ಮುಂಬೈ: ತಮ್ಮ ಭವಿಷ್ಯದ ಬಗ್ಗೆ ಇರುವ ಊಹಾಪೋಹಗಳನ್ನು ತಳ್ಳಿಹಾಕಿದ ಭಾರತದ ಅನುಭವಿ ಬ್ಯಾಟ್ಸ್ಮನ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಾಯಕ ಅಜಿಂಕ್ಯ ರಹಾನೆ, ತಾವು ವೈಯಕ್ತಿಕ ಬೆಳವಣಿಗೆಗಾಗಿ ಕ್ರಿಕೆಟ್ ಆಡುತ್ತಿದ್ದೇನೆಯೇ ಹೊರತು ಟೀಕೆ ಮಾಡುವವರಿಗೆ ನಾನು ಏನೆಂದು ಪ್ರೂವ್ ಮಾಡಲು ಅಲ್ಲ ಎಂದು ಹೇಳಿದ್ದಾರೆ.
37 ವರ್ಷದ ರಹಾನೆ ಕಳೆದ ಆವೃತ್ತಿಯಲ್ಲಿ ಮುಂಬೈನ ರಣಜಿ ಟ್ರೋಫಿ ನಾಯಕತ್ವದಿಂದ ಕೆಳಗಿಳಿದಿದ್ದರು. ಈ ನಡೆಯು 2023 ರಿಂದ ಭಾರತ ಪರ ಆಡದ ಆಟಗಾರನ ಭವಿಷ್ಯದ ಬಗ್ಗೆ ಮತ್ತೊಮ್ಮೆ ಚರ್ಚೆಗೆ ಕಾರಣವಾಯಿತು.
'ಜನರು ನನ್ನ ಬಗ್ಗೆ ಮಾತನಾಡಲಿ. ಅವರು 20 ವರ್ಷಗಳಿಂದ ನನ್ನ ಬಗ್ಗೆ ಮಾತನಾಡುತ್ತಿದ್ದಾರೆ. ಅವರು ಮಾತನಾಡಲಿ' ಎಂದು ಭಾನುವಾರ ಮುಂಬೈ ಇಂಡಿಯನ್ಸ್ ವಿರುದ್ಧ ಐದು ಸಿಕ್ಸರ್ ಮತ್ತು ಮೂರು ಬೌಂಡರಿಗಳೊಂದಿಗೆ 40 ಎಸೆತಗಳಲ್ಲಿ 67 ರನ್ ಗಳಿಸಿದ ರಹಾನೆ ಹೇಳಿದರು.
'ನಾನು ಈಗ ಬ್ಯಾಟಿಂಗ್ ಮಾಡುತ್ತಿರುವ ರೀತಿ ನಿಜಕ್ಕೂ ಸಂತೋಷ ತಂದಿದೆ. ನಾನು ಎಷ್ಟು ಪ್ರತಿಭಾನ್ವಿತನೆಂದು ಮತ್ತು ನನ್ನ ಆಟ ಏನೆಂದು ಯಾರಿಗೋ ತೋರಿಸುವುದಕ್ಕಾಗಿ ನಾನು ಇಲ್ಲಿಲ್ಲ. ಜನರು ನೋಡುತ್ತಿದ್ದಾರೆ. ಅವರು ನೋಡಲಿ. ಅವರು ಮಾತನಾಡಲಿ' ಎಂದರು.
'ಆದರೆ, ಕಳೆದ 2-3 ವರ್ಷಗಳಲ್ಲಿ (ವೈಟ್ ಬಾಲ್ ಸ್ವರೂಪಗಳಲ್ಲಿ) ನನ್ನ ಆಟವನ್ನು ಸುಧಾರಿಸಿದ್ದಕ್ಕೆ ನನಗೆ ನಿಜವಾಗಿಯೂ ಸಂತೋಷವಾಗಿದೆ. ಕ್ರಿಕೆಟಿಗನಾಗಿ, ಬ್ಯಾಟ್ಸ್ಮನ್ ಆಗಿ ಬೆಳೆಯುವುದು ಮುಖ್ಯ ಮತ್ತು ನಾನು ಅದನ್ನೇ ಮಾಡಲು ಪ್ರಯತ್ನಿಸುತ್ತಿದ್ದೇನೆ. ಜನರು ಮಾತನಾಡುತ್ತಲೇ ಇರುತ್ತಾರೆ ಮತ್ತು ಅವರನ್ನು ಮಾತನಾಡಲು ಬಿಡಬೇಕು' ಎಂದು ಅವರು ಹೇಳಿದರು.
'ಪಂದ್ಯದ ದ್ವಿತೀಯಾರ್ಧದಲ್ಲಿ ಮಾತ್ರ ನನಗೆ ಸೆಳೆತವಿತ್ತು. ಸೆಳೆತದೊಂದಿಗೆ ಹೊರಗೆ ಕುಳಿತುಕೊಳ್ಳುವುದು ತುಂಬಾ ಕೆಟ್ಟ ಭಾವನೆ ಮತ್ತು ಬೌಲರ್ಗಳು ಬೌಲಿಂಗ್ ಮಾಡುವಾಗ ನಿಮಗೆ ಯಾವುದೇ ನಿಯಂತ್ರಣವಿರುವುದಿಲ್ಲ. ಅದು ಕೆಟ್ಟ ಭಾವನೆ ಆದರೆ, ಮೊದಲು ನಾನು ಬ್ಯಾಟಿಂಗ್ ಮಾಡಿದ ರೀತಿ ನನಗೆ ನಿಜವಾಗಿಯೂ ಸಂತೋಷವಾಗಿದೆ' ಎಂದು ಹೇಳಿದರು.
'ಆರಂಭದಲ್ಲಿ ನಾವೆಲ್ಲರೂ 220 (220/4) ಉತ್ತಮ ಮೊತ್ತ ಎಂದು ಭಾವಿಸಿದ್ದೆವು. ನಾವು 235-240ರ ಆಸುಪಾಸಿನಲ್ಲಿ ಇರುತ್ತಿದ್ದೆವು. ಆದರೆ, ಬುಮ್ರಾ ಅವರ ಆ ಎರಡು ಓವರ್ಗಳು ಬಹಳಷ್ಟು ವ್ಯತ್ಯಾಸವನ್ನುಂಟುಮಾಡಿದವು. ಅವರು ಏಕೆ ಉತ್ತಮ ಬೌಲರ್ ಎಂದು ನಿಮಗೆ ತಿಳಿದಿದೆ' ಎಂದು ರಹಾನೆ ಹೇಳಿದರು.
ಕೆಕೆಆರ್ ತಂಡದ ಅನನುಭವಿ ಬೌಲಿಂಗ್ ದಾಳಿಯನ್ನು ಸುಧಾರಿಸಲು ಸಮಯ ಬೇಕಾಗುತ್ತದೆ. ಆದರೆ, ಆಸ್ಟ್ರೇಲಿಯಾದ ಆಲ್ರೌಂಡರ್ ಕ್ಯಾಮರೂನ್ ಗ್ರೀನ್ ಬೌಲಿಂಗ್ ಮಾಡಲು ಲಭ್ಯವಾದಾಗ ಮಾತ್ರ ತಂಡದ ಸಂಯೋಜನೆ ಬದಲಾಗುತ್ತದೆ. ನಮ್ಮ ಬೌಲಿಂಗ್ ದಾಳಿಯಲ್ಲಿ, ಹುಡುಗರು ನಿಜವಾಗಿಯೂ ಅನನುಭವಿ. ಕಳೆದ ವರ್ಷ ಉತ್ತಮವಾಗಿ ಕಾರ್ಯನಿರ್ವಹಿಸಿದ ವೈಭವ್ ಅರೋರಾ, ಅವರು ವಾಸ್ತವವಾಗಿ ದಾಳಿಯನ್ನು ಮುನ್ನಡೆಸುತ್ತಿದ್ದಾರೆ ಮತ್ತು ನಂತರ ನಮಗೆ ಕಾರ್ತಿಕ್ ತ್ಯಾಗಿ ಮತ್ತು ಬ್ಲೆಸ್ಸಿಂಗ್ ಮುಜರಬಾನಿ ಇದ್ದಾರೆ. ಆದರೂ, ಅವರು ಅಂತರರಾಷ್ಟ್ರೀಯ ಕ್ರಿಕೆಟ್ ಆಡಿದ್ದಾರೆ. ಆದರೆ ಐಪಿಎಲ್ ಅನುಭವವು ಸಂಪೂರ್ಣವಾಗಿ ವಿಭಿನ್ನವಾಗಿದೆ ಎಂದರು.
ಗ್ರೀನ್ ಈಗ ಬೆನ್ನುನೋವಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.
'ಭಾರತದ ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಮೈದಾನದಲ್ಲಿ ಮತ್ತೊಂದು ಕಠಿಣ ದಿನವನ್ನು ಎದುರಿಸಿದರು. ಈ ಬಗ್ಗೆ ಹೆಚ್ಚು ಯೋಚಿಸದಿರುವುದು ಅವರಿಗೆ ಮುಖ್ಯವಾಗಿದೆ. ಪ್ರತಿಯೊಬ್ಬ ಆಟಗಾರನೂ ಈ ಹಂತವನ್ನು ದಾಟುತ್ತಾನೆ. ಅವರ ವರ್ತನೆ ಸಂಪೂರ್ಣವಾಗಿ ಸರಿಯಾಗಿದೆ; ಬಹುಶಃ ಎದುರಾಳಿ ತಂಡದ ಬ್ಯಾಟ್ಸ್ಮನ್ಗಳು ಅವರ ಮೇಲೆ ನಿಜವಾಗಿಯೂ ಚೆನ್ನಾಗಿ ಆಡುತ್ತಿದ್ದಾರೆ. ಹೆಚ್ಚಿನ ತೀವ್ರತೆಯ ಟೂರ್ನಮೆಂಟ್ನಿಂದ ಮತ್ತೊಂದು ಹೆಚ್ಚಿನ ತೀವ್ರತೆಯ ಟೂರ್ನಮೆಂಟ್ಗೆ ಬರುವುದು, ಯಾವುದೇ ಕ್ರಿಕೆಟಿಗನಿಗೆ ಮಾನಸಿಕವಾಗಿ ಸವಾಲಿನ ಸಂಗತಿ. ನಾನು ಹೇಳುವುದೇನೆಂದರೆ, ಈಗ ಏನಾಗುತ್ತಿದೆ ಎಂಬುದರ ಬಗ್ಗೆ ಅವರು ಹೆಚ್ಚು ಯೋಚಿಸಬಾರದು' ಎಂದು ಕೆಲವು ವಾರಗಳ ಹಿಂದಿನ ಟಿ20 ವಿಶ್ವಕಪ್ ಅಭಿಯಾನವನ್ನು ಅವರು ಉಲ್ಲೇಖಿಸಿದರು.