ಮಂಗಳವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ (LSG) ವಿರುದ್ಧ ತಮ್ಮ ತಂಡ ರೋಮಾಂಚಕ ಜಯ ಸಾಧಿಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ರಾಜಸ್ಥಾನ್ ರಾಯಲ್ಸ್ (RR) ತಂಡದ ನಾಯಕ ರಿಯಾನ್ ಪರಾಗ್ ಗರಂ ಆಗಿದ್ದರು. ಈ ಗೆಲುವಿನ ಮೂಲಕ ಪ್ಲೇಆಫ್ನಲ್ಲಿ ಸ್ಥಾನ ಪಡೆಯಲು ರಾಯಲ್ಸ್ ತಂಡಕ್ಕೆ ಉತ್ತೇಜನ ಸಿಕ್ಕಿದಂತಾಗಿದೆ. ತಂಡಕ್ಕೆ ಇದೀಗ ಇನ್ನೊಂದು ಗೆಲುವು ಮಾತ್ರ ಬೇಕಾಗಿದೆ. 38 ಎಸೆತಗಳಲ್ಲಿ 93 ರನ್ ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ತಂಡದ 15 ವರ್ಷದ ಪ್ರತಿಭೆ ವೈಭವ್ ಸೂರ್ಯವಂಶಿ ಅವರನ್ನು ಪರಾಗ್ ಹೊಗಳಿದರೂ, ತಮ್ಮ ವೈಯಕ್ತಿಕ ಜೀವನದ ಬಗ್ಗೆ ತಮ್ಮನ್ನು ಗುರಿಯಾಗಿಸಿಕೊಂಡಿರುವ ಐಪಿಎಲ್ ನಿರೂಪಕರಿಗೆ ಖಡಕ್ ಸಂದೇಶ ಕಳುಹಿಸಿದರು.
ಇತ್ತೀಚೆಗೆ 'ವೇಪಿಂಗ್ ವಿವಾದ'ದಲ್ಲಿ ಸಿಲುಕಿರುವ ಪರಾಗ್ ಅವರನ್ನು, ಅವರ ಬಗ್ಗೆ ಬರೆಯಲ್ಪಟ್ಟ ಅಥವಾ ಹೇಳಲಾದ ವಿಷಯಗಳನ್ನು ಹೇಗೆ ಎದುರಿಸಿದಿರಿ ಎಂದು ಕೇಳಲಾಯಿತು. ಏನೇ ಮಾಡಿದರೂ ಜನರು ಮಾತನಾಡುತ್ತಾರೆ. ಹೀಗಾಗಿ, ಯಾರು ಏನು ಹೇಳುತ್ತಾರೆ ಎಂಬುದರ ಕುರಿತು ತಲೆಕೆಡಿಸಿಕೊಳ್ಳದೆ ತಮ್ಮ ಕೆಲಸದ ಮೇಲೆ ಗಮನಹರಿಸುವುದು ಮುಖ್ಯ ಎಂದು ಹೇಳಿದರು.
'ಮೊದಲನೆಯದಾಗಿ, ನಾನು ಈಗ ಒಂದು ವಿಷಯವನ್ನು ಅರ್ಥಮಾಡಿಕೊಂಡಿದ್ದೇನೆ, ನಾನು ಏನೇ ಮಾಡಿದರೂ ಜನರು ಮಾತನಾಡುತ್ತಾರೆ. ನಾನು ಅದನ್ನೇ ಅರ್ಥಮಾಡಿಕೊಂಡಿದ್ದೇನೆ. ಎರಡನೆಯದಾಗಿ, ನನ್ನ ಬಗ್ಗೆ ಯಾವುದೇ ಮಾತು ಕೇಳಿಬರುತ್ತಿದ್ದರೂ, ಅದು ನನ್ನ ಆಟ, ನನ್ನ ರೂಪ ಅಥವಾ ನನ್ನ ಮನಸ್ಥಿತಿಯ ಮೇಲೆ ಪರಿಣಾಮ ಬೀರಬಾರದು ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಏಕೆಂದರೆ, ಅದು ಕೀಬೋರ್ಡ್ ಯೋಧರು ಮಾಡುವ ಹೊರಗಿನ ಕೆಲಸ ಮತ್ತು ಅದನ್ನು ಹೊರಗೆ ಬಿಡಬೇಕು. ನನ್ನ ಆಟದ ಬಗ್ಗೆ ನಾನು ಎಷ್ಟು ಯೋಚಿಸುತ್ತೇನೆ ಅಥವಾ ನನ್ನ ಆಟದ ಬಗ್ಗೆ ನನಗೆ ಎಷ್ಟು ನಂಬಿಕೆ ಇದೆಯೋ, ಅದನ್ನು ಅದು ಅತಿಕ್ರಮಿಸಬಾರದು ಎಂದು ನಾನು ಭಾವಿಸುತ್ತೇನೆ' ಎಂದರು.
'ಈ ವರ್ಷದ ಐಪಿಎಲ್ನಲ್ಲಿ ಏನೇ ನಡೆಯುತ್ತಿದ್ದರೂ, ಹೊರಗೆ ಬಹಳಷ್ಟು ವಿಷಯಗಳು ನಡೆಯುತ್ತಿವೆ. ಈ ಇಡೀ ದೇಶವು ಕ್ರಿಕೆಟ್ ಅನ್ನು ತುಂಬಾ ಪ್ರೀತಿಸುತ್ತದೆ ಎಂದು ನಾನು ಭಾವಿಸುತ್ತೇನೆ. ಆಟಗಾರರಾಗಿ, ನಾವು ಹೊರಗೆ ಹೋದಾಗಲೆಲ್ಲ ನಮ್ಮ ಅತ್ಯುತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುತ್ತೇವೆ. ಬಂದಿರುವ ಜನಸಮೂಹಕ್ಕಾಗಿ ಮತ್ತು ಅವರು ತರುವ ನಿರೀಕ್ಷೆಗಳಿಗಾಗಿ ಪ್ರದರ್ಶನ ನೀಡಲು ಬಯಸುತ್ತೇವೆ' ಎಂದು ಅವರು ಹೇಳಿದರು.
ಐಪಿಎಲ್ ತಜ್ಞರು ಮತ್ತು ಕಮೆಂಟೇಟರ್ಸ್ಗಳನ್ನು ತರಾಟೆಗೆ ತೆಗೆದುಕೊಂಡ ಅವರು, ಆಟಗಾರರು ತಪ್ಪುಗಳನ್ನು ಮಾಡುತ್ತಾರೆ ಮತ್ತು ಅದು ಸಂಪೂರ್ಣವಾಗಿ ಸಾಮಾನ್ಯ. ಆದಾಗ್ಯೂ, ಆಟಗಾರನ ವೈಯಕ್ತಿಕ ಜೀವನ ಅಥವಾ ಕ್ರಿಕೆಟ್ ಮೈದಾನದ ಹೊರಗಿನ ವಿಷಯಗಳ ಬಗ್ಗೆ ಕಾಮೆಂಟರಿ ಬಾಕ್ಸ್ನಲ್ಲಿ ಕುಳಿತವರು ಕಮೆಂಟ್ಗಳನ್ನು ಮಾಡುವುದು ಅದು ಬೌಂಡರಿಯನ್ನು ದಾಟಿದಂತೆ' ಎಂದು ವಾದಿಸಿದರು.
'ಆಟಗಾರರು ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ. ಒಂದು ತಂಡವು 75 ಅಥವಾ 80 ರನ್ಗಳಿಗೆ ಆಲೌಟ್ ಆದಾಗ ಅವರು ಆಡಲು ಬಯಸುವುದಿಲ್ಲ ಅಥವಾ ಹೇಗೆ ಆಡಬೇಕೆಂದು ತಿಳಿದಿಲ್ಲ ಎಂದು ಹೇಳುವುದು ತುಂಬಾ ಸುಲಭ. ಆ ಪಂದ್ಯಕ್ಕೂ ಮೊದಲು, ಮೂರು ಅಥವಾ ನಾಲ್ಕು ದಿನಗಳ ತಯಾರಿ ಇರಬೇಕು ಮತ್ತು 220 ಅಥವಾ 250 ರನ್ ಗಳಿಸುವುದು ಹೇಗೆ ಎಂಬುದರ ಕುರಿತು ತಯಾರಿ ಇರುತ್ತದೆ. ಆದರೆ, ಕೆಲವೊಮ್ಮೆ ಅದು ಸಂಭವಿಸುವುದಿಲ್ಲ. ನಾವು ಕೂಡ ಮನುಷ್ಯರು; ನಮ್ಮ ಕಡೆಯಿಂದಲೂ ತಪ್ಪುಗಳು ಸಂಭವಿಸುತ್ತವೆ' ಎಂದರು.
'ಹೊರಗೆ ಏನು ನಡೆಯುತ್ತಿದ್ದರೂ, ವಿಶೇಷವಾಗಿ ಕಮೆಂಟೇಟರ್ಸ್ ಅನ್ನು ಕ್ರಿಕೆಟ್ ಅನ್ನು ಪ್ರೀತಿಸಿ, ಕ್ರಿಕೆಟ್ ಬಗ್ಗೆ ಮಾತನಾಡಿ ಎಂದು ನಾನು ವಿನಂತಿಸುತ್ತೇನೆ ಮತ್ತು ದೇಶಕ್ಕೆ ಇದು ತುಂಬಾ ಮುಖ್ಯವಾದ ಕ್ರೀಡೆಯಾಗಿದೆ ಎಂದು ನಾನು ಭಾವಿಸುತ್ತೇನೆ. ಅದನ್ನು ಸ್ವಲ್ಪ ಗೌರವದಿಂದ ನಡೆಸಬೇಕು ಮತ್ತು ಕ್ರಿಕೆಟ್ ಬಗ್ಗೆ ಮಾತ್ರ ಮಾತನಾಡಬೇಕು, ಬೇರೇನೂ ಅಲ್ಲ ಎಂದು ನಾನು ಭಾವಿಸುತ್ತೇನೆ' ಎಂದು ಹೇಳಿದರು.
ಲಕ್ನೋ ವಿರುದ್ಧದ ಗೆಲುವು ರಾಜಸ್ಥಾನ್ ರಾಯಲ್ಸ್ ಅನ್ನು ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಕೊಂಡೊಯ್ದಿದೆ. ಅವರು ಈಗ ಆವೃತ್ತಿಯ ತಮ್ಮ ಕೊನೆಯ ಲೀಗ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದ್ದಾರೆ. ಮುಂಬೈ ವಿರುದ್ಧದ ಗೆಲುವು ಆರ್ಆರ್ಗೆ ಪ್ಲೇಆಫ್ನಲ್ಲಿ ಸ್ಥಾನ ಖಚಿತಪಡಿಸುತ್ತದೆ.