ಸಂತೋಷ್ ಕಾಣೆಯಾಗಿದ್ದ ಸ್ಥಳ, ಒಳ ಚಿತ್ರದಲ್ಲಿ ಸಂತೋಷ್
ಬೆಂಗಳೂರು: ನಿನ್ನೆಯ ಮಳೆಯ ಪ್ರವಾಹಕ್ಕೆ ಕೊಚ್ಚಿ ಹೋಗಿದ್ದ ಆಟೋ ಚಾಲಕ ಸಂತೋಷ್ ನ ಮೃತದೇಹ ಸಿಕ್ಕಿದ್ದು ನಾಪತ್ತೆಯಾಗಿದ್ದ ಒಂದು ಕಿಲೋ ಮೀಟರ್ ದೂರದಲ್ಲಿ ಸಿಕ್ಕಿದೆ. ಆದರೆ ಆಟೋ ಮಾತ್ರ ಇನ್ನೂ ಸಿಕ್ಕಿಲ್ಲ.
ಕನಕಪುರ ಮುಖ್ಯ ರಸ್ತೆಯ ಗಂಟಕಾನ ದೊಡ್ಡಿ ಸಮೀಪ ಮೊನ್ನೆ ಮಂಗಳವಾರ ಸುರಿದ ಧಾರಾಕಾರ ಮಳೆಗೆ ರಸ್ತೆಯ ಮೇಲೆ ನೀರು ತುಂಬಿದ್ದರಿಂದ ಪ್ರವಾಹದಲ್ಲಿ ಆಟೋ ಚಾಲಕ ಸಂತೋಷ್ ಕೊಚ್ಚಿ ಹೋಗಿದ್ದರು. ಸಂತೋಷ್ ಜೊತೆಗೆ ಅವರ ಸ್ನೇಹಿತ ವಿಜಯ್ ಕೂಡ ಇದ್ದರು. ಆದರೆ ಅವರು ಮರದ ಕೊಂಬೆಯೊಂದನ್ನು ಹಿಡಿದು ಸಾವಿನಿಂದ ಪಾರಾದರು.
ಇವರ ಜೊತೆ ಇಬ್ಬರು ಬಾಲಕಿಯರು ಕೂಡ ಇದ್ದರು. ಈ ಘಟನೆ ನಡೆಯುವ ಹೊತ್ತಿಗೆ ಅವರ ಕುಟುಂಬದವರಿಗೆ ಎಲ್ಲಿ ಹೋಗಿದ್ದಾರೆ ಎಂದು ಗೊತ್ತಿರಲಿಲ್ಲವಂತೆ.
ಸಂತೋಷ್ ಅಂತ್ಯಸಂಸ್ಕಾರವನ್ನು ಬನಶಂಕರಿಯ ಚಿತಾಗಾರದಲ್ಲಿ ನಡೆಸಲಾಯಿತು. ಘಟನೆ ಕುರಿತು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜೊತೆ ಮಾತನಾಡಿದ ಸಂತೋಷ್ ತಾಯಿ ಗೌರಮ್ಮ, ನನ್ನ ಮಗ ಯಾವತ್ತೂ ಸಾಮಾನ್ಯವಾಗಿ ರಾತ್ರಿ 9 ಗಂಟೆ ಹೊತ್ತಿಗೆ ಬರುತ್ತಿದ್ದ. ಆದರೆ ನಿನ್ನೆ ಬಂದಿರಲಿಲ್ಲ. ಬುಧವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಪೊಲೀಸ್ ಠಾಣೆಯಿಂದ ನನ್ನ ಮಗ ಕಾಣೆಯಾಗಿದ್ದಾನೆ ಎಂದು ಫೋನ್ ಬಂತು. ನನಗೆ ಆಘಾತವಾಯಿತು. ನನಗೆ ಅವನು ಬೇರೆಲ್ಲಿಗೆ ಹೋಗುವುದು ಗೊತ್ತಿರಲಿಲ್ಲ. ಅವನ ಜೊತೆ ಹೋದವರ ಬಗ್ಗೆಯೂ ತಿಳಿದಿರಲಿಲ್ಲ ಎನ್ನುತ್ತಾರೆ.
ಸಂತೋಷ್ ತಂದೆ ದಶಕಗಳ ಹಿಂದೆಯೇ ತೀರಿಕೊಂಡಿದ್ದರು. ಇದೀಗ ತಾಯಿ ಒಂಟಿಯಾಗಿದ್ದು ಜೀವನಕ್ಕೆ ಸಂತೋಷ್ ಆಧಾರವಾಗಿದ್ದರು. ಮನೆಗೆಲಸ ಮಾಡುತ್ತಿರುವ ಗೌರಮ್ಮ ತಿಂಗಳಿಗೆ 3 ಸಾವಿರ ರೂಪಾಯಿ ಸಂಪಾದಿಸುತ್ತಿದ್ದು, ಇಷ್ಟು ಹಣದಲ್ಲಿ ಮನೆಬಾಡಿಗೆ ನೀಡಿ ಜೀವನ ಸಾಗಿಸುವುದು ಹೇಗೆ ಎಂಬ ಆತಂಕದಲ್ಲಿದ್ದಾರೆ.
ಸಂತೋಷ್ ನ ಅಜ್ಜ ರಾಜಣ್ಣ ಸಂತೋಷ್ ನ ಶವವನ್ನು ನಿನ್ನೆ ಗುರುತಿಸಿದ್ದರು.ಸಂತೋಷ್ ಸಾವಿಗೆ ಸರ್ಕಾರದಿಂದ ಯಾವುದೇ ಪರಿಹಾರ ಘೋಷಣೆಯಾಗಿಲ್ಲ ಇದೀಗ ಸರ್ಕಾರದಿಂದ ಸಹಾಯದ ನಿರೀಕ್ಷೆಯಲ್ಲಿದ್ದಾರೆ ಗೌರಮ್ಮ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos