ಕುಂದಾಪುರ: ರಾಜ್ಯಾದ್ಯಂತ ಸುದ್ದಿ ಮಾಡಿದ್ದ ಕುಂದಾಪುರ ಎಡುಮೊಗೆ ಗ್ರಾಮದ ಮಗು ಅಪಹರಣ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕೌಟುಂಬಿಕ ಕಲಹಕ್ಕೆ ಬೇಸತ್ತು ತನ್ನ ಮಕ್ಕಳೋಡನೆ ಆತ್ಮಹತ್ಯೆ ಮಾಡಿಕೊಳ್ಳಲು ಹೋದ ತಾಯಿ ತನ್ನ ಕೈಯಾರೆ ಮಗುವನ್ನು ನೀರಿಗೆಸೆದು ಅಪಹರಣದ ಕಥೆ ಕಟ್ಟಿರುವುದು ಈಗ ಸಾಬೀತಾಗಿದೆ.
ಗುರುವಾರ ಬೆಳಿಗ್ಗೆ ಅಪಹರಣವಾಗಿದ್ದೆನ್ನಲಾಗಿದ್ದ ಮಗುವಿನ ಶವರೇಖಾ ನಾಯ್ಕ ಅವರ ಮನೆಯಿಂದ ಸುಮಾರು ಮೂರು ಕಿಮೀ ದೂರದಲ್ಲಿ ಕುಬ್ಜಾ ನದಿಯಲ್ಲಿ ಶುಕ್ರವಾರ ಸಿಕ್ಕಿದೆ. ಮೃತ ಮಗು ಸಾನ್ವಿಕಾ ಎರಡು ವರ್ಷದವಳಲ್ಲದೆ ಕೇವಲ ಒಂದೂವರೆ ವರ್ಷದವಳಾಗಿದ್ದಳು. ತಾಯಿ ತನ್ನಿಬ್ಬರು ಮಕ್ಕಳೋಡನೆ ಆತ್ಮಹತ್ಯೆಗೆ ಯತ್ನಿಸಿದ್ದಾಗ ಸಾನ್ವಿಕಾಳನ್ನು ಮೊದಲು ನೀರಿಗೆ ಬಿಟ್ಟಿದ್ದಾಳೆ ಬಳಿಕ ತನ್ನ ಇನ್ನೊಬ್ಬ ಮಗನನ್ನೂ ಹೊಳೆಗೆ ದೂಡಿಉ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಶುಕ್ರವಾರ ಬೆಳಿಗ್ಗೆ 11ರ ಸುಮಾರಿಗೆ ಹೊಸಂಗಡಿಯ ಶೇಡಿಗುಡ್ಡೆ ಹೊಳೆಯಲ್ಲಿ ಮಗುವಿನ ಶವ ಪತ್ತೆಯಾಗಿದ್ದು ತಾಯಿ ರೇಖಾ ನಾಯ್ಕ ಕಡೆಗೂ ಪೋಳೀಸರೆದುರು ನಿಜ ವಿಷಯ ಒಪ್ಪಿಕೊಂಡಿದ್ದಾರೆ.
ರೇಖಾ ಅವರ ಮನೆಯಲ್ಲಿ ಪತಿ ಸಂತೋಷ್, ಅವರ ತಾಯಿಯೂ ವಾಸವಿದ್ದರು.ಅತ್ತೆ ಸೊಸೆ ನಡುವೆ ಆಗಾಗ ಜಗಳವಾಗುತ್ತಿತ್ತು.ಜುಲೈ ಹತ್ತರಂದು ಸಹ ಅತ್ತೆ ಸೊಸೆ ಜಗಳವಾಗಿದ್ದು ಅತ್ತೆ ತನ್ನ ಮಗಳ ಮನೆಗೆ ತೆರಳಿದ್ದರು.
ಹೊಸಂಗಡಿಯ ಸಂಡೂರು ಪವರ್ ಹೌಸ್ ನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿರುವ ಸಂತೋಷ್ ನಾಯ್ಕ ಸಹ ತನ್ನ ತಾಯಿಯ ಪರವಾಗಿ ನಿಂತು ಪತ್ನಿಗೆ ನಿಂದಿಸಿದ್ದಾಗಿ ಹೇಳಲಾಗಿದೆ.ಇದಾಗಿ ರಾತ್ರಿ ಪಾಳಿಯಲ್ಲಿ ಕೆಲಸಕ್ಕೆ ಸಂತೋಷ್ ನಾಯ್ಕ ತೆರಳಿದ್ದಾಗ ಮನೆಯಲ್ಲಿ ಯಾರೂ ಇಲ್ಲದ ವೇಳೆ ಖಿನ್ನತೆಗೊಳಗಾದ ರೇಖಾ ತನ್ನ ಮಕ್ಕಳಾದ ಸಾತ್ವಿಕ್ ಹಾಗೂ ಸಾನ್ವಿಕಾ ಜತೆಗೆ ಆತ್ಮಹತ್ಯೆಗೆ ಮುಂದಾಗಿದ್ದಾರೆ.
ಆಗ ಮಗುವನ್ನು ಮೊದಲು ಎಸೆದ ಬಳಿಕ ತಾವೂ ನದಿಗೆ ಹಾರಿದ್ದಾರೆ. ಆದರೆ ಮಗ ಸಾತ್ವಿಕ್ ಬಂಡೆಗಳ ನಡುವೆ ಸಿಕ್ಕಿದ್ದರೆ ರೇಖಾ ಮರಗಳ ನಡುವೆ ಸಿಕ್ಕಿಹಾಕಿಕೊಂಡಿದ್ದಾರೆ. ಆದರೆ ಚಿಕ್ಕ ಮಗು ಸಾನ್ವಿಕಾ ಮಾತ್ರ ನೀರಲ್ಲಿ ಕೊಚ್ಚಿ ಹೋಗಿದ್ದಾಳೆ. ಆ ವೇಳೆ ನದಿ ನಡುವೆ ಸಿಲುಕಿದ್ದ ಇಬ್ಬರನ್ನೂ ಸ್ಥಳೀತ್ಯರು ರಕ್ಷಿಸಿದ್ದಾರೆ ಎಂದು ಹೇಳಲಾಗಿದೆ. ಮಗು ನದಿಯಲ್ಲಿ ಕೊಚ್ಚಿ ಹೋದದ್ದರಿಂದ ಭೀತಗೊಂಡ ರೇಖಾ ಮಗು ಅಪಹರಣದ ಕಥೆ ಹೆಣೆದಿದ್ದಾಳೆ.
"ಮಗುವಿನ ಅಪಹರಣ ಕಟ್ಟು ಕಥೆ ಎಂದು ರೇಖಾ ಒಪ್ಪಿಕೊಂಡಿದ್ದಾರೆ, ತಾವು ಮಕ್ಕಳೊಡನೆ ಆತ್ಮಹತ್ಯೆಗೆ ಯತ್ನಿಸಿದ್ದಾಗಿ ಆಕೆ ಹೇಳಿಕೆ ನೀಡಿದ್ದಾಳೆ. ಆಕೆಯನ್ನು ವಶಕ್ಕೆ ಪಡೆದಿಲ್ಲ, ಕಾನೂನು ಪರಿಣಿತರ ಸಲಹೆ ಪಡೆದು ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ" ಎಂದು ಉಡುಪಿ ಜಿಲ್ಲಾ ಪೋಲೀಸ್ ಅಧೀಕ್ಷಕಿ ನಿಶಾ ಜೇಮ್ಸ್ ಹೇಳಿದ್ದಾರೆ.