ನ್ಯೂ ಚಂಡೀಗಢ: ಐಪಿಎಲ್ 2026ರ ಕ್ವಾಲಿಫೈಯರ್-2 ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ 7 ವಿಕೆಟ್ ಅಂತರದಲ್ಲಿ ಸೋತು ಟೂರ್ನಿಯಿಂದಲೇ ಹೊರಬಿದ್ದಿರುವ ರಾಜಸ್ತಾನ ತಂಡದ ನಾಯಕ ರಿಯಾನ್ ಪರಾಗ್ ಟೂರ್ನಿಯ ಜರ್ನಿಕುರಿತು ಮನಬಿಚ್ಚಿ ಮಾತನಾಡಿದ್ದಾರೆ.
ನಿನ್ನೆ ನ್ಯೂ ಚಂಡೀಗಢದ ಮುಲ್ಲನ್ ಪುರ ಕ್ರೀಡಾಂಣದಲ್ಲಿ ನಡೆದ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್ ತಂಡವನ್ನು ಗುಜರಾತ್ ಟೈಟನ್ಸ್ ತಂಡ 7 ವಿಕೆಟ್ ಅಂತರದಲ್ಲಿ ಭರ್ಜರಿಯಾಗಿ ಮಣಿಸಿ ಐಪಿಎಲ್ ಟೂರ್ನಿಯ ಫೈನಲ್ ಗೇರಿತು.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ತಾನ ರಾಯಲ್ಸ್ ಪರ ಸ್ಫೋಟಕ ಬ್ಯಾಟರ್ ವೈಭವ್ ಸೂರ್ಯವಂಶಿ 47 ಎಸೆತಗಳಲ್ಲಿ 96 ರನ್ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಅವರ ಈ ಭರ್ಜರಿ ಇನ್ನಿಂಗ್ಸ್ ಭಾರತ ಹಿರಿಯ ತಂಡದಲ್ಲಿ ಅವಕಾಶ ನೀಡುವಂತೆ ಬಿಸಿಸಿಐ ಮೇಲೆ ಭಾರೀ ಒತ್ತಡ ತಂದಿದೆ. ಇನ್ನು ವೈಭವ್ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ರಾಜಸ್ತಾನ ತಂಡದ ನಾಯಕ ರಿಯಾನ್ ಪರಾಗ್ ಮನಬಿಚ್ಚಿ ಮಾತನಾಡಿದ್ದಾರೆ.
ಪ್ಲೇ ಆಫ್ ಗೆ ಅರ್ಹತೆ ಪಡೆಯುವ ಸಾಧ್ಯತೆಯೇ ಇರಲಿಲ್ಲ
ರಾಜಸ್ಥಾನ್ ರಾಯಲ್ಸ್ ನಾಯಕ ರಿಯಾನ್ ಪರಾಗ್, ತಂಡ ಐಪಿಎಲ್ 2026ರಿಂದ ಹೊರಬಿದ್ದರೂ ಹೆಮ್ಮೆಯಿಂದ ತಲೆ ಎತ್ತಿ ನಿಂತರು. ಶುಕ್ರವಾರ ನಡೆದ ಕ್ವಾಲಿಫೈಯರ್-2 ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಏಳು ವಿಕೆಟ್ಗಳ ಸೋಲು ಕಂಡಿತು.
ಇದಕ್ಕೂ ಮೊದಲು ವೈಭವ್ ಸೂರ್ಯವಂಶಿ 47 ಎಸೆತಗಳಲ್ಲಿ 96 ರನ್ಗಳ ಮತ್ತೊಂದು ಸಿಡಿಲಬ್ಬರದ ಇನ್ನಿಂಗ್ಸ್ ಆಡಿದ್ದರು. ಆದರೆ ಗುಜರಾತ್ ಟೈಟನ್ಸ್ ಪರ ಆರಂಭಿಕ ಬ್ಯಾಟರ್ಗಳಾದ ಶುಭಮನ್ ಗಿಲ್ ಮತ್ತು ಸಾಯಿ ಸುದರ್ಶನ್ 167 ರನ್ಗಳ ಭರ್ಜರಿ ಆರಂಭಿಕ ಜೊತೆಯಾಟ ನಿರ್ಮಿಸಿ ತಂಡವನ್ನು ಫೈನಲ್ಗೆ ಕೊಂಡೊಯ್ದರು.
ಪಂದ್ಯದ ಬಳಿಕ ಮಾತನಾಡಿದ ಪರಾಗ್, ತಮ್ಮ ತಂಡ ಪ್ಲೇಆಫ್ಗೆ ಅರ್ಹತೆ ಪಡೆಯುವ ನಿರೀಕ್ಷೆಯೇ ಇರಲಿಲ್ಲ ಆದರೆ, ವೈಭವ್ ಸೂರ್ಯವಂಶಿಯಂತಹ ಆಟಗಾರರು ಮುಂದೆ ಬಂದು ತಂಡದ ಅದೃಷ್ಟವನ್ನೇ ಬದಲಾಯಿಸಿದ್ದಾರೆ ಎಂದು ಶ್ಲಾಘಿಸಿದರು. ಆದಾಗ್ಯೂ ತಮ್ಮ ತಂಡವು ಸವಾಲಿಗೆ ತಕ್ಕಂತೆ ಪ್ರದರ್ಶನ ನೀಡಲು ವಿಫಲವಾಯಿತು ಎಂದು ಪರಾಗ್ ಒಪ್ಪಿಕೊಂಡರು.
ಭಾರತ ತಂಡದಲ್ಲಿ ಅವಕಾಶ ನೀಡಬೇಕು
ಇದೇ ವೇಳೆ ವೈಭವ್ ಸೂರ್ಯವಂಶಗೆ ಭಾರತ ಹಿರಿಯರ ತಂಡದಲ್ಲಿ ಸ್ಥಾನ ನೀಡಬೇಕು ಎಂದು ಆಗ್ರಹಿಸಿದ ಪರಾಗ್, 'ನಾನು ಇದನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಕೆಲವರು ಕೇವಲ ಬಂದು ಬಲವಾಗಿ ಹೊಡೆದು ಸಾಕಷ್ಟು ರನ್ಗಳನ್ನು ಗಳಿಸುತ್ತಾರೆ. ಆದರೆ ಅವನು ಬ್ಯಾಟಿಂಗ್ ಮಾಡಿದ ರೀತಿ ಕೇವಲ ಹೊಡೆತಗಳ ಆಟವಲ್ಲ. ಅದು ಅಂಧಾಧುಂಧ್ ಬ್ಯಾಟಿಂಗ್ ಅಲ್ಲ. ಮೊದಲ ಎಸೆತದಿಂದಲೇ ಕೇವಲ ಹೊಡೆಯುತ್ತಾ ಹೋದರೆ ಇಂದು ಅವನು ಮಾಡಿದುದನ್ನು ಮಾಡಲು ಸಾಧ್ಯವಿಲ್ಲ' ಎಂದರು.
ರಿಯಾನ್ ಪರಾಗ್ ಮಾತ್ರವಲ್ಲದೇ ಹಲವಾರು ಮಾಜಿ ಭಾರತೀಯ ಕ್ರಿಕೆಟಿಗರು ಕೂಡ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಸೂರ್ಯವಂಶಿಗೆ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಪದಾರ್ಪಣೆ ಮಾಡುವ ಅವಕಾಶ ನೀಡಲು ಇದೇ ಸೂಕ್ತ ಸಮಯ ಎಂದು ಅಭಿಪ್ರಾಯಪಟ್ಟಿದ್ದಾರೆ.
"ಅವನು ಲೆಕ್ಕಾಚಾರ ಮಾಡುತ್ತಾನೆ, ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುತ್ತಾನೆ. ಅವನು ಪ್ರತಿಯೊಂದು ವಿಚಾರವನ್ನೂ ಅತ್ಯುತ್ತಮವಾಗಿ ಮಾಡುತ್ತಾನೆ. ಹೇಗೆ ಮಾಡುತ್ತಾನೆ ಎಂಬುದು ನನಗೆ ಇನ್ನೂ ಅರ್ಥವಾಗಿಲ್ಲ. ಆದರೆ ಅವನು ಇದೇ ರೀತಿ ಮುಂದುವರಿಯಲಿ ಎಂದು ಆಶಿಸುತ್ತೇನೆ. ಅವನು ನಮ್ಮ ದೇಶವನ್ನು ಪ್ರತಿನಿಧಿಸಿ ಇನ್ನಷ್ಟು ಕೀರ್ತಿಯನ್ನು ತಂದುಕೊಡಲಿ. ಹಾಗೆಯೇ ರಾಜಸ್ಥಾನ್ ರಾಯಲ್ಸ್ ಪರವೂ ಆಡುತ್ತಾ ನಮಗೆ ಎರಡನೇ ಚಾಂಪಿಯನ್ಶಿಪ್ ಗೆಲ್ಲಿಸಿಕೊಡಲಿ ಎಂದು ಆಶಿಸುತ್ತೇನೆ ಎಂದು ಪಂದ್ಯದ ಬಳಿಕದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪರಾಗ್ ಹೇಳಿದರು.
ಕ್ವಾಲಿಫೈಯರ್-2ರಲ್ಲಿ ತಂಡದ ಪ್ರದರ್ಶನದ ಬಗ್ಗೆ ಮಾತನಾಡಿದ ಪರಾಗ್, 215 ರನ್ಗಳ ಮೊತ್ತವು ಸಮರ್ಪಕ ಸ್ಕೋರ್ ಆಗಿತ್ತು ಎಂದು ಹೇಳಿದರು. ಆದರೆ ಎರಡನೇ ಇನ್ನಿಂಗ್ಸ್ನಲ್ಲಿ ಪಿಚ್ ಇನ್ನಷ್ಟು ಉತ್ತಮವಾಗಿದ್ದು, ಅದು ಗುಜರಾತ್ ಟೈಟನ್ಸ್ಗೆ ನೆರವಾಯಿತು ಎಂದು ಅಭಿಪ್ರಾಯಪಟ್ಟರು.
215 ರನ್ಗಳು ಡಿಫೆಂಡ್ ಮಾಡಬಹುದಾದ ಮೊತ್ತವಾಗಿತ್ತು. ಆದರೆ ಭಾರೀ ರೋಲರ್ ಬಳಸಿದ ನಂತರ ಎರಡನೇ ಇನ್ನಿಂಗ್ಸ್ನಲ್ಲಿ ಪಿಚ್ ಸ್ವಲ್ಪ ಉತ್ತಮವಾಯಿತು ಎಂದು ನನಗೆ ಅನಿಸಿತು. ಮೊದಲ ಇನ್ನಿಂಗ್ಸ್ನಲ್ಲಿ ಸ್ಪಿನ್ನರ್ಗಳಿಗೆ ಸ್ವಲ್ಪ ಹೆಚ್ಚು ಹಿಡಿತ ಸಿಕ್ಕಿತ್ತು. ನಿಧಾನಗತಿಯ ಚಿಕ್ಕ ಎಸೆತಗಳು ಪಿಚ್ನಲ್ಲಿ ಸ್ವಲ್ಪ ಅಂಟಿಕೊಳ್ಳುತ್ತಿದ್ದವು. ಒಂದು ಹಂತದಲ್ಲಿ ನಾವು 230 ರನ್ಗಳವರೆಗೆ ಹೋಗುವ ಸಾಧ್ಯತೆ ಕಂಡುಬಂದಿತ್ತು.
ಇಂತಹ ದೊಡ್ಡ ಪಂದ್ಯಗಳಲ್ಲಿ ಹೆಚ್ಚುವರಿ 15 ರಿಂದ 20 ರನ್ಗಳು ದೊಡ್ಡ ವ್ಯತ್ಯಾಸ ಉಂಟುಮಾಡುತ್ತವೆ. 230-240 ರನ್ಗಳ ಮೊತ್ತ ಇದ್ದಿದ್ದರೆ ಗುರಿ ಬೆನ್ನಟ್ಟುವುದು ಅವರಿಗೆ ತುಂಬಾ ಕಷ್ಟವಾಗುತ್ತಿತ್ತು. ಆದರೆ 215 ರನ್ಗಳೊಂದಿಗೆ, ಅವರ ಬಲಿಷ್ಠ ಬ್ಯಾಟಿಂಗ್ ಸರಣಿಯನ್ನು ಗಮನಿಸಿದರೆ ಆರಂಭಿಕ ಬ್ಯಾಟರ್ಗಳನ್ನು ಬೇಗ ಔಟ್ ಮಾಡಬೇಕೆಂದು ನಮಗೆ ಗೊತ್ತಿತ್ತು. ಆದರೆ ಅದನ್ನು ನಾವು ಮಾಡಲಿಲ್ಲ ಎಂದು ಹೇಳಿದರು.
ಪ್ಲೇಆಫ್ಗೆ ತಲುಪುತ್ತದೆ ಎಂಬ ನಿರೀಕ್ಷೆಯೇ ಇರಲಿಲ್ಲ
ಅಂತೆಯೇ ರಾಜಸ್ತಾನ ತಂಡದಲ್ಲಿ ಸಾಕಷ್ಟು ಯುವ ಹಾಗೂ ಅನುಭವಹೀನ ಆಟಗಾರರಿದ್ದ ಕಾರಣ ರಾಜಸ್ಥಾನ ರಾಯಲ್ಸ್ ಪ್ಲೇಆಫ್ಗೆ ತಲುಪುತ್ತದೆ ಎಂಬ ನಿರೀಕ್ಷೆಯೇ ಇರಲಿಲ್ಲ. ನಿಜ ಹೇಳಬೇಕೆಂದರೆ ಸೋಲಿನ ಹೊರತಾಗಿಯೂ ಸಾಕಷ್ಟು ಸಕಾರಾತ್ಮಕ ಅಂಶಗಳಿವೆ. ಆದರೆ ಇದನ್ನು ಒಂದು ವಾಕ್ಯದಲ್ಲಿ ಹೇಳಬೇಕೆಂದರೆ, ನಾವು ಪ್ಲೇಆಫ್ಗೆ ಅರ್ಹತೆ ಪಡೆಯುತ್ತೇವೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ ಎಂದು ನನಗೆ ಅನಿಸುತ್ತದೆ.
ನಮ್ಮ ತಂಡದಲ್ಲಿ ಸಾಕಷ್ಟು ಯುವ ಮುಖಗಳಿದ್ದವು. ಐಪಿಎಲ್ನಲ್ಲಿ ಕಡಿಮೆ ಅನುಭವವಿದ್ದ ಆಟಗಾರರಿದ್ದರು. ಅನೇಕ ಹೊಸ ಸಂಯೋಜನೆಗಳು ಮತ್ತು ಬದಲಾವಣೆಗಳನ್ನು ನಾವು ಪ್ರಯತ್ನಿಸಿದ್ದೆವು. ಆದರೆ ಹುಡುಗರು ತೋರಿಸಿದ ವ್ಯಕ್ತಿತ್ವ, ಹೋರಾಟದ ಮನೋಭಾವ ಮತ್ತು ನಾವು ಇಂದು ತಲುಪಿರುವ ಹಂತವನ್ನು ನೋಡಿದರೆ ಇದು ದೀರ್ಘ ಪ್ರಯಾಣದ ಅದ್ಭುತ ಆರಂಭ ಎಂದು ನಾನು ಭಾವಿಸುತ್ತೇನೆ. ನೇರವಾಗಿ ಐಪಿಎಲ್ನಂತಹ ದೊಡ್ಡ ವೇದಿಕೆಗೆ ಎಸೆಯಲ್ಪಟ್ಟರೂ ಅವರು ತೋರಿಸಿದ ಪ್ರದರ್ಶನ ಶ್ಲಾಘನೀಯ. ಇದು ಮುಂದಿನ ಯಶಸ್ವಿ ಪಯಣಕ್ಕೆ ಭದ್ರ ಅಡಿಪಾಯವಾಗಿದೆ ಎಂದು ಪರಾಗ್ ಅಭಿಪ್ರಾಯಪಟ್ಟರು.