ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ಮತ್ತು ಶಾಂತಾ ರಂಗಸ್ವಾಮಿ ಅವರಿಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಗೌರವ ಸಲ್ಲಿಸಿದ್ದು, ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೂವರ ಹೆಸರಿನಲ್ಲಿ ಪ್ರೇಕ್ಷಕರ ಸ್ಟ್ಯಾಂಡ್ಗಳಿಗೆ ನಾಮಕರಣ ಮಾಡುವ ನಿರ್ಧಾರ ಕೈಗೊಂಡಿದೆ.
ಕರ್ನಾಟಕ ಕ್ರಿಕೆಟ್ ನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ತಲುಪಿಸುವಲ್ಲಿ ಮಹತ್ವದ ಪಾತ್ರವಹಿಸಿದ ಈ ಮೂವರು ದಿಗ್ಗಜರು ನಂತರ ಭಾರತ ರಾಷ್ಟ್ರೀಯ ತಂಡಕ್ಕೂ ನಾಯಕತ್ವ ನೀಡಿದ್ದು, ಇಂದಿಗೂ ಕ್ರಿಕೆಟ್ ಲೋಕದ ಅತ್ಯಂತ ಗೌರವಾನ್ವಿತ ವ್ಯಕ್ತಿಗಳು ಎನಿಸಿಕೊಂಡಿದ್ದಾರೆ.
ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ ನಲ್ಲಿ ಭಾರತ ಪರ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರರಾಗಿ ಅನಿಲ್ ಕುಂಬ್ಳೆ ಮುಂದುವರಿದಿದ್ದಾರೆ. ಮತ್ತೊಂದೆಡೆ, ಸಚಿನ್ ತೆಂಡೂಲ್ಕರ್ ನಂತರ ಟೆಸ್ಟ್ ಕ್ರಿಕೆಟ್ನಲ್ಲಿ ಭಾರತ ಪರ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ರಾಹುಲ್ ದ್ರಾವಿಡ್ ಎರಡನೇ ಸ್ಥಾನದಲ್ಲಿದ್ದಾರೆ.
ಕ್ರಿಕೆಟ್ ಕ್ಷೇತ್ರದಲ್ಲಿ ಈ ಇಬ್ಬರು ಮಾಡಿದ ಸಾಧನೆಗೆ ಭಾರತದ ಮಾಜಿ ವೇಗದ ಬೌಲರ್ ಕೆಎಸ್ ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಅವರ ಸಮ್ಮುಖದಲ್ಲಿ ತೆಗೆದುಕೊಳ್ಳಲಾಯಿತು.
ಇದು ನಮಗೆ ಎರಡನೇ ಮನೆ
ತಮ್ಮ ಹೆಸರಿನಲ್ಲಿ ಸ್ಟ್ಯಾಂಡ್ ನಾಮಕರಣವಾಗಿರುವ ಕುರಿತು ಮಾತನಾಡಿದ ರಾಹುಲ್ ದ್ರಾವಿಡ್ ಭಾವೋದ್ವೇಗ ವ್ಯಕ್ತಪಡಿಸಿ, ಈ ಮೈದಾನವು ನನಗೆ ಎರಡನೇ ಮನೆಯಂತಿದ್ದು, ಆಟದ ದಿನಗಳಲ್ಲಿ ಮನೆಗಿಂತಲೂ ಹೆಚ್ಚು ಸಮಯ ಇಲ್ಲೇ ಕಳೆದಿದ್ದೇನೆ ಎಂದು ಹೇಳಿದರು.
“ಇದು ನನ್ನ ಎರಡನೇ ಮನೆ. ಅನಿಲ್ ಕುಂಬ್ಳೆಯವರು ಹೇಳಿದಂತೆ, ನಾವು ನಮ್ಮ ಮನೆಗಿಂತಲೂ ಇಲ್ಲಿ ಹೆಚ್ಚು ಸಮಯ ಕಳೆದಿದ್ದೇವೆ. ಇಲ್ಲಿ ಅಪಾರ ಸಂತೋಷವೂ ಅನುಭವಿಸಿದ್ದೇನೆ, ಕೆಲವೊಮ್ಮೆ ನಿರಾಶೆಯನ್ನೂ ಎದುರಿಸಿದ್ದೇನೆ. ಆದರೆ ಇಂದು ನಾನು ಏನಾಗಿದ್ದೇನೆ ಎಂಬುದಕ್ಕೆ ಈ ಮೈದಾನ ಮತ್ತು ಕೆಎಸ್ಸಿಎ ಕಾರಣ. ನನ್ನ ಜೀವನಕ್ಕೆ ಈ ಮಹಾನ್ ಮೈದಾನ ನೀಡಿದ ಕೊಡುಗೆಗೆ ನಾನು ಸದಾ ಕೃತಜ್ಞ,” ಎಂದು ಹೇಳಿದರು.
ಈ ಗೌರವದ ಸಂದರ್ಭದಲ್ಲಿ ತಮ್ಮ ತಂದೆಯ ಪ್ರಭಾವವನ್ನು ನೆನಪಿಸಿಕೊಂಡ ರಾಹುಲ್ ದ್ರಾವಿಡ್, ಬಾಲ್ಯದಲ್ಲೇ ಕ್ರಿಕೆಟ್ ಮೇಲಿನ ಆಸಕ್ತಿಯನ್ನು ಬೆಳೆಸಿದವರು ನನ್ನ ತಂದೆಯೇ ಎಂದು ಹೇಳಿದರು.
ವೆಂಕಟೇಶ್ ಪ್ರಸಾದ್ ಮತ್ತು ಅವರ ಸಮಿತಿ ನನ್ನ ಹೆಸರಿನಲ್ಲಿ ಒಂದು ಸ್ಟ್ಯಾಂಡ್ ಗೆ ನಾಮಕರಣ ಮಾಡಿರುವುದಕ್ಕೆ ನಾನು ತುಂಬಾ ಕೃತಜ್ಞ. ಇದು ನನ್ನ ಕುಟುಂಬಕ್ಕೆ ಬಹಳ ಅರ್ಥಪೂರ್ಣ. ನನ್ನ ತಂದೆ ಕ್ರಿಕೆಟ್ ನ್ನು ತುಂಬಾ ಪ್ರೀತಿಸುತ್ತಿದ್ದರು. ಅವರು ನನ್ನನ್ನು ಅನೇಕ ಟೆಸ್ಟ್ ಪಂದ್ಯಗಳಿಗೂ, ರಣಜಿ ಪಂದ್ಯಗಳಿಗೂ ಕರೆದುಕೊಂಡು ಬರುತ್ತಿದ್ದರು. ಪ್ರತಿಯೊಂದು ಪಂದ್ಯದಲ್ಲೂ ಕನಿಷ್ಠ ಒಂದು ದಿನವಾದರೂ ಕ್ರಿಕೆಟ್ ನೋಡಲು ಕರೆತರುತ್ತಿದ್ದರು. ಇಂದು ಅವರ ಮಗನ ಹೆಸರಿನಲ್ಲಿ ಒಂದು ಸ್ಟ್ಯಾಂಡ್ ಇದೆ ಎಂಬುದನ್ನು ತಿಳಿದು ಅವರು ತುಂಬಾ ಹೆಮ್ಮೆಪಡುವರು ಎಂದು ಹೇಳಿದರು.
ಇನ್ನೊಂದೆಡೆ ಅನಿಲ್ ಕುಂಬ್ಳೆ, ಕರ್ನಾಟಕ ಕ್ರಿಕೆಟ್ನ ಯಶಸ್ಸು ಒಬ್ಬರ ಸಾಧನೆಯಲ್ಲ, ಎಲ್ಲರ ಸಮೂಹ ಪ್ರಯತ್ನದ ಫಲ ಎಂದು ಹೇಳಿದ್ದಾರೆ.
“ನಮ್ಮ ಎಲ್ಲರ ಕೊಡುಗೆಗಳಿಂದಲೇ ಕರ್ನಾಟಕ ಕ್ರಿಕೆಟ್ ಇಂದಿನ ಮಟ್ಟಕ್ಕೆ ಬಂದಿದೆ. ಹಾಗೆಯೇ ಕರ್ನಾಟಕ ಕ್ರಿಕೆಟ್ ಕೂಡ ನಮ್ಮನ್ನೆಲ್ಲ ರೂಪಿಸಿದೆ. ಯಾವ ಸ್ಟ್ಯಾಂಡ್ಗೆ ಯಾರ ಹೆಸರು ಎಂಬುದು ಮುಖ್ಯವಲ್ಲ. ಎಲ್ಲರ ಕೊಡುಗೆಗಳನ್ನು ಗುರುತಿಸಿ, ಅವನ್ನು ಶಾಶ್ವತವಾಗಿ ಈ ಕ್ರೀಡಾಂಗಣದಲ್ಲಿ ಅಚ್ಚು ಹಾಕಿರುವುದು ವಿಶೇಷ,” ಎಂದು ತಿಳಿಸಿದ್ದಾರೆ.
ಒಂಬತ್ತು ವರ್ಷದ ಬಾಲಕನಾಗಿ ಇಲ್ಲಿ ಪಂದ್ಯ ವೀಕ್ಷಿಸಲು ಬಂದ ನಾನು, ಈಗ ಪೆವಿಲಿಯನ್ ಮೇಲ್ಭಾಗದಲ್ಲಿ ನನ್ನ ಹೆಸರನ್ನು ನೋಡುವುದು ಅತ್ಯಂತ ವಿಶೇಷವಾಗಿದೆ... ಈ ಕ್ರೀಡಾಂಗಣವು ಅಂತಾರಾಷ್ಟ್ರೀಯ ವೇದಿಕೆಯಾಗಿ 50 ವರ್ಷಗಳನ್ನು ಆಚರಿಸುತ್ತಿರುವ ಸಂದರ್ಭದಲ್ಲಿ, ಇದರ ಪಯಣವೇ ಭಾರತೀಯ ಕ್ರಿಕೆಟ್ನ ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ ಎಂಬುದು ನನಗೆ ನೆನಪಾಗುತ್ತದೆ ಎಂದರು.