ಪುಣೆ: ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ 2023ರ ಟೂರ್ನಿಯಲ್ಲಿ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತಕ್ಕೆ ಗೆಲುವು ತಂದುಕೊಟ್ಟ ವಿರಾಟ್ ಕೊಹ್ಲಿ ತಂಡದ ಸಹ ಆಟಗಾರ ರವೀಂದ್ರ ಜಡೇಜಾಗೆ Sorry ಹೇಳಿದ್ದಾರೆ.
ಹೌದು.. ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯಷನ್ ಕ್ರೀಡಾಂಗಣದಲ್ಲಿ ನಡೆದ ಇಂದಿನ ಪಂದ್ಯದಲ್ಲಿ ಬಾಂಗ್ಲಾದೇಶ ನೀಡಿದ 257ರನ್ ಗಳ ಸವಾಲಿನ ಗುರಿಯನ್ನು ಬೆನ್ನು ಹತ್ತಿದ ಭಾರತ ತಂಡ 41.3 ಓವರ್ ನಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು 261 ರನ್ ಗಳಿಸಿ 7 ವಿಕೆಟ್ ಗಳ ಅಂತರದ ಭರ್ಜರಿ ಜಯಗಳಿಸಿತು. ಈ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ ಕೊಹ್ಲಿ ಕೇವಲ 97 ಎಸೆತಗಳಲ್ಲಿ 4 ಭರ್ಜರಿ ಸಿಕ್ಸರ್ ಮತ್ತು 6 ಬೌಂಡರಿಗಳ ನೆರವಿನಿಂದ ಅಜೇಯ 103ರನ್ ಗಳಿಸಿ ತಂಡಕ್ಕೆ ಜಯ ತಂದಿತ್ತರು.
ಇದನ್ನೂ ಓದಿ: ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ 2023: ಕೊಹ್ಲಿ ಮ್ಯಾಜಿಕ್ ಗೆ ಹಲವು ದಾಖಲೆಗಳು ಪತನ, ಪುಣೆ ಮೈದಾನದಲ್ಲಿ 'ವಿರಾಟ' ದರ್ಶನ
ಅಂತೆಯೇ ಅರ್ಹವಾಗಿಯೇ ಕೊಹ್ಲಿ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು. ಪ್ರಶಸ್ತಿ ಸ್ವೀಕರಿಸುವ ವೇಳೆ ಮಾತನಾಡಿದ ಕೊಹ್ಲಿ ಆರಂಭದಲ್ಲಿಯೇ ಇದು ರವೀಂದ್ರ ಜಡೇಜಾಗೆ ಸಿಗಬೇಕಿದ್ದ ಪಂದ್ಯ ಶ್ರೇಷ್ಠ ಪ್ರಶಸ್ತಿ ನನಗೆ ಸಿಕ್ಕಿದೆ ಎಂದು ನೇರವಾಗಿ ಹೇಳಿ ಜಡ್ಡುಗೆ ಸಾರಿ ಹೇಳಿದರು.
'ಜಡ್ಡುವಿನಿಂದ ಪಂದ್ಯಶ್ರೇಷ್ಠ ಪ್ರಶಸ್ತಿ ಕಸಿದಿದ್ದಕ್ಕಾಗಿ ಕ್ಷಮೆ ಕೇಳುತ್ತೇನೆ, ನಾನು ಈ ಪಂದ್ಯದಲ್ಲಿ ದೊಡ್ಡ ಇನ್ನಿಂಗ್ಸ್ ಕಟ್ಟಬೇಕು ಎಂದು ಕೊಂಡಿದ್ದೆ. ನಾನು ವಿಶ್ವಕಪ್ಗಳಲ್ಲಿ ಕೆಲವೇ ಕೆಲವು ಅರ್ಧಶತಕಗಳನ್ನು ಹೊಂದಿದ್ದೇನೆ, ನಿಜವಾಗಿಯೂ ಅವುಗಳನ್ನು ಶತಕವಾಗಿ ಪರಿವರ್ತಿಸಿಲ್ಲ. ನಾನು ಈ ಬಾರಿಯ ಆಟವನ್ನು ಕೊನೆಯವರೆಗೂ ತೆಗೆದುಕೊಂಡು ಹೋಗಲು ಬಯಸಿದ್ದೆ. ಅದನ್ನು ನಾನು ತಂಡಕ್ಕಾಗಿ ವರ್ಷಗಳಿಂದ ಮಾಡಿದ್ದೇನೆ. ಇದೇ ವಿಚಾರವಾಗಿ ನಾನು ಶುಭ್ಮನ್ ಗಿಲ್ ಗೆ ಹೇಳುತ್ತಿದ್ದೆ. ಇದು ನನ್ನ ಕನಸಿನ ಆರಂಭ, ಮೊದಲ ನಾಲ್ಕು ಎಸೆತಗಳು, ಎರಡು ಫ್ರೀ-ಹಿಟ್ಗಳು, ಒಂದು ಸಿಕ್ಸರ್ ಮತ್ತು ಬೌಂಡರಿ. ನಿಮ್ಮನ್ನು ಕ್ರೀಸ್ ನಲ್ಲಿ ಗಟ್ಟಿಯಾಗಿ ನೆಲೆಯೂರಲು ನೆರವಾಯಿತು. ನಿಮ್ಮನ್ನು ಇನ್ನಿಂಗ್ಸ್ಗೆ ಸರಿ ಹೊಂದಿಸುತ್ತದೆ. ಪಿಚ್ ತುಂಬಾ ಚೆನ್ನಾಗಿತ್ತು ಮತ್ತು ಇದು ನನ್ನ ಆಟವನ್ನು ಆಡಲು ನನಗೆ ಅವಕಾಶ ಮಾಡಿಕೊಟ್ಟಿತು ಎಂದು ಹೇಳಿದರು.
ಇದನ್ನೂ ಓದಿ: ಐಸಿಸಿ ಏಕದಿನ ವಿಶ್ವಕಪ್ 2023: ಕೊಹ್ಲಿ 'ಅಸಾಧ್ಯ' ಶತಕ, ಬಾಂಗ್ಲಾ ವಿರುದ್ಧ ಭಾರತಕ್ಕೆ 7 ವಿಕೆಟ್ ಗಳ ಭರ್ಜರಿ ಜಯ
ಅಂತೆಯೇ ಪುಣೆ ಮೈದಾನದ ಕುರಿತು ಮಾತನಾಡಿದ ಕೊಹ್ಲಿ, ತವರಿನಲ್ಲಿ ಪ್ರತಿಷ್ಠಿತ ಟೂರ್ನಿ ಆಡುವುದು ಮತ್ತು ಪ್ರಮುಖವಾಗಿ ನಮ್ಮ ನೆಚ್ಚಿನ ಮೈದಾನಗಳಲ್ಲಿ ಉತ್ತಮ ಆಟ ಪ್ರದರ್ಶಿಸಿದರೆ ಆ ಖುಷಿಯೇ ಬೇರೆ. ಇಷ್ಟು ಜನ ಭಾರತೀಯ ಪ್ರೇಮಿಗಳ ಎದುರು ಆಡಿ ಗೆಲ್ಲುವುದು ಒಂದು ವಿಶೇಷವಾದ ಭಾವನೆ, ನಾವು ಅದನ್ನು ಸದುಪಯೋಗಪಡಿಸಿಕೊಳ್ಳಲು ಬಯಸುತ್ತೇವೆ ಎಂದರು.
ಜಡೇಜಾ ಉತ್ತಮ ಪ್ರದರ್ಶನ
ಅಂದಹಾಗೆ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ಒಂದು ಹಂತದಲ್ಲಿ ತನ್ನ ರನ್ ಗಳಿಕೆಯನ್ನು 280ರ ಗಡಿ ದಾಟಿಸುವ ಸಾಧ್ಯತೆ ಇತ್ತು. ಆರಂಭಿಕರಾದ ಟಾಂಜಿದ್ ಹಸನ್ (51 ರನ್) ಮತ್ತು ಲಿಟನ್ ದಾಸ್ (66 ರನ್) ತಲಾ ಅರ್ಧಶತಕ ಗಳಿಸಿ ಮಾರಕವಾಗುವ ಮುನ್ಸೂಚನೆ ನೀಡಿದ್ದರು. ಈ ಹಂತದಲ್ಲಿ ಹಸನ್ ರನ್ನು ಕುಲದೀಪ್ ಯಾದವ್ ಎಲ್ ಬಿ ಬಲೆಗೆ ಕೆಡವಿದ್ದರು. ಬಳಿಕ ರವೀಂದ್ರ ಜಡೇಜಾ ಕೂಡ ಅಪಾಯಕಾರಿಯಾಗಿ ಆಡುತ್ತಿದ್ದ ಲಿಟನ್ ದಾಸ್ ರನ್ನು 66 ರನ್ ಗಳಿಗೆ ಔಟ್ ಮಾಡಿದರು. ಜಡೇಜಾ ಈ ಪಂದ್ಯದಲ್ಲಿ ಒಟ್ಟು 10 ಓವರ್ ಎಸೆದು 3.80 ಸರಾಸರಿಯಲ್ಲಿ ಕೇವಲ 38 ರನ್ ನೀಡಿ 2 ಪ್ರಮುಖ ವಿಕೆಟ್ ಪಡೆದಿದ್ದಾರೆ.