ಕಾಲೇಜು ವಿದ್ಯಾರ್ಥಿಗಳು ನಿಖಿಲ್ ಎಲ್ಲಿದ್ದೀಯಪ್ಪಾ ಎಂದಾಗ ಸುಮಲತಾ ಅಂಬರೀಷ್ ಪ್ರತಿಕ್ರಿಯೆ
ಧಾರವಾಡ: ಈ ಬಾರಿಯ ಲೋಕಸಭೆ ಚುನಾವಣೆ ವೇಳೆ ಮಂಡ್ಯ ರಾಜಕೀಯಕ್ಕೆ ಸಂಬಂಧಪಟ್ಟಂತೆ 'ನಿಖಿಲ್ ಎದ್ದಿದ್ದೀಯಪ್ಪ'ಘೋಷಣೆ ರಾಜ್ಯಾದ್ಯಂತ ಸೋಷಿಯಲ್ ಮೀಡಿಯಾಗಳಲ್ಲಿ ಮಾತ್ರವಲ್ಲದೆ ಜನರ ಬಾಯಲ್ಲಿ ಕೂಡ ವೈರಲ್ ಆಗಿತ್ತು. ಚುನಾವಣೆ ಮುಗಿದು ಫಲಿತಾಂಶ ಹೊರಬಂದು ತಿಂಗಳಾಗುತ್ತಾ ಬಂದರೂ ಆ ಘೋಷಣೆಯ ಹವಾ ಇನ್ನೂ ಇಳಿದಂತೆ ಕಾಣುತ್ತಿಲ್ಲ.ಕಾಲೇಜು ಹುಡುಗರ ಬಾಯಲ್ಲಿ ಅದು ಜೋರಾಗಿ ಓಡುತ್ತಿದೆ.
ನಿನ್ನೆ ಮಂಡ್ಯ ಸಂಸದೆ ಸುಮಲತಾ ತಮ್ಮ ಪುತ್ರ ಅಭಿಷೇಕ್ ಜೊತೆ ಧಾರವಾಡದ ನುಗ್ಗಿಕೆರಿ ಆಂಜನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಹುಬ್ಬಳ್ಳಿಯ ಬಿವಿಬಿ ಎಂಬಿನಿಯರಿಂಗ್ ಕಾಲೇಜಿನ ಆಡಿಟೋರಿಯಂನಲ್ಲಿ ಅಭಿಷೇಕ್ ಅವರ ಅಮರ್ ಚಿತ್ರದ ಸಂವಾದಕ್ಕೆ ಬಂದಿದ್ದರು. ಸುಮಲತಾ ಅವರು ವೇದಿಕೆ ಮೇಲೇರುತ್ತಿದ್ದಂತೆ ವಿದ್ಯಾರ್ಥಿಗಳು ನಿಖಿಲ್ ಎಲ್ಲಿದ್ದೀಯಪ್ಪಾ, ನಿಖಿಲ್ ಎಲ್ಲಿದ್ದೀಯಪ್ಪಾ ಎಂದು ಕೂಗಿ ಸ್ವಾಗತ ಕೋರಿದರು. ಅದನ್ನು ಕಂಡು ಸುಮಲತಾ ನಕ್ಕು ನಾಚಿ ನೀರಾಗಿ ತಲೆಗೆ ಕೈಹೊತ್ತರು.
ವಿಧ್ಯಾರ್ಥಿಗಳು ‘ನಿಖಿಲ್ ಎಲ್ಲಿದಿಯಪ್ಪಾ’ ಎಂದು ಕೂಗುತ್ತಿದ್ದಂತೆ ಅಭಿಷೇಕ್ ಅವರು, ಯಾರಾದ್ರು ಎಲ್ಲಾದರೂ ಹೋಗಲಿ ನಾವು ಇಲ್ಲಿದ್ದೀವಪ್ಪ. ಅದನ್ನ ಬಿಟ್ಟು ಬಿಡಿ, ನಮ್ಮ ಅಮ್ಮನಿಗೆ ಇದೀಗ ಮಂಡ್ಯ, ಕರ್ನಾಟಕ ಮಾತ್ರವಲ್ಲ, ಇಡೀ ಇಂಡಿಯಾದಲ್ಲಿ ಅಭಿಮಾನಿಗಳಿದ್ದಾರೆ ಎಂದರು. ‘ಅಮರ್’ ಚಿತ್ರ ಪ್ರಚಾರಕ್ಕಾಗಿ ಚಿತ್ರತಂಡ ಅವಳಿ ನಗರಕ್ಕೆ ಆಗಮಿಸಿತ್ತು. ಸುಮಲತಾರಿಗೆ ಪುತ್ರ ಅಭಿಷೇಕ್, ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಮತ್ತು ಅಮರ್ ಚಿತ್ರ ನಿರ್ದೇಶಕ ನಾಗಶೇಖರ್ ಸಾಥ್ ನೀಡಿದ್ದರು.
ಎರಡು ವರ್ಷಗಳ ಹಿಂದೆ ನಿಖಿಲ್ ಕುಮಾರಸ್ವಾಮಿ ಅಭಿನಯದ ಜಾಗ್ವಾರ್ ಆಡಿಯೋ ಲಾಂಚ್ ವೇಳೆ ಮಂಡ್ಯದಲ್ಲಿ ಅವರ ತಂದೆ ಎಚ್.ಡಿ. ಕುಮಾರಸ್ವಾಮಿ ತಮ್ಮ ಮಗನನ್ನು ‘ನಿಖಿಲ್ ಎಲ್ಲಿದ್ದೀಯಪ್ಪ’ ಎಂದು ಕರೆದಿದ್ದು ಮೊನ್ನೆ ಚುನಾವಳೆ ವೇಳೆ ಭಾರೀ ಟ್ರೋಲ್ ಆಗಿ ವೈರಲ್ ಆಗಿತ್ತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos