ರಾಜ್ಯ

ಬೆಂಗಳೂರು: ಕುಡಿದ ಅಮಲಿನಲ್ಲಿ ಕಾರು ಚಲಾಯಿಸಿ ಯುವಕನ ಪ್ರಾಣ ತೆಗೆದ ವೈದ್ಯ

Lingaraj Badiger
ಬೆಂಗಳೂರು: ಜನರ ಜೀವ ಉಳಿಸಬೇಕಾದ ನಗರದ ಪ್ರತಿಷ್ಠಿತ ಆಸ್ಪತ್ರೆಯ ವೈದ್ಯನೊಬ್ಬ ಕುಡಿದ ಅಮಲಿನಲ್ಲಿ ಕಾರು ಚಲಾಯಿಸಿ, ರಸ್ತೆ ದಾಟುತ್ತಿದ್ದ 17 ವರ್ಷದ ಯುವಕನ ಪ್ರಾಣ ತೆಗೆದ ಘಟನೆ ಭಾನುವಾರ ರಾತ್ರಿ ಇಂದಿರಾನಗರದಲ್ಲಿ ನಡೆದಿದೆ.
ನಿನ್ನೆ ರಾತ್ರಿ 12.30ರ ಸುಮಾರಿಗೆ ಈ ಅಪಘಾತ ಸಂಭವಿಸಿದ್ದು, ಪ್ರತಿಷ್ಠಿತ ಮಣಿಪಾಲ್ ಆಸ್ಪತ್ರೆಯ ವೈದ್ಯ ರವಿತೇಜ ಅವರು ಪಾರ್ಟಿ ಮುಗಿಸಿಕೊಂಡು ತಮ್ಮ ಬಿಎಂಡಬ್ಲ್ಯೂ ಕಾರು ಚಲಾಯಿಸಿಕೊಂಡು ಮನೆಗೆ ಹೋಗುತ್ತಿದ್ದ ವೇಳೆ ಇಂದಿರಾನಗರದ ದೋಪನಹಳ್ಳಿ ಫ್ಲೈಓವರ್​ ಬಳಿ ರಸ್ತೆ ದಾಟುತ್ತಿದ್ದ ಕೆವಿನ್​ ಎಂಬಾತನಿಗೆ ಡಿಕ್ಕಿ ಹೊಡೆಸಿದ್ದಾರೆ.
ಡಿಕ್ಕಿ ಹೊಡೆದ ರಭಸಕ್ಕೆ ತೀವ್ರವಾಗಿ ಗಾಯಗೊಂಡ ಕೆವಿನ್​ ಸ್ಥಳದಲ್ಲೇ ಮೃತಪಟ್ಟಿದ್ದಾರೆ. 
ಪ್ರಕರಣ ದಾಖಲಿಸಿಕೊಂಡ ಹಲಸೂರು ಸಂಚಾರಿ​ ಠಾಣೆ ಪೊಲೀಸರು, ವೈದ್ಯ ರವಿತೇಜನನ್ನು ಬಂಧಿಸಿ ಕೋರ್ಟ್ ಗೆ ಹಾಜರುಪಡಿಸಿದ್ದಾರೆ. ವಿಚಾರಣೆ ನಡೆಸಿದ ಕೋರ್ಟ್ ಆರೋಪಿ ವೈದ್ಯನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಆಂಧ್ರಪ್ರದೇಶ ಮೂಲದ ವೈದ್ಯ ರವಿತೇಜ್ ನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಕುಡಿದು ಕಾರು ಚಾಲನೆ ಮಾಡುತ್ತಿರುವುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
SCROLL FOR NEXT