ರಾಜ್ಯ

'ಅವೈಜ್ಞಾನಿಕ ಅಧ್ಯಯನ' ಮೂಲಕ ಅಧಿಕ ಬೆಲೆ ತೋರಿಸಲು ರಾಜ್ಯದ ಖಾಸಗಿ ಆಸ್ಪತ್ರೆಗಳು ಮುಂದು!

Sumana Upadhyaya

ಬೆಂಗಳೂರು: ಕರ್ನಾಟಕ ಸರ್ಕಾರ, ಕೇಂದ್ರ ಸರ್ಕಾರದ ಜೊತೆ ಒಪ್ಪಂದ ಮಾಡಿಕೊಂಡು ಆಯುಷ್ಮಾನ್ ಭಾರತ-ರಾಷ್ಟ್ರೀಯ ಆರೋಗ್ಯ ರಕ್ಷಣಾ ಯೋಜನೆ(ಎಬಿ-ಎನ್ಎಚ್ ಪಿಎಸ್) ನ್ನು ಜಾರಿಗೆ ತರುವ ಸಿದ್ಧತೆಯಲ್ಲಿರುವಾಗ ಖಾಸಗಿ ಆಸ್ಪತ್ರೆಗಳು ಆರೋಗ್ಯ ಸೇವೆಗಳಿಗೆ ದುಬಾರಿ ಶುಲ್ಕ ತೋರಿಸಿ ಸರ್ಕಾರದಿಂದ ಹೆಚ್ಚು ಹಣ ಬರುವಂತೆ ಮಾಡಲು ಲಾಬಿ ನಡೆಸುತ್ತಿರುವುದು ಬಯಲಿಗೆ ಬಂದಿದೆ.

ಖಾಸಗಿ ಆಸ್ಪತ್ರೆಗಳೇ ವಿವಿಧ ರೋಗಗಳು ಮತ್ತು ಅವುಗಳ ಚಿಕಿತ್ಸೆಗಳಿಗೆ ಶುಲ್ಕವನ್ನು ನಿಗದಿಪಡಿಸಿ ಅದು ಸರ್ಕಾರದ ಕಡೆಯಿಂದ ಮಾಡಿರುವ ಸಮೀಕ್ಷೆ ಎಂದು ಜನರಿಗೆ ತೋರಿಸಲು ಕರ್ನಾಟಕ ಸರ್ಕಾರದ ಆರೋಗ್ಯ ವೆಚ್ಚ ಅಧ್ಯಯನ ಎಂದು ಹೆಸರನ್ನಿಟ್ಟಿವೆ. ಆದರೆ ಇದು ಸರ್ಕಾರಿ ಪ್ರಾಯೋಜಿತ ಸಮೀಕ್ಷೆಯಲ್ಲ ಎಂದು ಸ್ವತಃ ರಾಜ್ಯ ಆರೋಗ್ಯ ಇಲಾಖೆ ಕಾರ್ಯದರ್ಶಿಗಳೇ ಸ್ಪಷ್ಟಪಡಿಸಿದ್ದಾರೆ.

ಕರ್ನಾಟಕದಲ್ಲಿರುವ ಸುಮಾರು 3 ಸಾವಿರ ಖಾಸಗಿ ಆಸ್ಪತ್ರೆಗಳ ಸಂಪರ್ಕಜಾಲ ಅಸೋಸಿಯೇಷನ್ ಆಫ್ ಹೆಲ್ತ್ ಕೇರ್ ಪ್ರೊವೈಡರ್ಸ್ ಇಂಡಿಯಾ(ಎಎಚ್ ಪಿಐ) ಎಬಿ-ಎನ್ಎಚ್ ಪಿಎಸ್ ಗೆ ಪತ್ರ ಬರೆದು, ಪರಿಷ್ಕೃತ ದರ ಕರ್ನಾಟಕ ಸರ್ಕಾರ ಮಾಡಿರುವ ಅಧ್ಯಯನ ಪ್ರಕಾರ ನಿಜವಾದ ಆರೋಗ್ಯ ವೆಚ್ಚದ ಹತ್ತಿರಕ್ಕೂ ಬರುವುದಿಲ್ಲ ಎಂದು ವರದಿ ನೀಡಿದೆ.

ಸಮೀಕ್ಷೆಯಲ್ಲಿ 20 ರೋಗಗಳ ಚಿಕಿತ್ಸಾ ವಿಧಾನಗಳು ಮತ್ತು ಅವುಗಳ ವೆಚ್ಚಗಳ ಬಗ್ಗೆ ಖಾಸಗಿ, ಸರ್ಕಾರಿ ಮತ್ತು ಇತರ ಲಾಭರಹಿತ ಸಂಘಟನೆಗಳಲ್ಲಿ ಎಷ್ಟೆಷ್ಟು ವೆಚ್ಚವಾಗುತ್ತದೆ ಎಂದು ಒಟ್ಟಾಗಿ ಅಧ್ಯಯನ ಮಾಡಿ ಸರ್ಕಾರಕ್ಕೆ ಸಮೀಕ್ಷೆ ಸಲ್ಲಿಸಬೇಕಾಗುತ್ತದೆ. ಆದರೆ ಈ ಅಧ್ಯಯನದಲ್ಲಿ ಭಾಗಿಯಾಗಿದ್ದು ಬೆಂಗಳೂರಿನಲ್ಲಿರುವ ಕೇವಲ 4 ಖಾಸಗಿ ಆಸ್ಪತ್ರೆಗಳು ಮಾತ್ರ. ಈ ಅಧ್ಯಯನ ಕಳೆದ ವರ್ಷ ಕರ್ನಾಟಕ ಸಾರ್ವಜನಿಕ ಆರೋಗ್ಯ ನೀತಿಯ ಅಧ್ಯಯನ 1ರಲ್ಲಿ ಪ್ರಕಟವಾಗಿದೆ. ಇದನ್ನು ಕರ್ನಾಟಕ ಜ್ಞಾನ ಆಯೋಗ ಪ್ರಕಟಿಸಿತ್ತು. ಜ್ಞಾನ ಆಯೋಗದ ಅಡಿಯಲ್ಲಿ ಹಲವು ಉಪ ಸಮಿತಿಗಳಿವೆ. ಇದರ ಅಧ್ಯಕ್ಷತೆ ವಹಿಸಿರುವ ಮತ್ತು ಹಲವು ಖಾಸಗಿ ಆಸ್ಪತ್ರೆಗಳ ಮುಂದಾಳತ್ವ ವಹಿಸಿರುವ ನಾರಾಯಣ ಹೃದಯಾಲಯದ ಡಾ ದೇವಿಶೆಟ್ಟಿ ಈ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಆಯುಷ್ಮಾನ್ ಭಾರತ-ರಾಷ್ಟ್ರೀಯ ಆರೋಗ್ಯ ರಕ್ಷಣಾ ಯೋಜನೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಇಂದು ಭೂಷಣ್ ಅಧ್ಯಯನಕ್ಕೆ ಬಳಸಿರುವ ಕಾರ್ಯವಿಧಾನಗಳು ಪ್ರಶ್ನಾರ್ಥಕವಾಗಿದೆ. ವೈಜ್ಞಾನಿಕ ಮಾದರಿಯನ್ನು ಇಲ್ಲಿ ಅನುಸರಿಸಿಲ್ಲ. ಈ ಅಧ್ಯಯನಕ್ಕೆ ಕರ್ನಾಟಕ ಸರ್ಕಾರ ಅನುಮೋದನೆ ನೀಡಿಲ್ಲ. ಮುಂದಿನ ವಾರ ಒಪ್ಪಂದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಹಿ ಹಾಕಲಿವೆ. ಆದರೆ ಈ ಅಧ್ಯಯನ ಆತಂಕಕಾರಿಯಾಗಿದೆ ಎಂದರು.

ಸ್ಥಳೀಯ ವಿಧಾನ ಮತ್ತು ವೆಚ್ಚದ ಆಧಾರದ ಮೇಲೆ ಚಿಕಿತ್ಸಾ ವೆಚ್ಚವನ್ನು ಹೆಚ್ಚು ಕಡಿಮೆ ಮಾಡಲು ಸರ್ಕಾರ ಅನುಮತಿ ನೀಡಿದೆ. ಶೇಕಡಾ 10ರಷ್ಟು ಖಾಸಗಿ ಆಸ್ಪತ್ರೆಗಳು ವೆಚ್ಚ ಹೆಚ್ಚಿಸಬಹುದು. ರಾಷ್ಟ್ರೀಯ ಆಯುಷ್ಮಾನ್ ಆರೋಗ್ಯ ಸೇವೆಯಡಿ ಚಿಕಿತ್ಸಾ ವೆಚ್ಚವನ್ನು ಶೇಕಡಾ 10ರಿಂದ 15ರಷ್ಟು ಹೆಚ್ಚಳ ಮಾಡಬಹುದು. ವೈದ್ಯಕೀಯ ಕಾಲೇಜುಗಳಲ್ಲಿ ಕೂಡ ಶೇಕಡಾ 10ರಷ್ಟು ಹೆಚ್ಚಿಸಬಹುದು. ಕೇಂದ್ರ ಸರ್ಕಾರ ಆರೋಗ್ಯ ಯೋಜನೆಗಳಿಗಿಂತ ರಾಜ್ಯದಲ್ಲಿ ಕೆಲವು ಚಿಕಿತ್ಸೆಗಳಿಗೆ ವೆಚ್ಚ ಹೆಚ್ಚಿರುತ್ತದೆ ಎಂದು ಹೇಳಿದರು.

SCROLL FOR NEXT