ಮೈಸೂರು: ಗ್ರಾಮೀಣ ಪ್ರದೇಶದ ಜನರ ಅಭಿವೃದ್ಧಿಗಾಗಿ ಮತ್ತು ಉದ್ಯೋಗ ಖಾತರಿಗಾಗಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ(ನರೇಗಾ)ಗಳನ್ನು ಜಾರಿಗೆ ತರಲಾಗಿದ್ದು ಈ ಯೋಜನೆಗಳ ವಸ್ತು ಸ್ಥಿತಿಗಳನ್ನು ಸ್ಯಾಟಲೈಟ್ ಮೂಲಕ ಮಾಹಿತಿಯನ್ನು ಕಲೆಹಾಕಲಾಗುವುದು ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ(ಇಸ್ರೋ)ಯ ಮುಖ್ಯಸ್ಥ ಎಎಸ್ ಕಿರಣ್ ಕುಮಾರ್ ಹೇಳಿದ್ದಾರೆ.
ಅಖಿಲ ಭಾರತ ವೀರಶೈವ ಮಹಾಸಭಾ ಆಯೋಜಿಸಿದ್ದ ಬಸವ ಜಯಂತಿ ಸಮಾರಂಭ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳ ಅಭಿನಂದನ ಕಾರ್ಯಕ್ರಮದಲ್ಲಿ ಮಾತನಾಡಿದ ಕಿರಣ್ ಕುಮಾರ್ ಅವರು ಗ್ರಾಮೀಣ ಜನರ ಅಭಿವೃದ್ಧಿಗಾಗಿ ನರೇಗಾ ಯೋಜನೆಯಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೋಟ್ಯಾಂತರ ರುಪಾಯಿಗಳನ್ನು ಖರ್ಚು ಮಾಡುತ್ತಿದೆ. ಆದರೆ ಇದರಿಂದ ಗ್ರಾಮೀಣ ಜನರಿಗೆ ಅನುಕೂಲವಾಗುತ್ತಿದೆಯಾ? ಅವರು ಈ ಯೋಜನೆಯ ಅನುಭವಿಗಳಾಗುತ್ತಿದ್ದಾರಾ? ಯೋಜನೆಗಳ ವಸ್ತು ಸ್ಥಿತಿ ಬಗ್ಗೆ ತಿಳಿಯಳು ಇಸ್ರೋ ಮಾಹಿತಿಯನ್ನು ಕಲೆ ಹಾಕಿ ಸರ್ಕಾರಕ್ಕೆ ನೀಡುತ್ತಿದೆ ಎಂದರು.
2016ರ ಆಗಸ್ಟ್ ತಿಂಗಳಿನಿಂದ ಇಸ್ರೋ ನರೇಗಾ ಯೋಜನೆಗಳ ಕುರಿತು ಮಾಹಿತಿ ಸಂಗ್ರಹಿಸುತ್ತಿದೆ. ಇಸ್ರೋದ ಮೇಲ್ವಿಚಾರಣಾ ವ್ಯವಸ್ಥೆಯಿಂದ ಈ ಮಾಹಿತಿ ಪಡೆಯುತ್ತಿದ್ದು ಸರ್ಕಾರ ಸಹಾಯ ಮಾಡುತ್ತಿದೆ. ಓರ್ವ ವ್ಯಕ್ತಿ 3 ಕಿ.ಮೀ ರಸ್ತೆಗೆ ಡಾಂಬರಿಕರಣ ಮಾಡಿರುವುದಾಗಿ ಹೇಳಿರುತ್ತಾನೆ. ಆದರೆ ವಾಸ್ತವದಲ್ಲಿ 1.5 ಕಿ.ಮೀಗೆ ಮಾತ್ರ ಡಾಂಬರಿಕರಣ ಮಾಡಲಾಗಿರುತ್ತದೆ ಇಂತಹ ಮಾಹಿತಿಗಳನ್ನು ಸ್ಯಾಟಲೈಟ್ ಮೂಲಕ ಇಸ್ರೋ ಕಲೆಹಾಕುತ್ತಿದೆ ಎಂದರು.
ಇನ್ನು ಹಲವು ರಾಷ್ಟ್ರಗಳಿಗೆ ಹವಾಮಾನ ಮುನ್ಸೂಚನೆ ಸೇವೆಗಳನ್ನು ಇಸ್ರೋ ಒದಗಿಸುತ್ತಿದೆ ಎಂದರು.