ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಅಧಿಕಾರಿಗಳ ಮೇಲಿನ ಹಲ್ಲೆ ಹಾಗೂ ಪದೇ ಪದೇ ವರ್ಗಾವಣೆ ಸೇರಿದಂತೆ ಹಲವು ಘಟನೆಗಳ ಬಗ್ಗೆ ಐಪಿಎಸ್ ಅಧಿಕಾರಿಗಳ ಸಂಘ ಭಾನುವಾರ ತೀವ್ರ ಅಸಮಾಧಾನವನ್ನು ಹೊರಹಾಕಿದೆ.
ಈ ಸಂಬಂಧ ಸಂಘದ ಅಧ್ಯಕ್ಷರೂ ಆಗಿರುವ ಹಿರಿಯ ಐಪಿಎಸ್ ಅಧಿಕಾರಿ, ಡಾ.ರಾಜ್ ವೀರ್ ಪ್ರತಾಪ್ ಶರ್ಮಾ ಅವರು, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರಿಗೆ ಪತ್ರ ಬರೆದಿದ್ದಾರೆ.
ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಅವರ ಮೇಲಿನ ಹಲ್ಲೆ, ಯುಬಿ. ಸಿಟಿಯಲ್ಲಿ ಉದ್ಯಮಿ ಪುತ್ರ ವಿದ್ವತ್ ಎಂಬುವವರ ಮೇಲೆ ನಡೆದ ಹಲ್ಲೆ, ಕಾಂಗ್ರೆಸ್ ಕಾರ್ಯಕರ್ತ ನಾರಾಯಣ ಸ್ವಾಮಿ ದಾಂಧಲೆ, ಐಎಸ್ ಅಧಿಕಾರಿ ರಶಅಮಿ ಅವರ ಮೇಲೆ ಮೈಸೂರಿನಲ್ಲಿ ನಡೆದ ಹಲ್ಲೆ, ಕಾವೇರಿ ತೀರ್ಪು ವೇಳೆ ರಾಜ್ಯದಲ್ಲಿ ನಡೆದ ಗಲಾಟೆ ಬಗ್ಗೆ ಪತ್ರದಲ್ಲಿ ಪ್ರಸಾಪಿಸಿರುವ ಅವರು, ಇಂತಹ ಘಟನೆಗಳು ಪೊಲೀಸ್ ವೃತ್ತಿ ಮತ್ತು ಘನತೆಯನ್ನು ದುರ್ಬಲಗೊಳಿಸುತ್ತವೆ ಎಂದು ಹೇಳಿಕೊಂಡಿದ್ದಾರೆ.
ಪ್ರಬಲವಾದ ಮತ್ತು ವೃತ್ತಿಪರ ಪೊಲೀಸ್ ವ್ಯವಸ್ಥೆ ಇದ್ದಿದ್ದರೆ ಇಂತಹ ಘಟನೆಗಳು ಸಂಭವಿಸುತ್ತಿರಲಿಲ್ಲ. ಸಾಮಾನ್ ಜನತೆ ತಮಗೆ ತೊಂದರೆಯಾದರೆ ಐಎಎಸ್, ಲೋಕಾಯುಕ್ತ, ಪೊಲೀಸ್ ಇವರ ಬಳಿ ರಕ್ಷಣೆ ಕೋರಿ ಬರುತ್ತಾರೆ. ವಿಪರ್ಯಾಸವೆಂದರೆ ಪ್ರಸ್ತುತದ ದಿನಗಳಲ್ಲಿ ಪೊಲೀಸರಿಗೆ ಹಾಗೂ ಅಧಿಕಾರಿಗಳಿಗೇ ರಕ್ಷಣೆ ಇಲ್ಲದಂತಾಗಿದೆ.
ಸಾರ್ವಜನಿಕರ ನಂಬಿಕೆ ಉಳಿಸಿಕೊಳ್ಳಬೇಕೆಂದರೆ ಸೂಕ್ತವಾದ ನಾಯಕತ್ವ ಇರಬೇಕು. ಐಪಿಎಸ್ ಅಧಿಕಾರಿಗಳೇ ತಮ್ಮ ಕರ್ತವ್ಯ ಲೋಪದಿಂದಾಗಿ ಶಿಕ್ಷೆಗಳಿಗೆ ಗುರಿಯಾಗುತ್ತಿದ್ದಾರೆ. ರಾಜಕಾರಣಿಗಳ ಪ್ರಭಾವದಿಂದಾಗಿ ಪ್ರಮುಖ ಪ್ರಕರಣಗಳ ತನಿಖೆ ಹಳ್ಳ ಹಿಡಿಯುತ್ತಿದ್ದು,ಕ ಕಾನೂನಿನ ಮೇಲೆ ಭಯ ಇಲ್ಲದಂತಾಗಿದೆ.
ರಾಜಕೀಯ ಹಸ್ತಕ್ಷೇಪದಿಂದ ಹಿರಿಯ ಐಪಿಎಸ್ ಅಧಿಕಾರಿಗಳ ನೇತೃತ್ವದಲ್ಲಿರುವ ಸಂಸ್ಥೆಗಳ ಘನತೆ ಕೂಡ ಕ್ಷೀಣಿಸುತ್ತದೆ. ಹೀಗಾಗಿ ಭಾರತೀಯ ಪೊಲೀಸ್ ಸೇವೆ ದೇಶದಲ್ಲಿ ತನ್ನ ಹಿಡಿತವನ್ನು ಕಳೆದುಕೊಳ್ಳುತ್ತಿದೆ ಎಂದು ಪತ್ರದಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.
ಈ ಕಾರಣಗಳಿಂದಾಗಿ ನಮ್ಮ ಮುಂದಿರುವ ಗುರಿ ಎಂದರೆ ಮುಕ್ತವಾದ ಮತ್ತು ನಿಷ್ಪಕ್ಷಪಾತ ಚುನಾವಣೆ ನಡೆಸುವುದು. ಬಳಿಕ ದೂರಗಾಮಿಯಾಗಿ ವೃತ್ತಿಪರ ಮೌಲ್ಯವಲನ್ನೂ ವೃದ್ಧಿಸುವ ಗುರಿ ಇಟ್ಟುಕೊಳ್ಳಬೇಕಾಗಿದೆ. ಈ ಮೂಲಕ ಐಪಿಎಸ್ ಅಸೋಸಿಯೇಷನ್ ನ ಎಲ್ಲಾ ಪದಾಧಿಕಾರಿಗಳಿಗೂ ತಕ್ಷಣ ಸಭೆ ಸೇರಿವ ಅಗತ್ಯವಿದೆ ಎಂದು ರತ್ನಪ್ರಭಾ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ಇದೇ ವೇಳೆ ಐಪಿಎಸ್ ಅಧಿಕಾರಿಗಳನ್ನು ಪದೇ ಪದೇ ವರ್ಗಾವಣೆ ಮಾಡುತ್ತಿರುವುದಕ್ಕೆ ತೀವ್ರವಾಗಿ ಕಿಡಿಕಾರಿರುವ ಅವರು, ವರ್ಗಾವಣೆಯಿಂದಾಗಿ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಕಳೆದ ನಾಲ್ಕೂವರೆ ವರ್ಷದಲ್ಲಿ ಆರು ಮಂದಿ ಆಯುಕ್ತರುಗಳನ್ನು ಬೆಂಗಳೂರು ನಗರ ಕಂಡಿದೆ.
ಪೊಲೀಸ್ ಅಧಿಕಾರಿಗಳು ಅಧಿಕಾರ ಸ್ಥಾನದ ಜವಾಬ್ದಾರಿಯನ್ನು ಈಡೇರಿಸುವುದರಲ್ಲಿ ಮಾತ್ರ ನಿರತರಾಗಿದ್ದಾರೆಯೇ ಹೊರತು ತಮ್ಮ ಸಂವಿಧಾನಬದ್ಧ ಅಧಿಕಾರವನ್ನು ಚಲಾಯಿಸುತ್ತಿಲ್ಲ ಎನ್ನುವುದಕ್ಕೆ ಲೋಕಾಯುಕ್ತರ ಮೇಲಿನ ದಾಳಿಯೇ ಉದಾಹರಣೆಯಾಗಿದೆ ಎಂದಿದ್ದಾರೆ.
ಐಪಿಎಸ್ ಅಧಿಕಾರಿಗಳು ತಮ್ಮ ಸಂವಿಧಾನಬದ್ಧ ಕರ್ತವ್ಯದ ಹಾದಿಯನ್ನು ನಿರ್ಧರಿಸಬೇಕು. ಸಾರ್ವಜನಿಕರ ಕಣ್ಣಿನಲ್ಲಿ ಹಾದಿ ತಪ್ಪಿರುವವರ ಮಾರ್ಗವನ್ನು ಬದಲಾಯಿಸಿ ಕರ್ತವ್ಯವವನ್ನು ವೃತ್ತಿಪರವಾಗಿ ನಿರ್ವಹಿಸಬೇಕೆನ್ನುವುದು ಸಂಘದ ಆಯವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos