ಮತದಾನ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ನಾಗರಿಕರು
ನವದೆಹಲಿ: 2019ರ ಸಾರ್ವತ್ರಿಕ ಚುನಾವಣೆಯ ಮೂರನೇ ಹಂತದ ಚುನಾವಣೆಗೆ ಮತದಾನ ಮಂಗಳವಾರ ಬೆಳಗ್ಗೆ 7 ಗಂಟೆಗೆ ಆರಂಭವಾಗಿದೆ. ಒಟ್ಟು ದೇಶದ 15 ರಾಜ್ಯಗಳ 116 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. 13 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜನರು ಹಕ್ಕು ಚಲಾಯಿಸುತ್ತಿದ್ದಾರೆ.
ಕರ್ನಾಟಕದ 14, ಗುಜರಾತ್ ನ 26, ಕೇರಳದ 20, ಗೋವಾದ 2, ದಾದ್ರಾ ಮತ್ತು ನಗರ ಹವೇಲಿಯ 1, ದಮನ್ ಮತ್ತು ದಿಯುನ 1, ಅಸ್ಸಾಂನ 4, ಬಿಹಾರದ 5, ಛತ್ತೀಸ್ಗಢದ 7, ಜಮ್ಮು ಮತ್ತು ಕಾಶ್ಮೀರದ 1, ಮಹಾರಾಷ್ಟ್ರದ 14, ಒರಿಸ್ಸಾದ 6, ಉತ್ತರ ಪ್ರದೇಶದ 10 ಮತ್ತು ಪಶ್ಚಿಮ ಬಂಗಾಳದ 5 ಕ್ಷೇತ್ರಗಳಲ್ಲಿ ಇಂದು ಚುನಾವಣೆ ನಡೆಯುತ್ತಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಹಮದಾಬಾದ್ ಬಳಿಯ ರಣಿಪ್ ನ ಮತಗಟ್ಟೆಯಲ್ಲಿ ಬೆಳಗ್ಗೆಯೇ ಆಗಮಿಸಿ ಹಕ್ಕು ಚಲಾಯಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಕೂಡ ಇದ್ದರು.
ಇಂದಿನ ಚುನಾವಣೆಯ ಕಣದಲ್ಲಿ ಗುಜರಾತ್ ನ ಗಾಂಧಿನಗರ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಅಮಿತ್ ಶಾ ಮತ್ತು ಕೇರಳದ ವಯನಾಡು ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ರಾಹುಲ್ ಗಾಂಧಿ ಪ್ರಮುಖರಾಗಿದ್ದಾರೆ.
ಕೇರಳ ರಾಜ್ಯದ 20 ಲೋಕಸಭಾ ಕ್ಷೇತ್ರಗಳಲ್ಲಿ ಮಂಗಳವಾರ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ 20 ವಿದ್ಯುನ್ಮಾನ ಮತಯಂತ್ರಗಳು ಕೆಟ್ಟುಹೋದ ವರದಿ ಬಂದಿವೆ. ಕಾಯಂಕುಲಂ ಮತಗಟ್ಟೆಯ 5 ಇವಿಎಂಗಳಲ್ಲಿ ತಾಂತ್ರಿಕ ದೋಷಗಳು ಕಂಡುಬಂದಿವೆ. ಕೇರಳದಲ್ಲಿ ಸುಮಾರು 2.62 ಕೋಟಿ ಮತದಾರರು 227 ಅಭ್ಯರ್ಥಿಗಳ ಭವಿಷ್ಯವನ್ನು ಇಂದು ನಿರ್ಧರಿಸಲಿದ್ದಾರೆ.
ಕೇರಳ ರಾಜ್ಯದ ಆಡಳಿತಾರೂಢ ಎಡರಂಗ ಮತ್ತು ಪ್ರಮುಖ ವಿರೋಧ ಪಕ್ಷ ಯುಡಿಎಫ್ ತೀವ್ರ ಸೆಣಸಾಟದಲ್ಲಿ ತೊಡಗಿವೆ. ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶ ವಿಚಾರದ ಮೂಲಕ ರಾಜ್ಯದ ರಾಜಕೀಯ ಭವಿಷ್ಯವನ್ನು ಕೇಂದ್ರದ ಎನ್ ಡಿಎ ಮೈತ್ರಿಕೂಟ ಈ ಬಾರಿ ಬದಲಾಯಿಸಲು ಯತ್ನಿಸುತ್ತಿದೆ.
ಇಂದಿನ ಚುನಾವಣೆಯಲ್ಲಿ ಎರಡು-ಮೂರು ಕ್ಷೇತ್ರಗಳಲ್ಲಿ ತೃಪಕ್ಷೀಯ ಹೋರಾಟ ನಡೆಯುವ ಸಾಧ್ಯತೆಯಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos