ನವದೆಹಲಿ: ಭಾರತದಲ್ಲಿ ಸಿಗರೇಟ್ ಗೆ ಬಲಿಯಾದವರಿಗಿಂತ, ವಾಯು ಮಾಲಿನ್ಯಕ್ಕೆ ಬಲಿಯಾದವರ ಸಂಖ್ಯೆಯೇ ಹೆಚ್ಚು ಎಂದು ವರದಿಯೊಂದು ಹೇಳಿದೆ.
ಅಮೆರಿಕ ಮೂಲದ ಹೆಲ್ತ್ ಎಫೆಕ್ಟ್ ಇನ್ ಸ್ಟಿಟೂಟ್ ಸಂಸ್ಥೆಯ ದಿ ಸ್ಟೇಟ್ ಆಫ್ ಗ್ಲೋಬಲ್ ಏರ್ 2019 ವರದಿಯಲ್ಲಿ ಈ ಕುರಿತು ಹೇಳಲಾಗಿದ್ದು, 2017ರಲ್ಲಿ ಭಾರತದಲ್ಲಿ ಸಿಗರೇಟ್ ಸೇದಿ ಬಲಿಯಾದವರಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಜನರು ವಾಯುಮಾಲೀನ್ಯಕ್ಕೆ ಬಲಿಯಾಗಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. 2017ರಲ್ಲಿ ವಾಯುಮಾಲೀನ್ಯದಿಂದಾಗಿ 1.2 ಮಂದಿ ತಮ್ಮ ಜೀವಿತಾವಧಿಗಿಂತಲೂ ಮುಂಚಿತವಾಗಿಯೇ ಅಸು ನೀಗಿದ್ದಾರೆ. ಅಂತೆಯೇ ವಾಯುಮಾಲೀನ್ಯದಿಂದಾಗಿ ಭಾರತದಲ್ಲಿ ಮನುಷ್ಯರ ಜೀವಿತಾವಧಿಯಲ್ಲಿ ಬರೊಬ್ಬರಿ 20 ತಿಂಗಳ ಕಡಿತವಾಗಿದೆ ಎಂದು ವರದಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.
2017ರಲ್ಲಿ ವಾಯುಮಾಲೀನ್ಯದಿಂದಾಗಿ ಸುಮಾರು 5 ಮಿಲಿಯನ್ ಮಂದಿ ಸ್ಟ್ಕೋರ್ಕ್ಸ್ (ಲಕ್ವಾ) ಸಕ್ಕರೆ ಕಾಯಿಲೆ, ಹೃದಯ ಸಂಬಂಧಿ ಸಮಸ್ಯೆಗಳು, ಶ್ವಾಸಕೋಶದ ಕ್ಯಾನ್ಸರ್ ಸಮಸ್ಯೆಯಿಂದಾಗಿ ಸಾವನ್ನಪ್ಪಿದ್ದಾರೆ. ಅಂತೆಯೇ 3 ಮಿಲಿಯನ್ ಮಂದಿ ನೇರವಾಗಿ ವಾತವಾರಣದ ಗಾಳಿಯಲ್ಲಿನ ವಿಷಕಾರಕ ಪದಾರ್ಥ ಪಿಎಂ 2.5 ನಿಂದ ಸಾವನ್ನಪ್ಪಿದ್ದಾರೆ. ಭಾರತ ಮಾತ್ರವಲ್ಲದೇ ಇದೇ ಪಿಎಂ 2.5ನಿಂದಾಗಿ ಚೀನಾದಲ್ಲೂ 3 ಮಿಲಿಯನ್ ಮಂದಿ ಸಾವಪ್ಪನ್ನಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಅಂತೆಯೇ ವಾಯು ಮಾಲೀನ್ಯದಿಂದಾಗಿ ಭಾರತ ಮತ್ತು ಚೀನಾ ದೇಶಗಳಲ್ಲಿ ಜನಿಸುತ್ತಿರುವ ಮಕ್ಕಳ ಜೀವಿತಾವಧಿಯಲ್ಲಿ ಕನಿಷ್ಠ 20 ತಿಂಗಳು ಕಡಿತವಾಗುತ್ತಿದೆ.
ವರದಿಯಲ್ಲಿ ತಮ್ಮಲ್ಲಿನ ವಾಯುಮಾಲೀನ್ಯಕ್ಕೆ ಭಾರತ ಮತ್ತು ಚೀನಾ ದೇಶಗಳೇ ಕಾರಣ ಎಂದು ಟೀಕಿಸಲಾಗಿದ್ದು, ವಾಯುಮಾಲೀನ್ಯ ನಿಯಂತ್ರಣಕ್ಕೆ ಈ ದೇಶಗಳು ಕೈಗೊಂಡಿರುವ ಕ್ರಮಗಳು ಸಮಾಧಾನಕರವಲ್ಲ ಎಂದು ಹೇಳಲಾಗಿದೆ. ಅಂತೆಯೇ ಭಾರತ ಕೈಗೊಂಡಿರುವ ಮನೆಮನೆಗೂ ಗ್ಯಾಸ್ ಸ್ಟೌ ಸೌಲಭ್ಯ ಒದಗಿಸುವ ಉಜ್ವಲ ಯೋಜನೆ, ವಾಹನಗಳಿಗೆ ಸಂಬಂಧಿಸಿದ ಭಾರತ್ ಸ್ಟೇಜ್ 6 ವಾಹನ ಮಾನದಂಡಗಳು, ರಾಷ್ಟ್ರೀಯ ವಾಯು ಮಾಲೀನ್ಯ ನಿಯಂತ್ರಣ ಕಾರ್ಯಕ್ರಮಗಳ ಕುರಿತೂ ವರದಿಯಲ್ಲಿ ಆಶಾಭಾವ ವ್ಯಕ್ತಪಡಿಸಲಾಗಿದೆ. ಈ ಯೋಜನೆಗಳ ಫಲಿತಾಂಶ ಮುಂದಿನ ದಿನಗಳಲ್ಲಿ ಲಭ್ಯವಾಗಲಿದೆ ಎಂದು ವರದಿಯಲ್ಲಿ ಹೇಳಿದೆ.
ಅಂತೆಯೇ ಈ ಎರಡೂ ದೇಶಗಳಲ್ಲಿ ಸಿಗರೇಟ್ ಸೇದಿ ಸಾವನ್ನಪ್ಪುತ್ತಿರುವವ ಸಂಖ್ಯೆಗಿಂತಲೂ ವಾಯುಮಾಲೀನ್ಯಕ್ಕೆ ಬಲಿಯಾಗುತ್ತಿರುವವರ ಸಂಖ್ಯೆಯೇ ಹೆಚ್ಚು ಎಂದು ಟೀಕಿಸಲಾಗಿದೆ.