ಬೆಂಗಳೂರು: ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಬ್ಬಿದ ತಮ್ಮ ಸಾವಿನ ವದಂತಿ ಕುರಿತು ಸಾಲುಮರದ ತಿಮ್ಮಕ್ಕ ತೀವ್ರ ನೋವು ವ್ಯಕ್ತಪಡಿಸಿದ್ದು, ಈ ಸಂಬಂಧ ಪೊಲೀಸ್ ದೂರು ದಾಖಲಿಸಿದ್ದಾರೆ.
ಈ ಬಗ್ಗೆ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಸಾಲುಮರದ ತಿಮ್ಮಕ್ಕ, ನಾನಿನ್ನೂ ಜೀವಂತವಾಗಿದ್ದೇನೆ. ನನ್ನ ಸಾವಿನ ಸುಳ್ಳು ಸುದ್ದಿ ನನಗೆ ತುಂಬಾ ಬೇಸರ ತಂದಿದೆ. ಈ ರೀತಿ ಸುಳ್ಳು ಸುದ್ದಿ ಹಬ್ಬಿಸುವ ಮೊದಲು ಸತ್ಯಾಸತ್ಯತೆ ತಿಳಿದುಕೊಳ್ಳಬೇಕು ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಇದೇ ವಿಚಾರವಾಗಿ ಇಂದು ಪೊಲೀಸ್ ಕಮೀಷನರ್ ಕಚೇರಿಗೆ ತೆರಳಿ ದೂರು ದಾಖಲಿಸಿದ್ದಾರೆ.
'ಈ ರೀತಿ ಸುಳ್ಳು ಸುದ್ದಿ ಹಬ್ಬಿಸುವುದನ್ನು ಕೂಡಲೇ ನಿಲ್ಲಿಸಬೇಕು. ಈ ವಿಚಾರವಾಗಿ ಮಾಧ್ಯಮ ಮಿತ್ರರಾದರೂ ನನಗೆ ನ್ಯಾಯ ದೊರಕಿಸಿಕೊಡಿ ಎಂದು ಮನವಿ ಮಾಡಿದರು. ಅಲ್ಲದೇ ಈ ಸಂಬಂಧ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಆಫೀಸ್ನಲ್ಲಿ ದೂರು ಸಲ್ಲಿಸಿದ್ದೇನೆ. ಕೂಡಲೇ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದೇನೆ ಎಂದರು. ನಾನು ಯಾರಿಗೂ ಕೆಟ್ಟದ್ದು ಬಯಸಿಲ್ಲ, ಆದ್ರೆ ನನ್ನ ಬಗ್ಗೆ ಈ ರೀತಿ ಸುಳ್ಳು ವದಂತಿ ನೋಡಿ ಬೇಸರವೆನಿಸಿದೆ ಎಂದು ಹೇಳಿದರು.
ಇದೇ ವೇಳೆ ತಿಮ್ಮಕ್ಕ ಅವರ ದತ್ತು ಪುತ್ರ ಉಮೇಶ್ ಮಾತನಾಡಿ, ತಿಮ್ಮಕ್ಕನವರು ಜೀವಂತವಾಗಿಯೇ ಇದ್ದಾರೆ. ಆದರೆ ಈ ರೀತಿಯ ಸುದ್ದಿ ನೋಡಿ ನನಗೆ ಬೇಸರವಾಗಿದೆ. ಅವರಿಗೆ ರಾಜ್ಯ, ದೇಶ, ವಿದೇಶದಲ್ಲಿಯೂ ಬಹಳಷ್ಟು ಅಭಿಮಾನಿಗಳು ಇದ್ದಾರೆ. ಈ ರೀತಿಯ ಸುಳ್ಳು ಸುದ್ದಿ ನೋಡಿ ಎಲ್ಲರೂ ಫೋನ್ ಮಾಡ್ತಿದ್ದಾರೆ. ಎಲ್ಲರಿಗೂ ಉತ್ತರಿಸುವುದು ಸ್ವಲ್ಪ ಕಷ್ಟವಾಗುತ್ತಿದೆ. ಅವರು ಆರೋಗ್ಯವಾಗಿದ್ದಾರೆ ಇನ್ನೂ ಬಹಳಷ್ಟು ವರ್ಷ ಇರ್ತಾರೆ ಎಂದು ಹೇಳಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos