ವಿಮಾ ಕಂತು ದುಬಾರಿ ಆರೋಪ, ಏ. 7ರಿಂದ ರಾಷ್ಟ್ರವ್ಯಾಪಿ ಲಾರಿ ಮುಷ್ಕರ
ಬೆಂಗಳೂರು: ವಿಮಾ ಕಂತು ಏರಿಕೆಯನ್ನು ವಿರೋಧಿಸಿ ಏಪ್ರಿಲ್ 7ರಿಂದ ರಾಷ್ಟ್ರದಾದ್ಯಂತ ಅನಿರ್ದಿಷ್ಟಾವಧಿ ಲಾರಿ ಮುಷ್ಕರ ನಡೆಸಲಾಗುವುದು ಎಂದು ಅಖಿಲ ಭಾರತೀಯ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಬಿ.ಚನ್ನಾರೆಡ್ಡಿ ಹೇಳಿದ್ದಾರೆ.
ಮೂರನೇ ವ್ಯಕ್ತಿಯ ವಾಹನ ವಿಮೆ ಹಣ ವರ್ಷದಿಂದ ವರ್ಷಕ್ಕೆ ಅಗಾಧ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಇದನ್ನು ಖಂಡಿಸಿ ನಾವು ರಾಷ್ಟ್ರವ್ಯಾಪಿ ಲಾರಿ ಮುಷ್ಕರ ನಡೆಸಲಿದ್ದೇವೆ ಎಂದು ಅವರು ಹೇಳಿದ್ದಾರೆ.
ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು ಮೂರನೇ ವ್ಯಕ್ತಿಯ ವಾಹನ ವಿಮೆಯನ್ನು ಕಡಿತಗೊಳಿಸುವಂತೆ ವಿಮಾ ನಿಯಂತ್ರಣ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ವಿಮಾ ನಿಯಂತ್ರಣ ಪ್ರಾಧಿಕಾರ ದರ ಪರಿಷ್ಕರಣೆ ಮಾಡದ ಕಾರಣ ಈ ಅನಾನುಕೂಲ ಉಂಟಾಗಿದೆ. ಫಸ್ಟ್ ಪಾರ್ಟಿ ಇನ್ಸೂರೆನ್ಸ್ಗೆ ಶೇ.70ರಷ್ಟು ರಿಯಾಯಿತಿ ನೀಡುತ್ತಿದ್ದು ಥರ್ಡ್ ಪಾರ್ಟಿಇನ್ಸೂರೆನ್ಸ್ಗೆ ಮಾತ್ರ ಯಾವ ರಿಯಾಯಿತಿ ಇಲ್ಲವಾಗಿದೆ. 10 ವರ್ಷಗಳ ಹಿಂದೆ ಓರಿಯಂಟಲ್, ನ್ಯೂ ಇಂಡಿಯಾ, ಯುನಿಟೆಡ್ ಇಂಡಿಯಾ, ನ್ಯಾಷನಲ್ ಇನ್ಸೂರೆನ್ಸ್ ಮಾತ್ರವೇ ಇದ್ದವು, ಇದೀಗ 24 ಖಾಸಗಿ ಇನ್ಸೂರೆನ್ಸ್ ಕಂಪೆನಿಗಳಿವೆ.ಇನ್ಸೂರೆನ್ಸ್ ಕಂಪೆನಿಗಳ ದರ ನಿಗದಿ ಮಾಡುವ ತನ್ನ ಕಾರ್ಯವನ್ನು ಐಆರ್ಡಿಎ ನಿಲ್ಲಿಸಬೇಕು. ವಾರ್ಷಿಕ ಅವಧಿಯಲ್ಲಿ ಕ್ಕೆ 439 ರಿಂದ 117 ರಷ್ಟು ಥರ್ಡ್ ಪಾರ್ಟಿ ವಿಮಾ ದರ ಹೆಚ್ಚಳವಾಗುತ್ತಿದೆ ಎಂದರು.
ವಿಮಾ ಪ್ರಾಧಿಕಾರವು ವಿಮಾ ಸಂಸ್ಥೆಗಳ ಪರವಾಗಿ ಕೆಲಸ ಮಾಡುತ್ತಿರು ಅನುಮಾನ ಇದೆ ಎಂದು ಅವರು ಆರೋಪಿಸಿದ್ದಾರೆ.
ಏ.7ರಿಂದ ಸರಕು ಲಾರಿಗಳು ಸಂಚಾರವನ್ನು ನಿಲ್ಲಿಸಲಿದೆ. ಪಡಿತರ ವಿತರಣೆ ಲಾರಿಗಳ ಓಡಾಟವೂ ಸ್ಥಗಿತಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ.