ಬೆಂಗಳೂರು: ಪತ್ನಿಗೆ ಬೆಂಕಿಹಚ್ಚಿ ಕೊಂದು ತಾನೂ ವಿಷಕುಡಿದ ವೃದ್ದ ಆತ್ಮಹತ್ಯೆ
ಬೆಂಗಳೂರು: ಪತ್ನಿಗೆ ಬೆಂಕಿ ಹಚ್ಚಿ ಸುಟ್ಟು ತಾನೂ ವಿಷ ಕುಡಿದು ವೃದ್ದನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ದುರಂತ ಘಟನೆ ಬೆಂಗಳುರಿನ ಸಮೀಪದ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.
ದೊಡ್ಡಬಳ್ಳಾಪುರದ ಚನ್ನಪುರ ಗ್ರಾಮದಲ್ಲಿ ನಡೆದ ಘಟನೆಯಲ್ಲಿ ನಾರಾಯಣಪ್ಪ (70) ತನ್ನ ಪತ್ನಿ ಲಕ್ಷ್ಮಮ್ಮ (65) ನಿಗೆ ಬೆಂಕಿ ಹಚ್ಚಿ ಕೊಂದು ಹಾಕಿದ್ದಲ್ಲದೆ ತಾನೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಆಸ್ತಿ ಕಲಹವೇ ಘಟನೆಗೆ ಕಾರಣವೆನ್ನಲಾಗಿದ್ದು ಆಸ್ತಿ ವಿಚಾರದಲ್ಲಿ ವೃದ್ದ ಹಾಗೂ ಪತ್ನಿ, ಮಕ್ಕಳ ನಡುವೆ ಕಲಹವಾಗಿತ್ತು ಎಂದು ಹೇಳಲಾಗಿದೆ.
ಕೆಲ ವರ್ಷಗಳ ಹಿಂದೆ ವೃದ್ದ ನಾರಾಯಣಪ್ಪ ತನ್ನ ಪತ್ನಿಯಿಂದ ಬೇರಾಗಿ ವಾಸಿಸುತ್ತಿದ್ದನೆನ್ನಲಾಗಿದ್ದು ಹೀಗೆ ಬೇರೆಯಾಗಿದ್ದ ನಂತರ ತನ್ನ ಹೆಸರಲ್ಲಿದ್ದ 32 ಗುಂಟೆ ಜಮೀನನ್ನು ಪತ್ನಿಗೂ ತಿಳಿಸದೆ ಮಾರಾಟ ಮಾಡಿ .ಗ್ರಾಮ ತೊರೆದಿದ್ದ.
ಕಳೆದ ವರ್ಷ ಈ ಸಂಬಂಧ ನಾರಾಯಣಪ್ಪನ ಮಗ ಹಾಗೂ ಮಗಳು ದೊಡ್ಡಬಳ್ಳಾಪುರ ಪೋಲೀಸರಿಗೆ ದೂರು ಸಲ್ಲಿಸಿದ್ದರು.
ಜಾಗ ಮಾರಿದ್ದ ಹಣ ಖಾಲಿಯಾದ ಬಳಿಕ ಮತ್ತೆ ಗ್ರಾಮಕ್ಕೆ ಆಗಮಿಸಿದ್ದ ನಾರಾಯಣಪ್ಪನಿಗೆ ಮನೆಗೆ ಬರಲು ಪತ್ನಿ, ಮಕ್ಕಳು ಅವಕಾಶ ನೀಡಿಲ್ಲ.ಇದರಿಂದಾಗಿ ಅದೇ ಗ್ರಾಮದಲ್ಲಿದ್ದ ತನ್ನ ಅಣ್ಣನ ಮನೆಯಲ್ಲಿ ನಾರಾಯಣಪ್ಪ ವಾಸವಿದ್ದ. ಹದಿನೈದು ದಿನಗಳ ಹಿಂದೆ ಮತ್ತೆ ಮನೆಯತ್ತ ಆಗಮಿಸಿದ್ದ ನಾರಾಯಣಪ್ಪ ಮಕ್ಕಳಿಗೆ ಪ್ರಕರಣ ಹಿಂಪಡೆದುಕೊಳ್ಲಲು ಹೇಳು, ಇಲ್ಲವಾದರೆ ಎಲ್ಲರನ್ನೂ ಕೊಂದು ಹಾಕುತ್ತೇನೆ ಎಂದು ಬೆದರಿಕೆ ಹಾಕಿದ್ದ.
ಇದಾಗಿ ಶನಿವಾರ ಮಧ್ಯರಾತ್ರಿಯ ವೇಳೆಗೆ ಮನೆಗೆ ನುಗ್ಗಿದ್ದ ನಾರಾಯಣಪ್ಪ ಪತ್ನಿ ಮೈಮೇಲೆ ಸೀಮೀಣ್ಣೆ ಸುರಿದು ಆಕೆಗೆ ಬೆಂಕಿ ಹಚ್ಚಿದ್ದಾನೆ. ಬೆಂಕಿಯಿಂದಾಗಿ ಸುಟ್ಟ ಗಾಯಗಳಾದ ಲಕ್ಷ್ಮಮ್ಮ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಬಳಿಕ ತಾನೂ ವಿಷ ಸೇವಿಸಿದ ನಾರಾಯಣಪ್ಪ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಕ್ಷಣ ನಾರಾಯಣಪ್ಪನನ್ನು ಆಸ್ಪತ್ರೆಗೆ ದಾಖಲಿಸಿದರೂ ಅವರು ಅದಾಗಲೇ ಮೃತಪಟ್ಟಿದ್ದರೆಂದು ವೈದ್ಯರು ಹೇಳಿದ್ದಾರೆ.
ಘಟನೆ ವೇಳೆ ಮಗಳು, ಸೊಸೆ ಒಳಗಿನ ಕೋಣೆಯಲ್ಲಿ ಮಲಗಿದ್ದ ಕಾರಣ ಈ ಬಗ್ಗೆ ಅವರ ಅರಿವಿಗೆ ಬಂದಿರಲಿಲ್ಲ. ದೊಡ್ಡಬಳ್ಳಾಪುರ ಗ್ರಾಮೀಣ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos