ಬೆಂಗಳೂರು: ಕಾಮೆಡ್-ಕೆ ಸಹಾಯಕ ಕಾರ್ಯದರ್ಶಿ ಅವರನ್ನು ದುಷ್ಕರ್ವಿುಗಳು ಕಾರಿನಲ್ಲಿ ಅಪಹರಿಸಿ ಸುಲಿಗೆ ಮಾಡರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಈ ಸಂಬಂಧ ಸಂತ್ರಸ್ತರು ನೀಡಿದ ದೂರಿನ ಮೇರೆಗೆ ಜ್ಞಾನಭಾರತಿ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ವಿಶ್ವೇಶ್ವರಯ್ಯ ಲೇಔಟ್ 8ನೇ ಹಂತದ ಗುರುರಾಜ್, ಮಲ್ಲೇಶ್ವರದ ಕಾಮೆಡ್-ಕೆ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಫೆ.26ರ ಬೆಳಗ್ಗೆ 9.15ರಲ್ಲಿ ಬೈಕ್ನಲ್ಲಿ ಕೆಲಸಕ್ಕೆ ತೆರಳುತ್ತಿದ್ದಾಗ ವಿಶ್ವೇಶ್ವರಯ್ಯ ಲೇಔಟ್ ಆರ್ಟಿಒ ಕಚೇರಿ ಬಳಿ ದುಷ್ಕರ್ವಿುಗಳು ಬೈಕ್ ಅಡ್ಡಗಟ್ಟಿ ಸ್ವಿಫ್ಟ್ ಕಾರಿನಲ್ಲಿ ಅಪಹರಣ ಮಾಡಿದ್ದರು.
ನೈಸ್ ರಸ್ತೆ ಮಾರ್ಗವಾಗಿ ತುಮಕೂರು ರಸ್ತೆ ಮೂಲಕ ತೆರಳಿ ಕಣ್ಣಿಗೆ ಬಟ್ಟೆ ಕಟ್ಟಿ ತೋಟದ ಮನೆಯಲ್ಲಿ ಕೂಡಿಟ್ಟಿದ್ದರು. ಬಳಿಕ ದುಷ್ಕರ್ವಿುಗಳು ನನ್ನ ಬಳಿಯಿದ್ದ ವಿಜಯಾ ಬ್ಯಾಂಕ್ ಚೆಕ್ನಲ್ಲಿ 13.6 ಲಕ್ಷ ರುಪಾಯಿಯ ಹಣ ಬರೆಸಿಕೊಂಡು, ಪೆನ್ಡ್ರೖೆವ್, ಎಟಿಎಂಗಳನ್ನು ಕಸಿದುಕೊಂಡರು.
ಮಧ್ಯಾಹ್ನ 3.30ರಲ್ಲಿ ಕಾರಿನಲ್ಲಿ ಗೊರಗುಂಟೆಪಾಳ್ಯ ಬಳಿ ಕರೆ ತಂದು ಎಟಿಎಂನಿಂದ 40 ಸಾವಿರ ರೂ. ಡ್ರಾ ಮಾಡಿಸಿಕೊಂಡು ಬಿಟ್ಟು ಕಳುಹಿಸಿದರು ಎಂದು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಕೃತ್ಯದ ಹಿಂದೆ ಅಕ್ಕನ ಪತಿ ಕೈವಾಡವಿರುವ ಶಂಕೆ ಇದೆ ಎಂದು ಆರೋಪಿಸಿದ್ದಾರೆ. ಸಿಸಿ ಕ್ಯಾಮರಾ ದೃಶ್ಯಾವಳಿ ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.