ಮಂಗಳೂರು: ಮೈಸೂರು ಹುಲಿ ಟಿಪ್ಪು ಸುಲ್ತಾನ್ ಅವರ ಜನ್ಮ ಜಯಂತಿಯನ್ನು ಬಿಜೆಪಿ ಸರ್ಕಾರ ರದ್ದುಗೊಳಿಸುವ ಮೂಲಕ ಸೌಹಾರ್ದ ಬೇಡ ಎನ್ನುವ ಕೆಟ್ಟ ಸಂದೇಶ ರವಾನಿಸಿದೆ ಎಂದು ಶಾಸಕ ಯು. ಟಿ. ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳೂರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತಿಹಾಸ ಮತ್ತು ಚರಿತ್ರೆಯನ್ನು ಯುವಜನಾಂಗ ಅರಿತುಕೊಂಡು ಸೌಹಾರ್ದ ಜೀವನ ನಡೆಸಬೇಕು ಎನ್ನುವ ಉದ್ದೇಶದಿಂದ ಕಾಂಗ್ರೆಸ್ ಸರ್ಕಾರ ಟಿಪ್ಪು ಜಯಂತಿ ಆರಂಭಿಸಿತ್ತು. ಇದರಲ್ಲಿ ಯಾವುದೇ ಧಾರ್ಮಿಕ ಅಂಶ ಇರಲಿಲ್ಲ ಎಂದು ಅವರು ಹೇಳಿದರು.
ಅಖಂಡ ಭಾರತವನ್ನು ಒಗ್ಗೂಡಿಸುವ ಕಾರ್ಯದಲ್ಲೂ ಟಿಪ್ಪು ಸುಲ್ತಾನ್ ಮುಂಚೂಣಿಯಲ್ಲಿದ್ದರು. ಟಿಪ್ಪು ಸರ್ವ ಧರ್ಮ ಸಹಿಷ್ಣು ಆಗಿ ಎಲ್ಲ ಧರ್ಮಗಳ ಜನರಿಗೆ ರಕ್ಷಣೆ ನೀಡಿದ್ದರು. ಟಿಪ್ಪು ಜಯಂತಿ ರದ್ದುಪಡಿಸಿರುವ ಬಿಜೆಪಿಗೆ ಚರಿತ್ರೆ, ಇತಿಹಾಸ, ರಾಷ್ಟ್ರಪ್ರೇಮ, ಸೌಹಾರ್ದ ಬೇಡ ಎನ್ನುವ ಸಂದೇಶ ನೀಡಿರುವುದು ಅದರ ಸಾಧನೆಯಾಗಿದೆ ಎಂದು ಟೀಕಿಸಿದ ಅವರು, ಅಧಿಕಾರ ಯಾರಿಗೂ ಶಾಶ್ವತವಲ್ಲ ಎಂದು ಹೇಳಿದರು.