ಇಂಗ್ಲೆಂಡ್ ವಿರುದ್ಧದ ಕಳೆದ ಎರಡು ಟಿ20 ಪಂದ್ಯಗಳಲ್ಲಿ ಸಂಜು ಸ್ಯಾಮ್ಸನ್ ಅವರನ್ನು ಆಡುವ ಹನ್ನೊಂದರ ಬಳಗದಿಂದ ಹೊರಗಿಡಲು ಫಿಟ್ನೆಸ್ ಕಾರಣ ಹೊರತು ಫಾರ್ಮ್ ಅಲ್ಲ ಎಂದು ಭಾರತದ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಅಭಿಪ್ರಾಯಪಟ್ಟಿದ್ದಾರೆ.
ಸತತ ಮೂರು ಪಂದ್ಯಗಳಲ್ಲಿ ಒಂದೇ ಅಂಕಿಯ ಸ್ಕೋರ್ಗಳನ್ನು ದಾಖಲಿಸಿದ ನಂತರ ಕೇರಳದ ಕೀಪರ್-ಬ್ಯಾಟರ್ ಅನ್ನು ಭಾರತದ ಕ್ರಿಕೆಟ್ ತಂಡದ ಪ್ಲೇಯಿಂಗ್ ಇಲೆವೆನ್ನಿಂದ ಕೈಬಿಡಲಾಯಿತು. ಫಾರ್ಮ್ನಲ್ಲಿನ ಕುಸಿತದಿಂದಾಗಿ ಸಂಜು ಅವರನ್ನು ಕೈಬಿಡಲಾಗಿದೆ ಎಂಬ ಅಭಿಪ್ರಾಯಕ್ಕೆ ವಿರುದ್ಧವಾಗಿ, ಮಂಜ್ರೇಕರ್ ಆರಂಭಿಕ ಆಟಗಾರನಿಗೆ ತಮ್ಮ ಫಿಟ್ನೆಸ್ನತ್ತ ಗಮನಹರಿಸುವಂತೆ ಸಲಹೆ ನೀಡಿದ್ದಾರೆ.
ಸಾಮಾಜಿಕ ಮಾಧ್ಯಮ ವೇದಿಕೆ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಸಂಜಯ್ ಮಂಜ್ರೇಕರ್, ಸ್ಯಾಮ್ಸನ್ ತಮ್ಮ ವೃತ್ತಿಜೀವನದ ಈ ಹಂತದಲ್ಲಿ ವಿರಾಟ್ ಕೊಹ್ಲಿಯನ್ನು ಮಾದರಿಯಾಗಿ ಇಟ್ಟುಕೊಳ್ಳಬೇಕು' ಎಂದು ಹೇಳಿದ್ದಾರೆ.
'ಸ್ಯಾಮ್ಸನ್ ಅವರನ್ನು ಕೈಬಿಡಲು ಇರುವ ಏಕೈಕ ಸಮಂಜಸವಾದ ಕಾರಣವೆಂದರೆ ಅವರ ದೈಹಿಕ ಕ್ಷಮತೆ. ಅದೇ ಕಾರಣವಾಗಿದ್ದರೆ, ಅದು ಸರಿಯಾದ ನಿರ್ಧಾರವೇ ಸರಿ. ಅತ್ಯುತ್ತಮ ದೈಹಿಕ ಸ್ಥಿತಿಯಲ್ಲಿ ಇಲ್ಲದಿರುವುದು ಸ್ಯಾಮ್ಸನ್ ಅವರಿಗೆ ಮುಳುವಾಗುತ್ತಿದೆ. ತಮ್ಮ ವೃತ್ತಿಜೀವನದ ಈ ಹಂತದಲ್ಲಿ, ಸ್ಯಾಮ್ಸನ್ ವಿರಾಟ್ ಅವರನ್ನು ತಮ್ಮ ಆದರ್ಶವನ್ನಾಗಿಟ್ಟುಕೊಳ್ಳಬೇಕು' ಎಂದು ಮಂಜ್ರೇಕರ್ ಬರೆದಿದ್ದಾರೆ.
ಸಂಜು ಅವರ ಫಿಟ್ನೆಸ್ ಟೀಕೆಗೆ ಗುರಿಯಾಗಿರುವುದು ಬಹುಶಃ ಇದೇ ಮೊದಲು. ಈಮಧ್ಯೆ, ಸ್ಯಾಮ್ಸನ್ ಅವರ ಫಾರ್ಮ್ ಕಾರಣದಿಂದಾಗಿ ಅವರನ್ನು ಕೈಬಿಡಲಾಗಿದೆ ಎಂದು ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ತಿಳಿಸಿದ್ದಾರೆ. ಇಂಗ್ಲೆಂಡ್ vs ಭಾರತ 2ನೇ ಮತ್ತು 3ನೇ ಟಿ20ಐನಲ್ಲಿ ಪ್ಲೇಯಿಂಗ್ XIನಿಂದ ಅವರನ್ನು ಕೈಬಿಟ್ಟಿರುವ ಬಗ್ಗೆ ಆರಂಭಿಕ ಆಟಗಾರನಿಗೆ ಸ್ಪಷ್ಟಪಡಿಸಲಾಗಿದೆ ಎಂದು ಹೇಳಿದರು.
ಸ್ಯಾಮ್ಸನ್ ತಮ್ಮ ಟಿ20ಐ ವೃತ್ತಿಜೀವನದಲ್ಲಿ ನಿರಂತರವಾಗಿ ಸ್ಥಿರತೆಯನ್ನು ಕಾಯ್ದುಕೊಳ್ಳುವಲ್ಲಿ ಎಡವಿದ್ದಾರೆ. ಈ ವರ್ಷದ ಆರಂಭದಲ್ಲಿ, ಅವರು ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿದರು. 5 ಪಂದ್ಯಗಳಲ್ಲಿ 46 ರನ್ ಗಳಿಸಿದರು. ನಂತರ ಅವರು ಭಾರತದ ಟಿ20 ವಿಶ್ವಕಪ್ 2026ರ ಹೀರೋ ಆದರು, ನಾಕೌಟ್ ಹಂತಗಳಲ್ಲಿ 97*, 89 ಮತ್ತು 89 ರನ್ ಗಳಿಸಿದರು. ಅವರನ್ನು ಪ್ಲೇಯರ್ ಆಫ್ ದ ಟೂರ್ನಮೆಂಟ್ ಎಂದು ಹೆಸರಿಸಲಾಯಿತು. ನಂತರ, ಐಪಿಎಲ್ 2026ರಲ್ಲಿ ಸ್ಯಾಮ್ಸನ್ 14 ಪಂದ್ಯಗಳಲ್ಲಿ 477 ರನ್ ಗಳಿಸಿದರು. ಅವರನ್ನು ತಂಡದಿಂದ ಕೈಬಿಡುವ ಮೊದಲು ಅವರು ಐರ್ಲೆಂಡ್ ವಿರುದ್ಧ 0 ಮತ್ತು 5 ಮತ್ತು ಇಂಗ್ಲೆಂಡ್ ವಿರುದ್ಧ 1 ರನ್ ಗಳಿಸಿದರು.