ಧರ್ಮಶಾಲಾ: ನಿರೀಕ್ಷೆಯಂತೆಯೇ ಪಂಜಾಬ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ ಜಯಗಳಿಸಿ ಪ್ಲೇಆಫ್ ಗೆ ಲಗ್ಗೆ ಇಟ್ಟಿದೆ.
ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಮೈದಾನದಲ್ಲಿ ಭಾನುವಾರ ನಡೆದ ಲೀಗ್ ಹಂತದ ಪಂದ್ಯದಲ್ಲಿ ಬೆಂಗಳೂರು ತಂಡ ಪಂಜಾಬ್ ತಂಡವನ್ನು 23 ರನ್ ಗಳ ಅಂತರದಲ್ಲಿ ಮಣಿಸಿ ಐಪಿಎಲ್ 2026 ಟೂರ್ನಿಯ ಪ್ಲೇಆಫ್ ಗೆ ಲಗ್ಗೆ ಇಟ್ಟಿದೆ.
ಅಲ್ಲದೆ ಹಾಲಿ ಟೂರ್ನಿಯಲ್ಲಿ ಪ್ಲೇಆಫ್ ಗೇರಿದ ಮೊದಲ ತಂಡ ಎಂಬ ಕೀರ್ತಿಗೂ ಆರ್ ಸಿಬಿ ಭಾಜನವಾಗಿದೆ.
ಬೆಂಗಳೂರು ತಂಡ ನೀಡಿದ್ದ 223 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಪಂಜಾಬ್ ತಂಡ 20 ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ 199 ರನ್ ಗಳಿಸಿ 23 ರನ್ ಗಳ ಅಂತರದ ಹೀನಾಯ ಸೋಲುಕಂಡಿತು.
ಪಂಜಾಬ್ ಪರ ಕೋಪರ್ ಕೊನೋಲಿ (37), ಸೂರ್ಯಾಂಷ್ ಷೆಡ್ಗೆ (35), ಮಾರ್ಕಸ್ ಸ್ಟಾಯ್ನಿಸ್ (37) ಮತ್ತು ಶಶಾಂಕ್ ಸಿಂಗ್ (56) ಗೆಲುವಿಗಾಗಿ ಶತಪ್ರಯತ್ನ ಪಟ್ಟರಾದರೂ ಪಂಜಾಬ್ ತಂಡವನ್ನು ಗೆಲುವಿನ ದಡ ಸೇರಿಸಲಾಗಲಿಲ್ಲ.
ಆರ್ ಸಿಬಿ ಪರ ರಸಿಕ್ ಸಲಾಂ ಧಾರ್ 3 ವಿಕೆಟ್ ಪಡೆದರೆ, ಭುವನೇಶ್ವರ್ ಕುಮಾರ್ 2 ವಿಕೆಟ್ ಪಡೆದರು. ಅಂತೆಯೇ ಜಾಶ್ ಹೇಜಲ್ವುಡ್, ಸುಯಾಶ್ ಶರ್ಮಾ ಮತ್ತು ರೊಮಾರಿಯೋ ಶೆಫರ್ಡ್ ತಲಾ 1 ವಿಕೆಟ್ ಪಡೆದರು.
2 ಓವರ್ ನಲ್ಲಿ ಪಂಜಾಬ್ ಕಟ್ಟಿ ಹಾಕಿದ ಆರ್ ಸಿಬಿ
ಇಂದಿನ ಪಂದ್ಯದಲ್ಲಿ ಆರ್ ಸಿಬಿ ನೀಡಿದ್ದ 223 ರನ್ ಗಳ ಬೆನ್ನು ಹತ್ತಿದ ಪಂಜಾಬ್ ಕೊನೆಯ ಓವರ್ ವರೆಗೂ ಗೆಲುವಿಗಾಗಿ ಹೋರಾಡಿತು. ಆದರೆ ಅಂತಿಮ 2 ಓವರ್ ನಲ್ಲಿ ಪಂದ್ಯ ಆರ್ ಸಿಬಿಯತ್ತ ವಾಲಿತು. 19ನೇ ಓವರ್ ನಲ್ಲಿ ಪಂಜಾಬ್ ಗೆಲುವಿಗೆ 12 ಎಸೆತಗಳಲ್ಲಿ 40 ರನ್ ಗಳು ಬೇಕಿತ್ತು.
ಆದರೆ 19ನೇ ಓವರ್ ನಲ್ಲಿ ಜಾಶ್ ಹೇಜಲ್ವುಡ್ ಕೇವಲ 7 ರನ್ ಮಾತ್ರ ನೀಡಿ ಬಹುತೇಕ ಆರ್ ಸಿಬಿ ಗೆಲುವು ಖಚಿತಪಡಿಸಿದ್ದರು. ಅಂತಿಮ ಓವರ್ ನಲ್ಲಿ ಗೆಲ್ಲಲು 33 ರನ್ ಗಳ ಅವಶ್ಯಕತೆ ಇತ್ತು. ರಸಿಕ್ ಸಲಾಂ ಧರ್ ಆ ಓವರ್ ನಲ್ಲಿ 2 ವಿಕೆಟ್ ಪಡೆದು ಕೇವಲ 9 ರನ್ ಮಾತ್ರ ನೀಡಿದರು. ಹೀಗಾಗಿ ಆರ್ ಸಿಬಿ 23 ರನ್ ಗಳ ಅಂತರದಲ್ಲಿ ಗೆದ್ದು ಪ್ಲೇಆಫ್ ಗೆ ಲಗ್ಗೆ ಇಟ್ಟಿತು.
ಆರ್ ಸಿಬಿ ಭರ್ಜರಿ ಬ್ಯಾಟಿಂಗ್
ಇದಕ್ಕೂ ಮೊದಲು ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು ತಂಡ ನಿಗಧಿತ 20 ಓವರ್ 4 ವಿಕೆಟ್ ನಷ್ಟಕ್ಕೆ 222 ರನ್ ಕಲೆಹಾಕಿತು. ಆರ್ ಸಿಬಿ ಪರ ವಿರಾಟ್ ಕೊಹ್ಲಿ 58, ಜೇಕಬ್ ಬೆಥೆಲ್ 11, ದೇವದತ್ ಪಡಿಕ್ಕಲ್ 45, ಟಿಮ್ ಡೇವಿಡ್ 28 ಮತ್ತು ವೆಂಕಟೇಶ್ ಅಯ್ಯರ್ ಅಜೇಯ 73 ರನ್ ಪೇರಿಸಿ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು.
CSK ಆಸೆ ಜೀವಂತ
ಇನ್ನು ಇಂದಿನ ಆರ್ ಸಿಬಿ ತಂಡದ ಗೆಲುವು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಅನಿವಾರ್ಯವಾಗಿತ್ತು. ಸಿಎಸ್ ಕೆ ಪ್ಲೇಆಫ್ ರೇಸ್ ನಲ್ಲಿ ಜೀವಂತವಾಗಿರಲು ಇಂದಿನ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಸೋಲಲೇ ಬೇಕಿತ್ತು. ಆದರೆ ಇದೀಗ ಆರ್ ಸಿಬಿ ಗೆದ್ದಿದ್ದು, ಚೆನ್ನೈ ತಂಡದ ಪ್ಲೇ ಆಫ್ ಆಸೆ ಕೂಡ ಜೀವಂತವಾಗಿದೆ.