ರಾಜ್ಯ

ಅಥಣಿ ಸ್ಪರ್ಧೆಯಿಂದ ಹಿಂದೆ ಸರಿಯಲ್ಲ: ಡಿಸಿಎಂ ಸವದಿ ಆಪ್ತ ಗುರು ದಾಶ್ಯಾಳ

Manjula VN

ಬೆಳಗಾವಿ: ಅಥಣಿ ವಿಧಾನಸಭಾ ಉಪಚುನಾವಣೆಯಿಂದ ಹಿಂದೆ ಸರಿಯುವುದಿಲ್ಲ. ರೈತಪರ ಕುಮಾರಸ್ವಾಮಿ ಸರ್ಕಾರ ತಂದ ಯೋಜನೆಗಳ ಪರಿಣಾಮ ನಾನು ಗೆಲುವು ಸಾಧಿಸುತ್ತೇನೆಂದು ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಆಪ್ತ ಗುರು ದಾಶ್ಯಾಳ್ ಅವರು ಹೇಳಿದ್ದಾರೆ. 

ಕುಮಾರಸ್ವಾಮಿ ನೇತೃತ್ವ ಸರ್ಕಾರದಿಂದ ಸಾಲ ಮನ್ನಾ ಮಾಡಿಕೊಂಡ 36,000 ಕುಟುಂಬಗಳ ಪೈಕಿ ಒಂದೊಂದು ಕುಟುಂಬದ ಸದಸ್ಯರು ನನಗೆ ಮತ ಹಾಕಿದರೂ ನಾನು 72,000 ಮತಗಳನ್ನು ಪಡೆಯುತ್ತೇನೆ. ಹಿಂದಿ ಸರ್ಕಾರದ ಕಾರ್ಯವೈಖರಿ ಈ ಬಾರಿಯ ಚುನಾವಣೆಯಲ್ಲಿ ನನಗೆ ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ. 

ಹೈದರಾಬಾದ್'ಗೆ ತೆರಳಿರುವ ದಾಶ್ಯಾಳ್ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಈ ವೇಳೆ ನಾಮಪತ್ರ ಹಿಂಪಡೆಯುವಂತೆ ಸವದಿ ಒತ್ತಡ ಹೇರುತ್ತಿರುವುದು ನಿಜ ಎಂದು ಹೇಳಿಕೊಂಡಿದ್ದಾರೆಂದು ವರದಿಗಳು ತಿಳಿಸಿವೆ.  

ನಾಮಪತ್ರ ಹಿಂಪಡೆಯುವಂತೆ ಸವದಿ ಒತ್ತಡ ಹೇರುವ ಹಿನ್ನೆಲೆಯಲ್ಲಿ ದಾಶ್ಯಾಳ್ ಅವರು ಹೈದರಾಬಾದ್'ಗೆ ತೆರಳಿದ್ದು, ನಾಮಪತ್ರ ಹಿಂಪಡೆಯಲು ಕಡೆಯ ದಿನವಾದ ಬಳಿಕ ಅಥಣಿಗೆ ಹಿಂತಿರುಗುತ್ತಾರೆಂದು ಹೇಳಲಾಗುತ್ತಿದೆ. 

ಈ ಬಗ್ಗೆ ಸ್ಪಷ್ಟನೆ ನೀಡಿರುವ ದಾಶ್ಯಾಳ್ ಅವರು, ಉಪಮುಖ್ಯಮಂತ್ರಿ ನನ್ನ ಮೇಲೆ ಯಾವುದೇ ಒತ್ತಡ ಹೇರಿಲ್ಲ. ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ಯನ್ನು ಸೋಲಿಸುವ ಸಲುವಾಗಿಯೇ ಅಥಣಿ ಕ್ಷೇತ್ರದಲ್ಲಿ ನನ್ನನ್ನು ನಿಲ್ಲಿಸಲಾಗಿದೆ ಎಂಬುದು ಸತ್ಯಕ್ಕೆ ದೂರವಾದ ಸಂಗತಿ ಎಂದು ತಿಳಿಸಿದ್ದಾರೆ. 

2006ರಲ್ಲಿ ಬೆಳಗಾವಿ ಜಿಲ್ಲಾ ಪಂಚಾಯತ್ ಸದಸ್ಯನಾಗಿ ಆಯ್ಕೆಯಾದಾಗಿನಿಂದಲೂ ನಾನು ಜೆಡಿಎಸ್ ಪಕ್ಷದಲ್ಲಿಯೇ ಇದ್ದೇನೆ. 2010ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದೆ. ಜೆಡಿಎಸ್ ಅವಕಾಶ ನೀಡಿದ  ಹಿನ್ನೆಲೆಯಲ್ಲಿ ಸ್ಪರ್ಧಿಸುತ್ತಿದ್ದೇನೆ. ವೈಯಕ್ತಿಕ ಕಾರಣಗಳಿಗೆ ನಾನು ಹೈದರಾಬಾದ್'ಗೆ ಬಂದಿದ್ದೇನೆ. ಶೀಘ್ರದಲ್ಲಿಯೇ ಅಥಣಿಗೆ ವಾಪಸ್ಸಾಗುತ್ತೇನೆಂದಿದ್ದಾರೆ. 

SCROLL FOR NEXT