ರಾಜ್ಯ

ಕಳ್ಳತನ ಮಾಡಿದ್ದ ಚಿನ್ನ ಖರೀದಿ; ಅಟ್ಟಿಕಾ ಗೋಲ್ಡ್ ಕಂಪೆನಿ ಮಾಲಿಕ ಬಂಧನ

Sumana Upadhyaya

ಬೆಂಗಳೂರು: ಕಳ್ಳತನ ಮಾಡಿದ ಚಿನ್ನವನ್ನು ಖರೀದಿಸಿದ ಆರೋಪದ ಮೇಲೆ ಅಟ್ಟಿಕಾ ಗೋಲ್ಡ್ ಕಂಪೆನಿಯ ಮಾಲಿಕ ಬೊಮ್ಮನಹಳ್ಳಿ ಬಾಬು ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಅಟ್ಟಿಗಾ ಗೋಲ್ಡ್ ಕಂಪೆನಿಯ ಕಚೇರಿಗೆ ಆಗಮಿಸಿ ಬೊಮ್ಮನಹಳ್ಳಿ ಬಾಬು ಅವರನ್ನು ಮಾಗಡಿ ಪೊಲೀಸರು ಬಂಧಿಸಿ ಪೊಲೀಸ್ ವಾಹನದಲ್ಲಿ ಕೂರಿಸಲು ನೋಡಿದಾಗ ಅವರ ಬೆಂಬಲಿಗರು ಪೊಲೀಸರ ಮೇಲೆ ದಾಳಿ ಮಾಡಿದರು. ನಂತರ, ವಿದ್ಯಮಾನವನ್ನು ಸೆರೆಹಿಡಿಯುತ್ತಿದ್ದ ಮಾಧ್ಯಮ ಪ್ರತಿನಿಧಿಗಳು ಮತ್ತು ಛಾಯಾಗ್ರಾಹಕರ ಮೇಲೆ ಕೂಡ ಬೆಂಬಲಿಗರು ಹಲ್ಲೆ ನಡೆಸಲು ಯತ್ನಿಸಿದ್ದಾರೆ ಎಂದು ಮಾಗಡಿ  ಪೊಲೀಸರು ತಿಳಿಸಿದ್ದಾರೆ.

ಮಾಗಡಿ ಸರ್ಕಲ್ ಇನ್ಸ್ ಪೆಕ್ಟರ್ ಶಬರಿಶ್ ನೇತೃತ್ವದ ವಿಶೇಷ ತಂಡ ಬೊಮ್ಮನಹಳ್ಳಿ ಬಾಬು ಮತ್ತು ಇಬ್ಬರು ಮಹಿಳಾ ಸಿಬ್ಬಂದಿಯನ್ನು ಬಂಧಿಸಿದ್ದು ಮೂರು ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಲಾಗುತ್ತಿದೆ ಎಂದು ರಾಮನಗರ ಪೊಲೀಸ್ ಸೂಪರಿಂಟೆಂಡೆಂಟ್ ರಮೇಶ್ ಬಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ.

ಅಟ್ಟಿಕಾ ಗೋಲ್ಡ್ ಕಂಪೆನಿಯ ಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿರುವ ಬೊಮ್ಮನಹಳ್ಳಿ ಬಾಬು, ಕಂಪೆನಿಯ ಹೆಚ್ಚುವರಿ ನಿರ್ದೇಶಕಿ ವಸಂತ ಕುಮಾರಿ ಹಾಗೂ ಸಹಾಯಕ ವ್ಯವಸ್ಥಾಪಕಿ ಭವಾನಿಯವರನ್ನು ಪೊಲೀಸರು ಬಂಧಿಸಿದ್ದಾರೆ. ತನಿಖೆಗೆ ಪೊಲೀಸ್ ಕಸ್ಟಡಿಗೊಪ್ಪಿಸಲು ನಾವು ನ್ಯಾಯಾಲಯದ ಮುಂದೆ ಅವರನ್ನು ಹಾಜರುಪಡಿಸುತ್ತೇವೆ. ನ್ಯಾಯಾಲಯದ ಆದೇಶದ ಪ್ರಕಾರ ವಾರದ ಹಿಂದೆ ಬಾಬು ಅವರಿಗೆ ನೊಟೀಸ್ ನೀಡಿದ್ದೆವು. ಆದರೆ ಅವರು ಉತ್ತರಿಸಿರಲಿಲ್ಲ, ನ್ಯಾಯಾಲಯದ ಆದೇಶದ ಪ್ರಕಾರ ನಾವು ಅವರನ್ನು ಬಂಧಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ನೆಲಮಂಗಲ ಮೂಲದ ವಿನೋದ್, ಅಭಿಲಾಷ್ ಮತ್ತು ಮಧು ವಿರುದ್ಧ ಎರಡು ಕಳ್ಳತನ ಮತ್ತು ಒಂದು ಡಕಾಯಿತಿ ಕೇಸು ಮಾಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ತಾವು ಕದ್ದ ಚಿನ್ನವನ್ನು ಅಟ್ಟಿಗಾ ಗೋಲ್ಡ್ ಕಂಪೆನಿಯಲ್ಲಿ ಅಡವು ಇಟ್ಟಿರುವುದಾಗಿ ತಪ್ಪೊಪ್ಪಿಕೊಂಡಿದ್ದರು. 108 ಗ್ರಾಮ್ ತೂಕದ ಚಿನ್ನವನ್ನು ಅಡವಿಟ್ಟಿದ್ದು ಚಿನ್ನ ತೆಗೆದುಕೊಳ್ಳುವ ಸಂದರ್ಭದಲ್ಲಿ ಅಟ್ಟಿಕಾ ಗೋಲ್ಡ್ ಕಂಪೆನಿಯ ಸಿಬ್ಬಂದಿ ಸರಿಯಾಗಿ ವಿಚಾರಿಸಿರಲಿಲ್ಲ.

ನಿಖರ ಮಾಹಿತಿ ಆಧಾರದ ಮೇಲೆ ಕಳೆದ ಭಾನುವಾರ ಕಂಪೆನಿ ಮೇಲೆ ಪೊಲೀಸರು ದಾಳಿ ನಡೆಸಿ ಅಡವಿಟ್ಟಿದ್ದ 92 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದರು. ಉಳಿದ ಚಿನ್ನವನ್ನು ವಶಪಡಿಸಿಕೊಳ್ಳಬೇಕಾಗಿದೆ ಎಂದು ಪೊಲೀಸ್ ಅಧಿಕಾರಿ ಶಬರಿಶ್ ತಿಳಿಸಿದ್ದಾರೆ.

SCROLL FOR NEXT