ಬೆಂಗಳೂರು: ಮಕ್ಕಳ ಕಳ್ಳರ ವದಂತಿಯಿದಾಗಿ ಅಮಾಯಕರ ಮೇಲಿನ ದಾಳಿ ಪ್ರಕರಣಕ್ಕೆ ಬ್ರೇಕ್ ಬಿದ್ದಿದೆ ಎನ್ನುವಾಗಲೇ ಅಂತಹುದೇ ಮತ್ತೊಂದು ಪ್ರಕರಣ ಬಯಲಾಗಿದೆ.
ರಾಜಧಾನಿ ಬೆಂಗಳೂರಿನಲ್ಲಿ ಮಕ್ಕಳ ಕಳ್ಳ ಎಂದು ಭಾವಿಸಿ ಸ್ಥಳೀಯರು ಮಾನಸಿಕ ಅಸ್ವಸ್ಥನನ್ನು ಹಿಡಿದು ಮನಸೋ ಇಚ್ಛೆ ಥಳಿಸಿರುವ ಘಟನೆ ನಡೆದಿದೆ. ಕಾಡುಗೋಡಿ ಠಾಣಾ ವ್ಯಾಪ್ತಿಯ ಪಟಾಲಮ್ಮ ಲೇಔಟ್ನಲ್ಲಿ ಈ ಘಟನೆ ನಡೆದಿದ್ದು, ಬೇರೆ ಭಾಷೆಯಲ್ಲಿ ಮಾತನಾಡಿದ ಎಂದು ವ್ಯಕ್ತಿಯ ಮೇಲೆ ಸ್ಥಳೀಯರು ಮಕ್ಕಳ ಕಳ್ಳ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಆತನನ್ನು ಮರಕ್ಕೆ ಕಟ್ಟಿ ಮನಬಂದಂತೆ ಥಳಿಸಿದ್ದಾರೆ.
ಈ ವೇಳೆ ಕೆಲ ಆಕ್ರೋಶಿತ ಸ್ಥಳೀಯ ಯುವಕರು ವ್ಯಕ್ತಿಯ ಮೇಲೆ ಮನಸೋ ಇಚ್ಛೆ ದಾಳಿ ಮಾಡಿದ್ದಾರೆ, ಎಷ್ಟು ಜನ ಬಂದಿರುವಿರಿ? ಎಲ್ಲಿದೆ ನಿನ್ನ ಆಧಾರ್ ಕಾರ್ಡ್? ನಿಂಗೆ ತಿನ್ನೋಕೆ ಕೊಡಬೇಕಾ ಅಂತಾ ಕೇಳುತ್ತಲೇ ಕಪಾಳಕ್ಕೆ ಹೊಡೆದು ಅಮಾನವೀಯತೆ ಮೆರೆದಿದ್ದಾರೆ. ಕೆಲವರಂತು ಮರದ ತುಂಡಿನಿಂದ ಥಳಿಸಿದ್ದಾರೆ. ಕೆಲವರು ಇದನ್ನು ವಿಡಿಯೋ ಮಾಡಿಕೊಂಡಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಇನ್ನು ವಿಚಾರ ತಿಳಿಯುತ್ತಿದ್ದಂತೆಯೇ ಕಾಡುಗೋಡಿ ಪೊಲೀಸರು ಸ್ಖಳಕ್ಕೆ ದೌಡಾಯಿಸಿದ್ದು, ವ್ಯಕ್ತಿಯ ರಕ್ಷಣೆ ಮಾಡಿದ್ದಾರೆ. ಅಲ್ಲದೆ ಹಲ್ಲೆ ಪ್ರಕರಣ ದಾಖಲಿಸಿಕೊಂಡು ದಾಳಿ ಮಾಡಿದ ನಾಲ್ಕು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇತ್ತೀಚೆಗಷ್ಟೇ ಕರ್ನಾಟಕದ ಬೀದರ್ ನಲ್ಲಿ ಮಕ್ಕಳ ಕಳ್ಳರು ಎಂದು ಟೆಕ್ಕಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಕೊಂದು ಹಾಕಲಾಗಿತ್ತು.