ಬೆಂಗಳೂರು: ನಾವು ದಿನನಿತ್ಯ ಕುಡಿಯುತ್ತಿರುವ ಅಥವಾ ಬಳಸುತ್ತಿರುವ ನೀರು ಶುಚಿಯಾಗಿಲ್ಲ. ವಾರ್ಷಿಕವಾಗಿ 9 ಲಕ್ಷ ಮಿಲಿಯನ್ ಗೂ ಹೆಚ್ಚು ಲೀಟರ್ ಚರಂಡಿ ನೀರು ರಾಜ್ಯದ ನದಿಗಳಿಗೆ ಸೇರುತ್ತಿದೆ. ದಕ್ಷಿಣ ಭಾರತದಲ್ಲೇ ಕರ್ನಾಟಕ ಅತಿ ಹೆಚ್ಚು ಕಲುಷಿತ ಕೆರೆಗಳನ್ನು ಹೊಂದಿರುವ ರಾಜ್ಯವಾಗಿದೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ಪ್ರಕಾರ, ಕರ್ನಾಟಕದಲ್ಲಿ 15, ತಮಿಳುನಾಡಿನಲ್ಲಿ 7, ಕೇರಳದಲ್ಲಿ 13, ತೆಲಂಗಾಣದಲ್ಲಿ 7 ಮತ್ತು ಆಂಧ್ರಪ್ರದೇಶದಲ್ಲಿ ಆರು ಕಲುಷಿತ ನದಿಗಳಿವೆ. ದೇಶದಾದ್ಯಂತ 302 ನದಿಗಳು ಕಲುಷಿತಗೊಂಡಿವೆ. ಮಹಾರಾಷ್ಟ್ರದಲ್ಲಿ 49 , ಅಸ್ಸಾಂನಲ್ಲಿ 28, ಮಧ್ಯಪ್ರದೇಶದಲ್ಲಿ 21, ಗುಜರಾತಿನಲ್ಲಿ 20 ನದಿಗಳು ಕಲುಷಿತಗೊಂಡಿವೆ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಾರ ಪ್ರತಿದಿನ 3 ಸಾವಿರದದ 777 ಮಿಲಿಯನ್ ಲೀಟರ್ ಚರಂಡಿ ನೀರು ನದಿ ನೀರಾಗಿ ಪರಿವರ್ತಿತವಾಗುತ್ತಿದೆ. ಈ ಪೈಕಿ 1304 ಮಿಲಿಯನ್ ಲೀಟರ್ ಮಾತ್ರ ಬಳಸಲಾಗುತ್ತಿದೆ, ಉಳಿದ 2473 ಮಿಲಿಯನ್ ಲೀಟರ್ ಕಲುಷಿತ ನೀರಾಗಿದೆ.
ವಾರ್ಷಿಕವಾಗಿ 9 ಲಕ್ಷದ ಮೂರು ಸಾವಿರದ 645 ಮಿಲಿಯನ್ ಲೀಟರ್ ಚರಂಡಿ ನೀರು , ಕೈಗಾರಿಕಾ ತ್ಯಾಜ್ಯ ನೀರು ನದಿಗಳನ್ನು ಸೇರುತ್ತಿದೆ. 4. 75 ಲಕ್ಷ ಮಿಲಿಯನ್ ಮೀಟರ್ ಮಾತ್ರ ಬಳಸಲು ಯೋಗ್ಯವಾಗಿದೆ. ರಾಜ್ಯದಲ್ಲಿ ಶೇಕಡ 16 ರಷ್ಟು ಸ್ಥಳೀಯ ಸಂಸ್ಥೆಗಳು ನೀರು ಸಂಸ್ಕರಣಾ ಘಟಕಗಳನ್ನು ಹೊಂದಿವೆ. 219 ಸ್ಥಳೀಯ ಸಂಸ್ಥೆಗಳಲ್ಲಿ ಕೇವಲ 36ರಲ್ಲಿ ಮಾತ್ರ ನೀರು ಸಂಸ್ಕರಣಾ ಘಟಕಗಳನ್ನು ಅಳವಡಿಸಲಾಗಿದೆ..
ಎಷ್ಟು ಮಂದಿ ನದಿ ನೀರನ್ನು ಕಲುಷಿತಗೊಳಿಸುತ್ತಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲ. ನದಿ ನೀರು ಕಲುಷಿತ ತಡೆಗಟ್ಟುವಂತೆ ಕಾನೂನು ಜಾರಿಗೊಳಿಸುವಂತೆ ಸ್ಥಳೀಯ ಸಂಸ್ಥೆಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಲಕ್ಷ್ಮಣ್ ಹೇಳಿದ್ದಾರೆ.
ಕಲುಷಿತ ನೀರನ್ನು ಶೇಕಡಾ 100 ರಷ್ಟು ಶುದ್ಧೀಕರಿಸಲು ರಾಜ್ಯಾದ್ಯಂತ ನೀರು ಸಂಸ್ಕರಣಾ ಘಟಕಗಳನ್ನು ಸರ್ಕಾರ ಸ್ಥಾಪಿಸುತ್ತಿದೆ. ತ್ಯಾಜ್ಯ ನೀರನ್ನು ನದಿಗೆ ಬಿಡದಂತೆ ಸಾರ್ವಜನಿಕರಲ್ಲಿ ಅರಿವೂ ಮೂಡಿಸಲಾಗುತ್ತಿದೆ. ಕೈಗಾರಿಕೋದ್ಯಮಿಗಳು ಹಾಗೂ ಅಪಾರ್ಟ್ ಮೆಂಟ್ ಮಾಲೀಕರು ತಮ್ಮ ಕಟ್ಟಡಗಳಲ್ಲಿ ನೀರು ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಿ ಶುದ್ಧೀಕರಿಸಿದ ನಂತರ ನೀರನ್ನು ಹೊರ ಬಿಡಬೇಕಾದದ್ದು ಅವರ ಜವಾಬ್ದಾರಿಯಾಗಿದೆ ಎಂದು ಲಕ್ಷ್ಮಣ್ ಸೂಚಿಸಿದ್ದಾರೆ.