ಬೆಂಗಳೂರು: ಕೆಪಿಎಂಇ ಕಾಯ್ದೆಗೆ ಸಂಬಂಧಿಸಿದಂತೆ ವೈದ್ಯರ ಮುಷ್ಕರ ಮುಂದುವರೆದಿರುವ ಹಿನ್ನಲೆಯಲ್ಲಿ ಖಾಸಗಿ ವೈದ್ಯರ ನಡೆಯನ್ನು ಕಟುವಾಗಿ ಟೀಕಿಸಿರುವ ಕರ್ನಾಟಕ ಹೈಕೋರ್ಟ್, ವೈದ್ಯರ ಮುಷ್ಕರ ಕಾನೂನು ಬಾಹಿರ ಎಂದು ಅಭಿಪ್ರಾಯಪಟ್ಟಿದ್ದು, ಕೂಡಲೇ ಮುಷ್ಕರ ವಾಪಸ್ ಪಡೆಯದಿದ್ದರೆ ಸೂಕ್ತ ಆದೇಶ ಹೊರಡಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಜನರ ಸರಣಿ ಸಾವಿನ ಹೊರತಾಗಿಯೂ ಕರ್ನಾಟಕ ಖಾಸಗಿ ಆಸ್ಪತ್ರೆ ನಿಯಂತ್ರಣ ತಿದ್ದುಪಡಿ ವಿಧೇಯಕ(ಕೆಪಿಎಂಇ) ವಿರುದ್ಧ ಖಾಸಗಿ ವೈದ್ಯರು ನಡೆಸುತ್ತಿದ್ದ ಮುಷ್ಕರದ ವಿರುದ್ಧ ಕರ್ನಾಟಕ ಹೈಕೋರ್ಟ್ ಕೆಂಗಣ್ಣು ಬೀರಿದೆ. ಈ ಸಂಬಂಧ ದಾಖಲಾಗಿದ್ದ ಮೂರು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಾಧೀಶರು, ಸರ್ಕಾರದ ಪರ ಹಾಗೂ ಖಾಸಗಿ ವೈದ್ಯರ ಪರ ವಕೀಲರ ವಾದ ಆಲಿಸಿದರು. ಈ ವೇಳೆ ಖಾಸಗಿ ವೈದ್ಯರ ವಕೀಲರು ತಮ್ಮ ವಾದ ಮಂಡಿಸಿ ವೈದ್ಯರು ಮುಷ್ಕರ ವಾಪಸ್ ಪಡೆದಿದ್ದು, ಐಎಂಎ ಅಧ್ಯಕ್ಷರು ಮತ್ತು ಕೆಲವೇ ಪದಾಧಿಕಾರಿಗಳು ಮಾತ್ರ ಮುಷ್ಕರ ಮುಂದುವರೆಸಿದ್ದಾರೆ. ಉಳಿದೆಲ್ಲಾ ವೈದ್ಯರು ಕರ್ತವ್ಯೆ ವಾಪಸ್ ಆಗಿದ್ದಾರೆ ಎಂದು ತಿಳಿಸಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸರ್ಕಾರ ಪರ ವಕೀಲರು ಕೇವಲ ತಾಂತ್ರಿಕ ಹೇಳಿಕೆ ನೀಡಿದರೆ ಸಾಲದು. ವೈದ್ಯರು ಕರ್ತವ್ಯಕ್ಕೆ ನಿಯೋಜನೆಯಾಗಿರುವ ಕುರಿತು ದಾಖಲೆ ಸಹಿತ ಸೂಕ್ತ ಮಾಹಿತಿ ನೀಡಬೇಕು ಎಂದು ಹೇಳಿದರು.
ಉಭಯ ವಕೀಲರ ವಾದ ಆಲಿಸಿದ ಹೈಕೋರ್ಟ್ ನ್ಯಾಯಾಧೀಶರು, ವೈದ್ಯರ ಬೀದಿ ಹೋರಾಟದ ಪರಿಣಾಮ ಇದೀಗ ಜನ ಸಾಮಾನ್ಯರ ಮೇಲಾಗಿದೆ. ವೈದ್ಯರಿಗೆ ಸಮಸ್ಯೆ ಇದ್ದರೆ ಕೋರ್ಟ್ ಗೆ ಬರಲಿ.. ಅದನ್ನು ಬಿಟ್ಟು ಮುಷ್ಕರ ಮಾಡುವುದು ಸರಿಯಲ್ಲ. ಮುಷ್ಕರ ಕಾನೂನು ಬಾಹಿರ ಎಂಬುದು ವೈದ್ಯರಿಗೆ ತಿಳಿದಿರಲಿ.. ವೈದ್ಯರಿಗೆ ಸೂಕ್ತ ಕಾನೂನು ಸಲಹೆ ಅಗತ್ಯ ಎಂದು ಹೇಳಿದರು. ವೈದ್ಯರು ವಿದ್ಯಾವಂತರಾಗಿದ್ದು ಜನ ಸಾಮಾನ್ಯರ ಪರಿಸ್ಥಿತಿ ಬಗ್ಗೆ ಅರಿವಿರಬೇಕು. ಅಂತೆಯೇ ಸರ್ಕಾರ ಕೂಡ ಸಾರ್ವಜನಿಕರ ಸಾವಿಗೆ ಸರ್ಕಾರ ಮೂಕ ಪ್ರೇಕ್ಷಕವಾಗಿರಬಾರದು ಎಂದು ಹೇಳಿದೆ.
ಜನ ಜೀವಕ್ಕಿಂತ ವೈದ್ಯರಿಗೆ ದೊಡ್ಡದೇನಿರಬಾರದು. ಮುಷ್ಕರ ವಾಪಸ್ ಪಡೆಯದಿದ್ದರೆ ತಾನೇ ಸೂಕ್ತ ಆದೇಶ ನೀಡಬೇಕಾಗುತ್ತದೆ ಮುಷ್ಕರ ನಿರತ ವೈದ್ಯರಿಗೆ ಖಡಕ್ ಎಚ್ಚರಿಕೆ ನೀಡಿತು. ಅಂತೆಯೇ ಮುಂದಿನ ವಿಚಾರಣೆಯನ್ನು ಸಂಜೆ 4.30ಕ್ಕೆ ಮುಂದೂಡಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos