15 ವರ್ಷದ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ ಭಾರತದ ಹಿರಿಯ ಆಟಗಾರನಾಗಿ ತಂಡಕ್ಕೆ ಚೊಚ್ಚಲ ಪ್ರವೇಶ ನೀಡುವ ಕುರಿತು ಇದೀಗ ವ್ಯಾಪಕ ಚರ್ಚೆಯಾಗುತ್ತಿದೆ. ಇತ್ತೀಚೆಗಷ್ಟೇ ಮುಕ್ತಾಯವಾದ ಐರ್ಲೆಂಡ್ ವಿರುದ್ಧದ ಸರಣಿ ಮತ್ತು ಸದ್ಯ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಟಿ20ಐಗಳಿಗೆ ವೈಭವ್ ಭಾರತದ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಪಡೆದಿಲ್ಲ. ವೈಭವ್ ಸೂರ್ಯವಂಶಿ ಆಡಬೇಕೆ ಅಥವಾ ಬೇಡವೇ ಎಂಬುದರ ಕುರಿತು ತಜ್ಞರು ಮತ್ತು ಅಭಿಮಾನಿಗಳಲ್ಲಿ ಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಭಾರತದ ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಪಾರ್ಥಿವ್ ಪಟೇಲ್, ತಂಡದ ನಿರ್ವಹಣೆಯು ವೈಭವ್ ಸೂರ್ಯವಂಶಿ ಜೊತೆಗೆ ಸ್ಪಷ್ಟ ಮಾತುಕತೆ ನಡೆಸುವುದು ಹೆಚ್ಚು ಮುಖ್ಯ ಎಂದು ಹೇಳಿದ್ದಾರೆ.
ಗೌತಮ್ ಗಂಭೀರ್ ನೇತೃತ್ವದ ಟೀಂ ಇಂಡಿಯಾದ ಕೋಚಿಂಗ್ ಸಿಬ್ಬಂದಿ, ಸೂರ್ಯವಂಶಿಗೆ ಸರಿಯಾದ ಸಂದೇಶವನ್ನು ರವಾನಿಸುವುದು ಮುಖ್ಯ ಎಂದು ಪಾರ್ಥಿವ್ ಹೇಳಿದರು.
'ಈ ಸರಣಿಯಲ್ಲಿ (ಇಂಗ್ಲೆಂಡ್ ವಿರುದ್ಧ) ಯಾವುದಾದರೊಂದು ಹಂತದಲ್ಲಿ ವೈಭವ್ ಸೂರ್ಯವಂಶಿ ಖಂಡಿತವಾಗಿಯೂ ಅವಕಾಶ ಪಡೆಯಲಿದ್ದಾರೆ ಎಂದು ನನಗೆ ಅನ್ನಿಸುತ್ತದೆ. ಆದರೆ, ಸದ್ಯದ ಮಟ್ಟಿಗೆ ಪರಸ್ಪರ ಸಂವಹನವು ಅತ್ಯಂತ ಮುಖ್ಯವಾಗಿದೆ. ಕೋಚಿಂಗ್ ಸಿಬ್ಬಂದಿಯ ಭಾಗವಾಗಿದ್ದಾಗ, ಬ್ಯಾಟರ್ಗೆ ಸರಿಯಾದ ಸಂದೇಶಗಳನ್ನು ರವಾನಿಸುತ್ತಿರುವುದನ್ನು ಖಚಿತಪಡಿಸಿಕೊಳ್ಳಬೇಕಾಗುತ್ತದೆ' ಎಂದು ಪಾರ್ಥಿವ್ 'ಸ್ಟಾರ್ ಸ್ಪೋರ್ಟ್ಸ್'ನಲ್ಲಿ ಮಾತನಾಡುತ್ತಾ ಹೇಳಿದ್ದಾರೆ ಎಂದು 'ಸ್ಪೋರ್ಟ್ಸ್ಕೀಡಾ' ವರದಿ ಮಾಡಿದೆ.
'ನೀವು ಅವರನ್ನು ಆಡಿಸದಿದ್ದರೂ, ಆ ವಿಷಯವನ್ನು ಆತನಿಗೆ ಹೇಳಲೇಬೇಕು. ಆತ 15 ವರ್ಷದ ಬಾಲಕ. ನೀವು ಅವರೊಂದಿಗೆ ಎಚ್ಚರಿಕೆಯಿಂದ ಮಾತನಾಡಬೇಕು. ಅವರಿಗೆ ಸ್ವಲ್ಪ ತಾಳ್ಮೆಯನ್ನು ಕಲಿಸಬೇಕು' ಎಂದು ಅವರು ಹೇಳಿದರು.
ಭಾರತದ 2026ರ ಟಿ20 ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ ಮತ್ತು ಇಶಾನ್ ಕಿಶನ್ ತಂಡದಲ್ಲಿ ಸ್ಥಾನ ಪಡೆದಿದ್ದು, ಇದೀಗ ವೈಭವ್ ಸೂರ್ಯವಂಶಿ ಅವಕಾಶಕ್ಕಾಗಿ ಕಾಯುತ್ತಿದ್ದಾರೆ.
'ಸಂಜು ಸ್ಯಾಮ್ಸನ್ ವಿಷಯಕ್ಕೆ ಬಂದರೆ, ಅವರು ವಿಶ್ವಕಪ್ನಲ್ಲಿ 'ಪ್ಲೇಯರ್ ಆಫ್ ದಿ ಸಿರೀಸ್' ಆಗಿದ್ದರು. ಇನ್ನು ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಮತ್ತು ಐಸಿಸಿ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿರುವ ಇಶಾನ್ ಕಿಶನ್ ಇದ್ದಾರೆ. ಅಭಿಷೇಕ್ ಶರ್ಮಾ ಎರಡನೇ ಸ್ಥಾನದಲ್ಲಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ತಂಡದಲ್ಲಿ ಅವಕಾಶವಿಲ್ಲ ಮತ್ತು ಈ ವಿಷಯವನ್ನು ವೈಭವ್ ಸೂರ್ಯವಂಶಿ ಅವರಿಗೆ ಸ್ಪಷ್ಟವಾಗಿ ಮನವರಿಕೆ ಮಾಡಿಕೊಡಬೇಕಿದೆ' ಎಂದರು.
ಐರ್ಲೆಂಡ್ ವಿರುದ್ಧದ ಟಿ20ಐ ಸರಣಿಯಲ್ಲಿ ಭಾರತವು ಅನಿರೀಕ್ಷಿತವಾಗಿ 0-2 ಅಂತರದ ಸೋಲನ್ನು ಅನುಭವಿಸಿತು; ಈ ಸರಣಿಯಲ್ಲಿ ಸೂರ್ಯವಂಶಿ ಆಡಿರಲಿಲ್ಲ. ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟಿ20ಐ ಪಂದ್ಯವು ಮಳೆಯ ಕಾರಣದಿಂದಾಗಿ ಅರ್ಧದಲ್ಲೇ ರದ್ದುಗೊಂಡಿತು.