾಗೆಲ್ಲ ಕೆಲವು ವಿಶ್ಲೇಷಕರು ಎಚ್ಚರಿಕೆಯ ಮಾತುಗಳನ್ನೂ ಆಡುತ್ತಾರೆ. ಜಗತ್ತಿನಲ್ಲಿ ಕ್ಯಾಪಟಿಲಿಸ್ಟ್-ಕಮ್ಯುನಿಸ್ಟ್ ಆಟಗಳನ್ನು ಆಡುತ್ತಿರುವುದರ ಹಿಂದೆಯೂ ಜಾರ್ಜ್ ಸೊರೊಸ್, ರಾತ್ಸಚೈಲ್ಡ್ ಕುಟುಂಬ ಇತ್ಯಾದಿ ಯಹೂದಿ ಜನರೇ ಇದ್ದಾರೆ ಎಂಬ ತಥ್ಯವನ್ನೂ ತಳ್ಳಿಹಾಕಲಾಗುವುದಿಲ್ಲ.

ಆದರೆ, ಜನಸಂಖ್ಯಾಬಲ ಇಲ್ಲದಿದ್ದಾಗಲೂ ಸಮರಗಳನ್ನು ಗೆಲ್ಲಬಹುದು, ಜಗತ್ತನ್ನು ನಿಯಂತ್ರಿಸಬಹುದು ಎಂಬುದನ್ನು ಇಸ್ರೇಲ್ ಮತ್ತು ಯಹೂದಿಗಳು ತೋರಿಸಿಕೊಡುತ್ತಿದ್ದಾರೆ. ಇಸ್ರೇಲ್ ಸೇರಿದಂತೆ ಎಲ್ಲೆಡೆ ಹರಡಿರುವ ಇವರ ಜನಸಂಖ್ಯೆ ಜಗತ್ತಿನ ಜನಸಂಖ್ಯೆಯ ಕೇವಲ ಶೇ. 0.2 ಭಾಗವಾಗುತ್ತದೆ. ಒಂದುಕಾಲದಲ್ಲಿ ಕ್ರೂಸೇಡ್ ಹೆಸರಲ್ಲಿ ಯುದ್ಧಹಿಂಸೆ ಮೆರೆದ ಕ್ರೈಸ್ತರು ಜಾಗತಿಕ ಜನಸಂಖ್ಯೆಯ ಶೇ. 31 ಹಾಗೂ ಜಿಹಾದ್ ಮೂಲಕ ಆತಂಕ ಸೃಷ್ಟಿಸಿರುವ ಮುಸ್ಲಿಂ ಸಮುದಾಯ ಶೇ. 25 ಇದೆ.

ಪರಾಕ್ರಮ ಮತ್ತು ಶಸ್ತ್ರಬಲದಲ್ಲಿ ಯಹೂದಿಯರು ಅಗ್ರಗಣ್ಯರೇ. ಆದರೆ ತಮ್ಮ ಅಸ್ತಿತ್ವ ಮತ್ತು ಗೆಲವುಗಳಿಗೆ ಅವರು ಜನಬಲ, ಮಿಲಿಟರಿ ಬಲವನ್ನು ಮಾತ್ರ ನಂಬಿರದೇ ಬುದ್ಧಿಶಕ್ತಿಯನ್ನು ಉಚ್ಚ ಮಟ್ಟದಲ್ಲಿರಿಸಿಕೊಂಡಿದ್ದಾರೆ. ಹಿಜ್ಬೊಲ್ಲಾಗಳನ್ನು ದಮನಿಸಿದ ರೀತಿಯಲ್ಲೇ ಅದು ಸ್ಪಷ್ಟವಾಗುತ್ತದೆ. ಸೆಲ್ಫೋನುಗಳಲ್ಲಿ ಮಾತನಾಡಿದರೆ ಇಸ್ರೇಲಿಗಳು ಕದ್ದಾಲಿಸುತ್ತಾರೆಂದು ಪೇಜರ್ ಬಳಸಿದರು. ಆ ಪೇಜರುಗಳೇ ಸ್ಫೋಟವಾಗಿ ಹಲವಾರು ಹಿಜ್ಬೊಲ್ಲ ಉಗ್ರರು, ಕಮಾಂಡರುಗಳೆಲ್ಲ ಸಾಯುವಂತೆ ಹಾಗೂ ಉಳಿದುಕೊಂಡವರೂ ತಮ್ಮ ಸೂಕ್ಷ್ಮ ಪ್ರದೇಶಗಳಲ್ಲಿ ಆಘಾತ ಅನುಭವಿಸುವಂತೆ ಮಾಡಿತು ಇಸ್ರೇಲಿನ ಇಂಟಲಿಜೆನ್ಸ್ ಕಾರ್ಯಾಚರಣೆ.

ಹೀಗೊಂದು ಸಂವಹನ ಜಾಲವೇ ಛಿದ್ರಛಿದ್ರವಾಗಿ ಇವರೆಲ್ಲ ಭೌತಿಕವಾಗಿಯೇ ಒಂದೆಡೆ ಕಲೆಯುವ ಪರಿಸ್ಥಿತಿ ನಿರ್ಮಿಸಿದ ನಂತರ ಲೆಬನಾನಿನ ಮೇಲೆ ವಾಯುದಾಳಿ ಪ್ರಾರಂಭಿಸಿದ ಇಸ್ರೇಲ್ ಅಲ್ಲಿ ಪ್ರಮುಖ ಕಮಾಂಡರುಗಳನ್ನೆಲ್ಲ ಸಾವಿನ ಮನೆಗೆ ಕಳುಹಿಸಿ, 900 ಕೆಜಿ ಬಾಂಬ್ ಹಾಕಿ ನೆಲಮಾಳಿಗೆಯಲ್ಲಿದ್ದ ನಸ್ರಲ್ಲಾನನ್ನೂ ಕೊಂದುಹಾಕಿತು! ಇದೀಗ, ಈ ಹಿಂದೆ ಸೌದಿ ಮತ್ತು ಅಮೆರಿಕ ಪಡೆಗಳೇ ಏನೂ ಮಾಡಲಾಗದೇ ಕೈಕಟ್ಟಿಕೊಂಡಿರುವಂತೆ ಮಾಡಿದ್ದ ಯೆಮನ್ನಿನ ಹೂತಿಗಳನ್ನೂ ವಿಚಾರಿಸಿಕೊಳ್ಳುವುದಕ್ಕೆ ಹೊರಟಿದೆ ಇಸ್ರೇಲ್. ಈವರೆಗೆ ಕಂಡಿರದ ಮಹಾಘಾತವನ್ನಂತೂ ಹೂತಿಗಳು ಅನುಭವಿಸಲಿಕ್ಕಿದ್ದಾರೆ. 

ಇಷ್ಟಕ್ಕೂ. ವೈರಿಯ ಭೂಪ್ರದೇಶವನ್ನು ಕೆಲಕಾಲಗಳ ಮಟ್ಟಿಗೆ ಆಕ್ರಮಿಸಿಕೊಳ್ಳುವ ಪೌರುಷವನ್ನು ಅಮೆರಿಕ, ರಷ್ಯಗಳ ಮಿಲಿಟರಿಯೂ ಆಗೀಗ ತೋರಿದ್ದಿದೆ. ಆದರೆ ದೀರ್ಘಾವಧಿಯಲ್ಲಿ ಅದು ಅಜೀರ್ಣವೇ. ಇರಾಕ್ ಮತ್ತು ಅಫಘಾನಿಸ್ತಾನಗಳಲ್ಲಿ ಅಮೆರಿಕ ಅನುಭವಿಸಿದ್ದನ್ನು ನೆನಪಿಸಿಕೊಳ್ಳಬಹುದು. ಆದರೆ ಇಸ್ರೇಲಿನ ವರಸೆಯೇ ಭಿನ್ನ. ಆ್ಯಕ್ಸಿಸ್ ಆಫ್ ರೆಸಿಸ್ಟನ್ಸ್ ರೂಪಿಸಿದ್ದ ಇರಾನಿಗೆ ಮರ್ಯಾದೆಯೇ ಇಲ್ಲದ ಸಂದರ್ಭವೊಂದನ್ನು ಇಸ್ರೇಲ್ ಸೃಷ್ಟಿಸಿದೆ. ತನ್ನ ಪ್ರತಿರೋಧ ಪಥದುದ್ದಕ್ಕೂ ಅದ್ಯಾವಾಗ ಬಾಂಬ್ ಸ್ಫೋಟಿಸುತ್ತದೋ, ಅದ್ಯಾವಾಗ ಮುಖ್ಯ ಸೇನಾನಿಗಳ ತಲೆ ಉರುಳಿಹೋಗುತ್ತದೋ, ಮತ್ತಿನ್ಯಾವಾಗ ಟೆಹರಾನ್ ಅಂಗಳಕ್ಕೇ ಕ್ಷಿಪಣಿ ಬಂದು ಬೀಳುತ್ತದೋ ಎಂಬ ಭಯದಲ್ಲೇ ಇರಾನ್ ಬದುಕುವಂತಾಗಿದೆ. 

- ಚೈತನ್ಯ ಹೆಗಡೆ

cchegde@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

ಉಚ್ಚಾಟಿತ AIADMK ಹಿರಿಯ ನಾಯಕ ಸೆಂಗೊಟ್ಟೈಯನ್ ನಾಳೆ ವಿಜಯ್ ಭೇಟಿ; TVK ಸೇರುವ ಸಾಧ್ಯತೆ

ಶಾಂತಿ ಮಾತುಕತೆ ನಡೆಯುತ್ತಿರುವಾಗಲೇ ಉಕ್ರೇನ್‌ ಮೇಲೆ ರಷ್ಯಾ ದಾಳಿ; ಕನಿಷ್ಠ ಏಳು ಜನ ಸಾವು

SCROLL FOR NEXT