ಬೆಂಗಳೂರು: ಬಹಳ ಹಿಂದಿನಿಂದಲೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಾ ಬಂದಿದ್ದ ಪರಿಶಿಷ್ಟ ಜಾತಿ ಮತ್ತು ಪಂಗಡದ ಮತದಾರರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತಮ್ಮ ನಿಷ್ಠೆಯನ್ನು ಬಿಜೆಪಿ ಕಡೆಗೆ ಹರಿಸಿರುವುದು ಚುನಾವಣಾ ಫಲಿತಾಂಶದಿಂದ ಸ್ಪಷ್ಟವಾಗುತ್ತಿದೆ.
ರಾಜ್ಯದ ಎಲ್ಲಾ ಪರಿಶಿಷ್ಟ ಜಾತಿ- ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳೇ ಗೆದ್ದಿರುವುದು ಇದಕ್ಕೆ ಸಾಕ್ಷಿ. 2014ರ ಲೋಕಸಭಾ ಚುನಾವಣೆಯಲ್ಲಿ ಪರಿಶಿಷ್ಟ ಜಾತಿ, ಪಂಗಡದ ಮೀಸಲು ಕ್ಷೇತ್ರಗಳ ಪೈಕಿ ಕಾಂಗ್ರೆಸ್ 5 ಸ್ಥಾನಗಳನ್ನು ಗೆದ್ದಿತ್ತು. ಆದರೆ ಈ ಬಾರಿ ಕಾಂಗ್ರೆಸ್ನ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ (ಕಲಬುರಗಿ), ಕೆ.ಎಚ್. ಮುನಿಯಪ್ಪ (ಕೋಲಾರ) ಅವರು ಬಿಜೆಪಿಯ ಡಾ. ಉಮೇಶ್ ಜಾಧವ್ ಮತ್ತು ಮುನಿಸ್ವಾಮಿ ಅವರ ಎದುರು ಕ್ರಮವಾಗಿ ಸೋತಿದ್ದಾರೆ. ಇವೆರಡೂ ಮೀಸಲು ಕ್ಷೇತ್ರಗಳಾಗಿವೆ.
2014ರಲ್ಲಿ ಗೆದ್ದ ಮೀಸಲು ಕ್ಷೇತ್ರಗಳನ್ನೂ ಈ ಬಾರಿ ಕಾಂಗ್ರೆಸ್ ಕಳೆದುಕೊಂಡಿದೆ. ಧ್ರುವನಾರಾಯಣ (ಚಾಮರಾಜನಗರ), ಚಂದ್ರಪ್ಪ (ಚಿತ್ರದುರ್ಗ), ಬಿ.ವಿ.ನಾಯಕ್ (ರಾಯಚೂರು-ಎಸ್ಟಿ) ಈ ಬಾರಿ ಸೋತಿದ್ದು, ಈ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಭರ್ಜರಿ ಜಯಸಾಧಿಸಿದ್ದಾರೆ.
2014ರಲ್ಲಿ ಬಿಜೆಪಿ, ಬಿಜಾಪುರ ಮತ್ತು ಬಳ್ಳಾರಿ ಮೀಸಲು ಕ್ಷೇತ್ರಗಳನ್ನು ಮಾತ್ರ ಗೆದ್ದಿತ್ತು. ಆದರೆ ಈ ಬಾರಿ ಎಲ್ಲಾ ಏಳು ಕ್ಷೇತ್ರಗಳಲ್ಲೂ ಗೆಲುವು ಸಾಧಿಸಿದೆ. ಬಿಜಾಪುರ ಕ್ಷೇತ್ರದಿಂದ ರಮೇಶ್ ಜಿಗಜಿಣಗಿ, ಚಿತ್ರದುರ್ಗದಿಂದ ಎ ನಾರಾಯಣ ಸ್ವಾಮಿ, ಚಾಮರಾಜನಗರದಿಂದ ವಿ ಶ್ರೀನಿವಾಸಪ್ರಸಾದ್, ಕೋಲಾರದಿಂದ ಮುನಿಸ್ವಾಮಿ, ಕಲಬುರಗಿಯಿಂದ ಡಾ ಉಮೇಶ್ ಜಾಧವ್ ಗೆದ್ದಿದ್ದು, ಇವೆಲ್ಲವೂ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರಗಳಾಗಿವೆ.
ಇನ್ನು ಪರಿಶಿಷ್ಟ ಪಂಗಡ ಕ್ಷೇತ್ರಗಳಾದ ರಾಯಚೂರಿನಿಂದ ರಾಜಅಮರೇಶ್ ನಾಯಕ್, ಬಳ್ಳಾರಿಯಿಂದ ದೇವೇಂದ್ರಪ್ಪ ಜಯಗಳಿಸಿದ್ದಾರೆ. ಇವರೆಲ್ಲೂ ಬಿಜೆಪಿ ಅಭ್ಯರ್ಥಿಗಳಾಗಿದ್ದಾರೆ.