ರಾಜ್ಯ

ನಿಖಿಲ್ ಗೆ ಕೂಡಿಬಂದ ಕಂಕಣ?; ಎಚ್ ಡಿಕೆ ದಂಪತಿ ವಿಜಯವಾಡಕ್ಕೆ ತೆರಳಿದ್ದೇಕೆ?

Srinivasamurthy VN
ಬೆಂಗಳೂರು: ದೊಡ್ಡ ಗೌಡರ ಕುಟುಂಬದ ಮತ್ತೊಂದು ಕುಡಿಗೆ ಕಂಕಣ ಭಾಗ್ಯ ಕೂಡಿ ಬಂದಿದ್ದು, ಮುಖ್ಯಮಂತ್ರಿ ಎಚ್ ಡಿ ಕುಮಾರ ಸ್ವಾಮಿ ಅವರ ಪುತ್ರ ನಿಖಿಲ್ ಗೌಡ ಅವರ ವಿವಾಹಕ್ಕೆ ಭರ್ಜರಿ ಸಿದ್ಧತೆ ನಡೆದಿದೆ ಎನ್ನಲಾಗಿದೆ.
ಹೌದು.. ನಟ ನಿಖಿಲ್ ಗೌಡ ಅವರ ವಿವಾಹಕ್ಕೆ ಕಂಕಣ ಕೂಡಿಬಂದಿದ್ದು, ಇದೇ ಡಿಸೆಂಬರ್ ನಲ್ಲಿ ಅವರ ವಿವಾಹ ಕಾರ್ಯಕ್ರಮ ನೆರವೇರಲಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಇಂಬು ನೀಡುವಂತೆ ನಿಖಿಲ್ ಗೌಡ ಅವರ ತಂದೆ ಸಿಎಂ ಕುಮಾರಸ್ವಾಮಿ ಮತ್ತು ಅವರ ಧರ್ಮಪತ್ನಿ ಅನಿತಾ ಅವರು ಇಂದು ದಿಢೀರ್ ವಿಜಯವಾಡಕ್ಕೆ ತೆರಳಿದ್ದರು. ಅಲ್ಲಿ ಇಂದ್ರಕೀಲಾದ್ರಿಯ ಕನಕದುರ್ಗ ದೇಗುಲಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಕೆ ಮಾಡಿದರು. ಬಳಿಕ ವಿಜಯವಾಡ ಮೂಲದ ಉದ್ಯಮಿ ಸ್ನೇಹಿತ ಪ್ರಾಫಿಟ್ ಶೂ ಕಂಪೆನಿ ಮುಖ್ಯಸ್ಥ ಬೋಡೆಪೂಡಿ ಕೋಟೇಶ್ವರ ರಾವ್ ಅವರ ಮನೆಗೆ ತೆರಳಿದ ಎಚ್ ಡಿಕೆ ದಂಪತಿ ಅಲ್ಲಿ ಭೋಜನ ಸವಿದರು.
ಇದೇ ಕಾರಣಕ್ಕೆ ಕೋಟೇಶ್ವರ ರಾವ್ ಅವರ ಪುತ್ರಿಯೊಂದಿಗೆ ನಿಖಿಲ್ ಗೌಡ ವಿವಾಹ ನೆರವೇರಲಿದೆ ಎಂದು ಊಹಾಪೋಹಗಳು ಹುಟ್ಟಿತ್ತು, ಈ ಬಗ್ಗೆ ಖುದ್ಧು ಕೋಟೇಶ್ವರರಾವ್ ಅವರು ಸ್ಪಷ್ಟನೆ ನೀಡಿದ್ದು, ಊಹಾಪೋಹಗಳೆಲ್ಲಾ ಶುದ್ಧ ಸುಳ್ಳು. ನನ್ನ ಮಗಳೊಂದಿಗೆ ನಿಖಿಲ್ ಗೌಡ ವಿವಾಹ ನಿಶ್ಚಿಯವಾಗಿಲ್ಲ. ಕುಮಾರಸ್ವಾಮಿ ಅವರು ನಮ್ಮ ಕುಟುಂಬದ ಸ್ನೇಹಿತರು. ಹೀಗಾಗಿ ಊರಿಗೆ ಬಂದಿದ್ದ ಅವರನ್ನು ಮನೆಗೆ ಆಹ್ವಾನಿಸಿದೆ. ಬೋಜನ ಸೇವಿಸಿ ಅವರು ಕರ್ನಾಟಕಕ್ಕೆ ವಾಪಸ್ ಆದರು. ಇದು ಬಿಟ್ಟರೆ ಬೇರೇನೂ ಇಲ್ಲ ಎಂದು ಹೇಳಿದರು.
ಇದಕ್ಕೂ ಮುನ್ನ ಬೆಂಗಳೂರಿನ ನಿವಾಸದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ದೇವೇಗೌಡರಿಗೆ ನಿಖಿಲ್ ಮದುವೆ ಪ್ರಶ್ನೆ ಎದುರಾಯಿತು. ಇದಕ್ಕೆ ಹಾಸ್ಯ ಮಿಶ್ರಿತ ಧಾಟಿಯಲ್ಲಿ, ಹುಡುಗಿ ಒಪ್ಪಿದರೆ ಮದುವೆ ಮಾಡಿಸೋಣ ಎಂದು ಹೇಳಿರುವುದು ನಿಶ್ಚಿತಾರ್ಥ ಸುದ್ದಿ ಇನ್ನೊಂದಿಷ್ಟು ಮಹತ್ವ ಪಡೆದುಕೊಂಡಿತ್ತು.
ಇನ್ನು ಮೂರು ವರ್ಷಗಳ ಹಿಂದೆ, ಅಂದ್ರೆ 2015 ರಲ್ಲಿ ಪ್ರೀತಿಸಿದ ಹುಡುಗಿಯೊಂದಿಗೆ ನಿಖಿಲ್ ಕುಮಾರ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಚಿತ್ರ ನಿರ್ಮಾಪಕ ಕೆ.ಸಿ.ಎನ್.ಮೋಹನ್ ಪುತ್ರಿ ಸ್ವಾತಿಯೊಂದಿಗೆ ನಿಖಿಲ್ ಕುಮಾರ್ ಎಂಗೇಜ್ ಮೆಂಟ್ ಆಗಿತ್ತು. ಬಳಿಕ ಎಂಗೇಜ್ ಮೆಂಟ್ ಮುರಿದುಬಿದ್ದಿತ್ತು.
SCROLL FOR NEXT