ರಾಜ್ಯ

ಹಿರಿಯ ರಂಗಕರ್ಮಿ ಡಿ ಕೆ ಚೌಟ ನಿಧನ

Sumana Upadhyaya
ಬೆಂಗಳೂರು: ಹಿರಿಯ ರಂಗಕರ್ಮಿ, ರಂಗ ನಿರಂತರ ಕಾರ್ಯಾಧ್ಯಕ್ಷ ಡಿ ಕೆ ಚೌಟ ಬುಧವಾರ ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. 
ಅವರಿಗೆ 82 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಆನಂದ ಕೃಷ್ಣ ಎಂಬ ಕಾವ್ಯನಾಮದಲ್ಲಿ ಕೃತಿಗಳನ್ನು ರಚಿಸಿದ್ದ ಡಿ.ಕೆ. ಚೌಟ ತುಳು ಸಾಹಿತ್ಯ ಆಕಾಡೆಮಿಯಿಂದ ಪ್ರಶಸ್ತಿಯನ್ನೂ ಪಡೆದಿದ್ದರು. ಚಿತ್ರಕಲಾ ಪರಿಷತ್‌ ಅಧ್ಯಕ್ಷರಾಗಿಯೂ ಡಿ.ಕೆ. ಚೌಟ ಕಾರ್ಯ ನಿರ್ವಹಿಸಿದ್ದರು.
ಜೂನ್ 1, 1938ರಲ್ಲಿ ಮಂಜೇಶ್ವರ ಸಮೀಪದ ಮೀಯಪ್ಪದವಿನ ಕೇರಳದ ಬಂಟ ಮನೆತನದಲ್ಲಿ ಜನಿಸಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದು, ಸಂದೀಪ್‌ ಚೌಟ ಸಂಗೀತಗಾರರಾಗಿದ್ದರೆ, ಪ್ರಜ್ಞಾ ಚೌಟ ಜನಾಂಗಶಾಸ್ತ್ರಜ್ಞೆಯಾಗಿದ್ದಾರೆ.
ಡಿ.ಕೆ. ಚೌಟ ಅವರ ನಿಧನಕ್ಕೆ ಸಚಿವ ಕೃಷ್ಣ ಬೈರೇಗೌಡ ಸಂತಾಪ ಸೂಚಿಸಿದ್ದು, ಡಿ.ಕೆ. ಚೌಟ ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ದೊಡ್ಡ ಹೆಸರು. ಅವರು ಚಿತ್ರಕಲಾ ಪರಿಷತ್ತಿನ ಕಾರ್ಯದರ್ಶಿಯಾಗಿ, ರಂಗ ನಿರಂತರದ ಪೋಷಕರಾಗಿ, ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವ ಮೂಲಕ ಆ ಸಂಸ್ಥೆಗಳ ಬೆಳವಣಿಗೆಗೆ ಕಾರಣರಾದರು. ಚಿತ್ರಕಲಾ ಪರಿಷತ್ತಿನ ಬೆಳವಣಿಗೆಯಲ್ಲಿ ಡಿ.ಕೆ. ಚೌಟ ಅವರ ಪಾತ್ರ ಬಹಳ ದೊಡ್ಡದು. ಚಿತ್ರಸಂತೆ ಮೂಲಕ ಅವರು ರಾಷ್ಟ್ರಮಟ್ಟದಲ್ಲಿ ಚಿತ್ರಕಲಾ ಪರಿಷತ್ತು ಖ್ಯಾತಿ ಪಡೆಯಲು ಕಾರಣರಾದರು ಎಂದು ತಿಳಿಸಿದ್ದಾರೆ.
SCROLL FOR NEXT