ಶಾಸಕ ಪ್ರಸಾದ್ ಅಬ್ಬಯ್ಯ ಶೂ ಗನ್ ಮ್ಯಾನ್ ಕೈಯಲ್ಲಿ
ಹುಬ್ಬಳ್ಳಿ: ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ ಚಪ್ಪಲಿ ವಿಷಯಕ್ಕೆ ಸುದ್ದಿಯಾಗಿದ್ದಾರೆ.
ತಮ್ಮ ಹೊಸ ಚರ್ಮದ ಶೂ ಮೇಲೆ ಕಾಳಜಿ ವಹಿಸಿದ ಶಾಸಕ ಪ್ರಸಾದ್ ಅಬ್ಬಯ್ಯ ನಿನ್ನೆ ಹುಬ್ಬಳ್ಳಿಯಲ್ಲಿ ಮಳೆಯ ಸ್ಥಿತಿಗತಿಯನ್ನು ಅರಿಯಲು ಸಂಚಾರ ನಡೆಸುತ್ತಿದ್ದ ವೇಳೆ ನೀರು ತುಂಬಿದ ರಸ್ತೆಯಲ್ಲಿ ಇಳಿಯಲು ನಿರಾಕರಿಸಿದರು. ಆಗ ಅವರ ಬೆಂಬಲಿಗರು ಬೇರೊಂದು ಚಪ್ಪಲಿಯನ್ನು ತಂದು ಕೊಟ್ಟಾಗ ಅದನ್ನು ಧರಿಸಿಕೊಂಡು ನೀರು ತುಂಬಿದ ರಸ್ತೆಯಲ್ಲಿಯೇ ಇಳಿದು ಪ್ರದೇಶದ ಪರಿಸ್ಥಿತಿ ಅವಲೋಕಿಸಿದರು.
ಈ ಘಟನೆ ನಡೆದಿದ್ದು ನಿನ್ನೆ ಹುಬ್ಬಳ್ಳಿಯ ಮಂಟೂರು ರಸ್ತೆಯ ಅರಳಿಕಟ್ಟೆ ಓಣಿಯಲ್ಲಿ, ಸುಮಾರು 3 ಗಂಟೆಗಳ ಕಾಲ ಮಳೆ ಸುರಿದು ನಗರದಾದ್ಯಂತ ರಸ್ತೆ ತುಂಬಾ ನೀರು ತುಂಬಿತ್ತು. ಮಳೆಗೆ ಎಲ್ಲಿಲ್ಲಿ ಏನೇನು ಸಮಸ್ಯೆ ಆಗಿದೆ ಎಂದು ನೋಡಲು ಸ್ಥಳೀಯ ಕಾರ್ಪೊರೇಟರ್ ಮತ್ತು ಇತರ ನಾಯಕರೊಂದಿಗೆ ಭೇಟಿ ಮಾಡಲು ನಿರ್ಧರಿಸಿದರು.
ರಸ್ತೆಗೆ ಬಂದಾಗ ಅಬ್ಬಯ್ಯ ಅವರಿಗೆ ನೀರು ತುಂಬಿದ ರಸ್ತೆಯಲ್ಲಿ ಚರ್ಮದ ಚಪ್ಪಲಿ ಹಾಕಿಕೊಂಡು ಇಳಿಯಲು ಸಾಧ್ಯವಿಲ್ಲ ಎಂದು ಗೊತ್ತಾಯಿತು. ಆಗ ಅವರ ಗನ್ ಮ್ಯಾನ್ ಬೇರೆ ಚಪ್ಪಲಿಯನ್ನು ಶಾಸಕರು ಕುಳಿತಿದ್ದ ಕಾರಿನ ಬಳಿ ತಂದು ಕೊಟ್ಟರು. ಅದನ್ನು ಹಾಕಿಕೊಂಡು ರಸ್ತೆಗಿಳಿದು ಪರಿಸ್ಥಿತಿ ಅವಲೋಕಿಸಿದರು.
ಆರಂಭದಲ್ಲಿ ಶಾಸಕರು ಕಾರಿನಿಂದಿಳಿಯಲು ಒಪ್ಪಿರಲಿಲ್ಲ. ನಂತರ ನಾವೆಲ್ಲಾ ಒತ್ತಾಯಪಡಿಸಿದ ಮೇಲೆ ನೀರು ನುಗ್ಗಿದ ಮನೆಗಳ ಬಳಿ ಬಂದು ಪರಿಶೀಲಿಸಿದರು. ಶಾಸಕರು ಮಳೆಯ ಸಮಯದಲ್ಲಿ ನಮ್ಮ ಪ್ರದೇಶಕ್ಕೆ ಬಂದು ಪರಿಸ್ಥಿತಿ ತಿಳಿದುಕೊಳ್ಳುವುದು ಒಳ್ಳೆಯದು ಎಂದು ಸ್ಥಳೀಯರೊಬ್ಬರು ಹೇಳುತ್ತಾರೆ.
ಈ ಬಗ್ಗೆ ಶಾಸಕ ಅಬ್ಬಯ್ಯ ಅವರನ್ನು ಮಾತನಾಡಿಸಿದಾಗ, ನಾನು ಯಾರಿಗೂ ನನ್ನ ಶೂ ತೆಗೆದು ಚಪ್ಪಲಿ ತನ್ನಿ ಎಂದು ಕೇಳಿರಲಿಲ್ಲ. ನನ್ನ ಚರ್ಮದ ಚಪ್ಪಲಿ ನೀರಿಗಿಳಿದರೆ ಹಾಳಾಗಬಹುದು ಎಂದಾಗ ನನ್ನ ಜೊತೆ ಇದ್ದವರು ಬೇರೆ ಚಪ್ಪಲಿ ತಂದುಕೊಟ್ಟರು. ನನ್ನ ಗನ್ ಮ್ಯಾನ್ ಗೆ ನನ್ನ ಶೂ ಮುಟ್ಟಲು ನಾನು ಹೇಳಿರಲಿಲ್ಲ. ಅವರೇ ಸಂತೋಷದಿಂದ ಆ ಕೆಲಸ ಮಾಡಿದ್ದು. ನನಗೆ ನನ್ನ ಶೂಗಿಂತ ಅಲ್ಲಿನ ಜನರ ಪರಿಸ್ಥಿತಿ, ಅಲ್ಲಿನ ಸಮಸ್ಯೆ ಮುಖ್ಯವಾಗಿತ್ತು ಎಂದಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos