ರಾಜ್ಯ

ಕೊರೋನಾ ಎಫೆಕ್ಟ್: ಕೆಐಎನಲ್ಲಿ ಇಳಿಕೆ ಕಂಡ ಚಿನ್ನ ಕಳ್ಳಸಾಗಾಣೆ ಪ್ರಕರಣ

Manjula VN

ಬೆಂಗಳೂರು: ಕೊರೋನಾ ವೈರಸ್ ಪರಿಣಾಮ ನಗರದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆ ಶೇ.90ಕ್ಕಿಂತಲೂ ಹೆಚ್ಚು ಕುಸಿತ ಕಂಡಿದ್ದು, ಇದರಿಂದಾಗಿ ಅಕ್ರಮವಾಗಿ ಚಿನ್ನ ಕಳ್ಳಸಾಗಣೆ ಮೇಲೆ ಗಂಭೀರ ಪರಿಣಾಮ ಬೀರಿದೆ. 

ಕಸ್ಟಮ್ಸ್ ಇಲಾಖೆ ನೀಡಿರುವ ಅಂಕಿಅಂಶಗಳ ಪ್ರಕಾರ, ಮಾರ್ಚ್ ನಿಂದ ಜುಲೈವರೆಗೆ ಎರಡು ಕಳ್ಳಸಾಗಣೆ ಪ್ರಕರಣಗಳು ಮಾತ್ರ ವರದಿಯಾಗಿದ್ದೆ. ಈ ಪ್ರಕರಣಗಳಲ್ಲಿ ಒಟ್ಟು ರೂ.13.46 ಲಕ್ಷ ಮೌಲ್ಯದ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದೆ. 

ವಿಮಾನ ನಿಲ್ದಾಣಗಳಲ್ಲಿ ವಿವಿಧ ರೂಪಗಳಲ್ಲಿ ಚಿನ್ನವನ್ನು ಕಳ್ಳಸಾಗಣೆ ಮಾಡಲಾಗುತ್ತದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಧಿಕಾರಿಯೊಬ್ಬರು, ವ್ಯಕ್ತಿಯ ಗುದನಾಳದ ಮೂಲಕ ಮಾದಕ ವಸ್ತುಗಳನ್ನು ಮತ್ತು ಚಿನ್ನವನ್ನು ಕಳ್ಳಸಾಗಣೆ ಮಾಡುತ್ತಾರೆ. ಪ್ರತೀ ನಿತ್ಯ ನಾವು ಇಂತಹ ಎರಡು ಪ್ರಕರಣಗಳನ್ನಾದರೂ ದಾಖಲು ಮಾಡಿಕೊಳ್ಳುತ್ತಿದ್ದೆವು. ಇದೀಗ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಇಳಿಕೆಗೊಂಡಿರುವ ಪರಿಣಾಮ ಇಂತಹ ಪ್ರಕರಣಗಳ ಸಂಖ್ಯೆಯೂ ಇಳಿಕೆಯಾಗಿದೆ ಎಂದು ಹೇಳಿದ್ದಾರೆ. 

ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ವಿಮಾನ ನಿಲ್ದಾಣ ಪ್ರಾಧಿಕಾರವು ಬಿಡುಗಡೆ ಮಾಡಿರುವ ಆಕ್ಯುಪೆನ್ಸಿ ವರದಿಯಲ್ಲಿ, ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ 94.6% ರಷ್ಟು ಕುಸಿದಿದೆ ಎಂದು ತಿಳಿಸಿದೆ.  ಕಳೆದ ವರ್ಷ ಏಪ್ರಿಲ್ ನಿಂದ ಜೂನ್‌ನಲ್ಲಿ ವಿಮಾನ ನಿಲ್ದಾಣದಲ್ಲಿ 84,11,268 ಪ್ರಯಾಣಿಕರು ಪ್ರಯಾಣಿಸಿದ್ದರು. ಈ ವರ್ಷ 4,54,704 ಮಂದಿಯಷ್ಟೇ ಪ್ರಯಾಣಿಸಿದ್ದಾರೆಂದು ತಿಳಿದುಬಂದಿದೆ. 

SCROLL FOR NEXT