ಚೆನ್ನೈ: ಭಾರತದ ಮಾಜಿ ಕ್ರಿಕೆಟಿಗ ಮುರಳಿ ವಿಜಯ್ ತುಂಬಿದ ವೇದಿಕೆಯಲ್ಲಿ ತನ್ನ ಆತ್ಮೀಯ ಗೆಳೆಯ ದಿನೇಶ್ ಕಾರ್ತಿಕ್ ರನ್ನು ನೆನೆದು ಕಣ್ಣೀರು ಹಾಕಿದ ಘಟನೆ ನಡೆದಿದೆ.
ಹೌದು.. ಇತ್ತೀಚೆಗೆ ನಡೆದ ತಮಿಳುನಾಡು ಕ್ರಿಕೆಟ್ ಸಂಸ್ಥೆಯ ಸಾರ್ವಜನಿಕ ಸಮಾರಂಭವೊಂದರಲ್ಲಿ ಮುರಳಿ ವಿಜಯ್ ಅವರು ದಿನೇಶ್ ಕಾರ್ತಿಕ್ ಅವರನ್ನು "ನನ್ನ ಆತ್ಮೀಯ ಗೆಳೆಯ" ಎಂದು ಕರೆಯುವ ಮೂಲಕ ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸಿದ್ದಾರೆ. ಅವರ ಹೃದಯಸ್ಪರ್ಶಿ ಮಾತುಗಳಿಗೆ ನೆರೆದಿದ್ದವರು ಭಾರೀ ಚಪ್ಪಾಳೆ ತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಮಾತನಾಡುತ್ತಿದ್ದ ವೇಳೆ ಭಾವೋದ್ವೇಗಕ್ಕೊಳಗಾದ ಮುರಳಿ ವಿಜಯ್, ಭಾರತೀಯ ಕ್ರಿಕೆಟ್ಗೆ ದಿನೇಶ್ ಕಾರ್ತಿಕ್ ಮತ್ತು ಅಶ್ವಿನ್ ನೀಡಿರುವ ಅಪಾರ ಕೊಡುಗೆಯನ್ನು ಕೊಂಡಾಡಿದರು. ಅವರ ಸಮರ್ಪಣೆ, ಹೋರಾಟದ ಮನೋಭಾವ ಮತ್ತು ಆಟದ ಮೇಲಿನ ಬದ್ಧತೆ ಅನೇಕ ಯುವ ಕ್ರಿಕೆಟಿಗರಿಗೆ ಸ್ಫೂರ್ತಿಯಾಗಿದೆ ಎಂದು ಹೇಳಿದರು.
ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮುರಳಿ ವಿಜಯ್ ಅವರ ಪ್ರಾಮಾಣಿಕ ಭಾವನೆಗಳನ್ನು ಅಭಿಮಾನಿಗಳು ಶ್ಲಾಘಿಸಿದ್ದಾರೆ. ತಮಿಳುನಾಡಿನ ಕ್ರಿಕೆಟ್ನ ಮೂವರು ಪ್ರಮುಖ ಆಟಗಾರರಾದ ಮುರಳಿ ವಿಜಯ್, ದಿನೇಶ್ ಕಾರ್ತಿಕ್ ಮತ್ತು ರವಿಚಂದ್ರನ್ ಅಶ್ವಿನ್ ನಡುವಿನ ಗಾಢ ಸ್ನೇಹವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.
ನನ್ನ ಆತ್ಮೀಯ, ಅದ್ಭುತ ಗೆಳೆಯ
ಮೈದಾನದ ಹೊರಗೂ ಅವರೊಂದಿಗೆ ಬೆಸೆದುಕೊಂಡಿದ್ದ ಆತ್ಮೀಯ ಬಾಂಧವ್ಯದ ಬಗ್ಗೆ ಮಾತನಾಡಿದ ಮುರಳಿ ವಿಜಯ್, "ದಿನೇಶ್ ಕಾರ್ತಿಕ್ ಮತ್ತು ಅಶ್ವಿನ್ ಕೇವಲ ನನ್ನ ಸಹ ಆಟಗಾರರಲ್ಲ, ಜೀವನದ ಪ್ರತಿಯೊಂದು ಹಂತದಲ್ಲೂ ಜೊತೆಯಾಗಿ ನಿಂತ ಸಹೋದರರಂತವರು" ಎಂದು ಭಾವುಕರಾಗಿ ಹೇಳಿದರು.
ದೀರ್ಘಕಾಲದ ಸ್ನೇಹ ಮತ್ತು ಒಡನಾಟವನ್ನು ನೆನಪಿಸಿಕೊಂಡ ಮುರಳಿ ವಿಜಯ್, ತಮಿಳುನಾಡು ಹಾಗೂ ಭಾರತ ತಂಡದ ಪರ ಒಟ್ಟಾಗಿ ಆಡಿದ ದಿನಗಳಲ್ಲಿ ದಿನೇಶ್ ಕಾರ್ತಿಕ್ ಮತ್ತು ಅಶ್ವಿನ್ ಅವರೊಂದಿಗೆ ಹಂಚಿಕೊಂಡ ಸವಾಲುಗಳು, ತ್ಯಾಗಗಳು ಹಾಗೂ ಮರೆಯಲಾಗದ ಕ್ಷಣಗಳನ್ನು ಸ್ಮರಿಸಿದರು.
“ದಿನೇಶ್ ಕಾರ್ತಿಕ್ ಬಗ್ಗೆ ನಾನು ಇಲ್ಲಿ ಮಾತನಾಡುವುದು ಕೆಲವರಿಗೆ ಸ್ವಲ್ಪ ವಿಚಿತ್ರ ಎನಿಸಬಹುದು. ಆದರೆ ನಾನು ಅವರನ್ನು ನನ್ನ ಬಾಲ್ಯದಿಂದಲೂ ಬಲ್ಲೆ. ಅವರು ಅತ್ಯಂತ ಅದ್ಭುತ ವ್ಯಕ್ತಿತ್ವ ಹೊಂದಿರುವ ನನ್ನ ಅತ್ಯಂತ ಆತ್ಮೀಯ ಗೆಳೆಯ.
ಕಾರ್ತಿಕ್ ಅವರ ಅದ್ಭುತ ಕ್ರಿಕೆಟ್ ಜ್ಞಾನದಿಂದ ನನಗೆ ವೈಯಕ್ತಿಕವಾಗಿ ಸಾಕಷ್ಟು ಸಹಾಯವಾಗಿದೆ. ಅದಕ್ಕಾಗಿ ನಾನು ಅವರಿಗೆ ಸದಾ ಧನ್ಯವಾದ ಅರ್ಪಿಸುತ್ತೇನೆ. ದಿನೇಶ್ ಕಾರ್ತಿಕ್ ಅವರ ಶೈಲಿಯಲ್ಲಿ ಆಡುವುದನ್ನು ನಾನು ಇದುವರೆಗೆ ಬೇರೆ ಯಾವೊಬ್ಬ ಆಟಗಾರನಲ್ಲೂ ನೋಡಿಲ್ಲ” ಎಂದು ಮುರಳಿ ವಿಜಯ್ ಗುಣಗಾನ ಮಾಡಿದರು.
ಆಪ್ತ ಗೆಳೆಯರು ದೂರಾಗಿದ್ದೇಕೆ?
ತಮಿಳುನಾಡು ದೇಶಿ ಕ್ರಿಕೆಟ್ ತಂಡದಲ್ಲಿ ಒಟ್ಟಿಗೆ ಬೆಳೆದ ಇವರಿಬ್ಬರು ಆತ್ಮೀಯ ಸ್ನೇಹಿತರಾಗಿದ್ದರು. ಆದರೆ, 2012ರ ಆಸುಪಾಸಿನಲ್ಲಿ ದಿನೇಶ್ ಕಾರ್ತಿಕ್ ಅವರ ಮೊದಲ ಪತ್ನಿ ನಿಕಿತಾ ಮತ್ತು ಮುರಳಿ ವಿಜಯ್ ನಡುವೆ ಪ್ರೇಮ ಸಂಬಂಧ ಏರ್ಪಟ್ಟಿತ್ತು.
ಈ ವಿಷಯ ತಿಳಿದ ತಕ್ಷಣ ದಿನೇಶ್ ಕಾರ್ತಿಕ್ ಅವರು ನಿಕಿತಾ ಅವರಿಗೆ ವಿಚ್ಛೇದನ ನೀಡಿದರು. ಆ ನಂತರ ನಿಕಿತಾ ಮತ್ತು ಮುರಳಿ ವಿಜಯ್ ವಿವಾಹವಾದರು.
ಈ ಘಟನೆಯ ಬಳಿಕ ಇಬ್ಬರ ನಡುವಿನ ದಶಕಗಳ ಸ್ನೇಹ ಸಂಪೂರ್ಣವಾಗಿ ಮುರಿದು ಬಿದ್ದಿತ್ತು. ಇದಾದ ನಂತರ ಇಬ್ಬರೂ ಭಾರತ ತಂಡದಲ್ಲಿದ್ದಾಗಲೂ ಪರಸ್ಪರ ಮಾತನಾಡುತ್ತಿರಲಿಲ್ಲ.
ಬಳಿಕ ದಿನೇಶ್ ಕಾರ್ತಿಕ್ ಅವರು ಭಾರತದ ಖ್ಯಾತ ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಳ್ಳಿಕಲ್ ಅವರನ್ನು ವಿವಾಹವಾಗಿ ಸುಖಿ ಸಂಸಾರ ನಡೆಸುತ್ತಿದ್ದಾರೆ. 2024 ರಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್ಗೆ ವಿದಾಯ ಹೇಳಿರುವ ದಿನೇಶ್ ಕಾರ್ತಿಕ್, ಪ್ರಸ್ತುತ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಬ್ಯಾಟಿಂಗ್ ಕೋಚ್ ಹಾಗೂ ಮೆಂಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅಂದಹಾಗೆ ಮುರಳಿ ವಿಜಯ್, ದಿನೇಶ್ ಕಾರ್ತಿಕ್ ಮತ್ತು ರವಿಚಂದ್ರನ್ ಅಶ್ವಿನ್ ಹಲವು ವರ್ಷಗಳ ಕಾಲ ತಮಿಳುನಾಡು ತಂಡದ ಜೊತೆಗೆ ಭಾರತ ತಂಡವನ್ನೂ ಪ್ರತಿನಿಧಿಸಿದ್ದು, ರಾಜ್ಯದ ಅತ್ಯಂತ ಯಶಸ್ವಿ ಕ್ರಿಕೆಟಿಗರಲ್ಲಿ ಪ್ರಮುಖರಾಗಿದ್ದಾರೆ.