ಅಧಿವೇಶನದಲ್ಲಿ ಸಚಿವ ರಮೇಶ್ ಕುಮಾರ್
ಬೆಳಗಾವಿ: ಕರ್ನಾಟಕ ಖಾಸಗಿ ಆಸ್ಪತ್ರೆ ನಿಯಂತ್ರಣ ತಿದ್ದುಪಡಿ ವಿಧೇಯಕ (ಕೆಪಿಎಂಇ)ಯನ್ನು ಸರ್ಕಾರ ಸಾರ್ವಜನಿಕ ಹಿತಾಸಕ್ತಿಯಿಂದ ಜಾರಿಗೆ ಮುಂದಾಗಿದ್ದು, ಪ್ರತಿಷ್ಠೆಯಿಂದಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ರಮೇಶ್ ಕುಮಾರ್ ಹೇಳಿದ್ದಾರೆ.
ಬೆಳಗಾವಿ ಅಧಿವೇಶನದಲ್ಲಿ ಮಾತನಾಡಿದ ರಮೇಶ್ ಕುಮಾರ್ ಅವರು, ವೈದ್ಯರ ಪ್ರತಿಭಟನೆ ಕುರಿತಂತೆ ಸರ್ಕಾರ ಗಂಭೀರವಾಗಿದೆ. ವೈದ್ಯರ ಪ್ರತಿಭಟನೆಯನ್ನು ಸರ್ಕಾರ ನಿರ್ಲಕ್ಷಿಸುತ್ತಿಲ್ಲ. ಕೇವಲ ಸಾರ್ವಜನಿಕ ಹಿತಾಸಕ್ತಿಯಿಂದಷ್ಟೇ ಕೆಪಿಎಂಇ ಕಾಯ್ದೆಗೆ ತಿದ್ದುಪಡಿ ಮಾಡಲಾಗುತ್ತಿದೆ ಎಂದು ಹೇಳಿದರು.
ಇದೇ ವೇಳೆ ವಿವಾದ ಸಂಬಂಧ ಮಾತನಾಡಿದ ರಮೇಶ್ ಕುಮಾರ್ ಅವರು, ಸರ್ಕಾರ ಕೆಪಿಎಂಇ ಕಾಯ್ದೆ ವಿಚಾರದಲ್ಲಿ ರಾಜಕೀಯ ಬೆರೆಸುತ್ತಿಲ್ಲ. ದುಬಾರಿ ಖಾಸಗಿ ಆಸ್ಪತ್ರೆಗಳ ವೈದ್ಯಕೀಯ ಸೇವೆಗಳ ದುಬಾರಿ ದರಗಳಿಗೆ ಕಡಿವಾಣ ಹಾಕಬೇಕು ಎಂಬ ಉದ್ದೇಶದಿಂದ ತಿದ್ದುಪಡಿಗೆ ಮುಂದಾಗಿದ್ದೇವೆ. ಕಾಯ್ದೆ ಜಾರಿಯಲ್ಲಿ ಸರ್ಕಾರಕ್ಕಾಗಲಿ ಅಥವಾ ನನಗಾಗಲಿ ಪ್ರತಿಷ್ಠೆ ಇಲ್ಲ. ಇಂದಿಗೂ ಸರ್ಕಾರ ವೈದ್ಯರೊಂದಿಗೆ ಚರ್ಚೆಗೆ ಸಿದ್ಧವಿದೆ. ನಾವೆಲ್ಲರೂ ಜನರಿಂದ ಜನರಿಗಾಗಿ ಆಯ್ಕೆಯಾದವರು. ಹೀಗಾಗಿ ಜನರಿಗೆ ಒಳ್ಳೆಯದು ಬೆಕು ಎಂಬುದನ್ನು ಯೋಚಿಸೋಣ.
ವೈದ್ಯೋ ನಾರಾಯಣೋ ಹರಿ ಎಂದು ಹೇಳುತ್ತಾರೆ. ವೈದ್ಯ ವೃತ್ತಿ ದೇವರಿಗೆ ಸಮಾನ. ಹೀಗಾಗಿ ಕಾಯ್ದೆ ಸಂಬಂಧ ಮುಕ್ತ ಮನಸ್ಸಿನಿಂದ ಚರ್ಚಿಸೋಣ. ದುಬಾರಿ ದರಗಳ ತಡೆಯುವ ಉದ್ದೇಶದಿಂದಷ್ಟೇ ಕಾಯ್ದೆ ತಿದ್ದುಪಡಿ ಮಾಡಲಾಗುತ್ತಿದ್ದು, ವೈದ್ಯರನ್ನು ಜೈಲಿಗೆ ಕಳುಹಿಸುವ ಉದ್ದೇಶದಿಂದಲ್ಲ. ಕಾಯ್ದೆ ಜಾರಿ ಬಗ್ಗೆ ಸತ್ಯಾಂಶ ವರದಿಯಾಗುತ್ತಿಲ್ಲ. ಚಿಕಿತ್ಸೆ ವಿಫಲವಾದರೆ ವೈದ್ಯನನ್ನು ಶಿಕ್ಷಿಸುವ ವಿಚಾರ ಶುದ್ಧ ಸುಳ್ಳು. ವೈದ್ಯರನ್ನು ಜೈಲಿಗೆ ಕಳುಹಿಸಲು ಕಾಯ್ದೆ ಜಾರಿ ಮಾಡುತ್ತಿಲ್ಲ. ಸದನದಲ್ಲಿ ಇನ್ನೂ ತಿದ್ದುಪಡಿ ವಿಧೇಯಕ ಮಂಡಿಸಿಲ್ಲ. ಹೀಗಾಗಿ ಸಂಜೆ ಮತ್ತೊಂದು ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ವೈದ್ಯರೊಂದಿಗೆ ಸಭೆ ನಡೆಸುತ್ತೇವೆ ಎಂದು ರಮೇಶ್ ಕುಮಾರ್ ಹೇಳಿದರು.
ರಾಜಿನಾಮೆ ಕೊಡುವ ಪ್ರಶ್ನೆಯೇ ಇಲ್ಲ
ಇದೇ ವೇಳೆ ವಿವಾದ ಸಂಬಂಧ ತಮ್ಮ ರಾಜಿನಾಮೆ ಕುರಿತ ಪ್ರತಿಪಕ್ಷಗಳ ಪ್ರಶ್ನೆಗೆ ಉತ್ತರಿಸಿದ ರಮೇಶ್ ಕುಮಾರ್ ಅವರು, ಈ ವಿಚಾರದಲ್ಲಿ ಸರ್ಕಾರ ಮತ್ತು ನನ್ನ ನಡೆ ಒಂದೇ ಆಗಿದೆ. ನನ್ನ ಜೊತೆ ಸರ್ಕಾರವಿದೆ ಮತ್ತು ಕಾಂಗ್ರೆಸ್ ಪಕ್ಷದ ನಾಯಕರಿದ್ದಾರೆ. ರಾಜಿನಾಮೆ ಕೊಡುವ ಅಗತ್ಯವಿಲ್ಲ ಎಂದು ಹೇಳಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos