ರಾಜ್ಯ

ಶಾಸಕ ಹ್ಯಾರಿಸ್ ಗಾಯಗೊಂಡಿದ್ದು ಬಾಂಬ್ ಸ್ಫೋಟದಿಂದಲ್ಲ, ಪಟಾಕಿ ಸಿಡಿತದಿಂದ: ಪೊಲೀಸರ ತನಿಖೆಯಿಂದ ಖಚಿತ

Manjula VN

ಬೆಂಗಳೂರು: ಶಾಂತಿನಗರದ ಕಾಂಗ್ರೆಸ್ ಶಾಸಕ ಎಸ್.ಎ.ಹ್ಯಾರಿಸ್ ಅವರು ಪಾಲ್ಗೊಂಡಿದ್ದ ಹುಟ್ಟುಹಬ್ಬ ಆಚರಣೆ ಕಾರ್ಯಕ್ರಮದಲ್ಲಿ ಸ್ಫೋಟಗೊಂಡಿದ್ದು ಪಟಾಕಿಯೇ ಹೊರತು ಬೇರಾವುದೇ ಅನುಮಾನಾಸ್ಪದ ವಸ್ತುಗಳಲ್ಲ ಎಂದು ಪೊಲೀಸರು ತನಿಖೆಯಿಂದ ಖಚಿತಪಡಿಸಿದ್ದಾರೆ. 

ಸ್ಥಳೀಯ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಹುಟ್ಟುಹಬ್ಬ ಆಚರಣೆ ನಿಮಿತ್ತ ರಸಮಂಜರಿ ಕಾರ್ಯಕ್ರಮ ಆಯೋಜಿಸಿದ್ದರು. ರಾತ್ರಿ 8.30ರ ಸುಮಾರಿಗೆ ವೇದಿಕೆಗೆ ಬಂದ ಶಾಸಕರನ್ನು ಸ್ವಾಗತಿಸಲು ಬೆಂಬಲಿಗರು ಪಟಾಕಿ ಸಿಡಿಸಿದ್ದಾರೆ. ಆಗ ರಾಕೆಟ್ ಮಾದರಿ ಪಟಾಕಿಯೊಂದು ಆಕಾಶದಲ್ಲಿ ಸ್ಫೋಟಗೊಳ್ಳದೆ ವೇದಿಕೆ ಮೇಲೆ ಬಿದ್ದು ಸಿಡಿದಿದೆ. ಇದರ ಪರಿಣಾಮ ಶಾಸಕರು ಸೇರಿದಂತೆ ವೇದಿಕೆಯಲ್ಲಿದ್ದ ನಾಲ್ವರಿಗೆ ಸಣ್ಣ ಪ್ರಮಾಣದ ಸುಟ್ಟು ಗಾಯಗಳಾಗಿವೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆಂದು ವರದಿಗಳು ತಿಳಿಸಿವೆ. 

ಘಟನಾ ಸ್ಥಲದಲ್ಲಿ ಸಿಡಿ ಮದ್ದಿಗೆ ಬಳಸುವ ರಾಸಾಯನಿಕ ವಸ್ತುಗಳು ಹಾಗೂ ಸಿಲ್ವರ್ ಬಣ್ಣದ ಗುಂಡುಗಳು ಸಿಕ್ಕಿವೆ. ಸ್ಫೋಟದ ತೀವ್ರತೆ ಹೆಚ್ಚಿಸಲು ಸಣ್ಣ ಸಣ್ಣ ಗುಂಡುಗಳನ್ನು ಬಳಸುತ್ತಾರೆ. ಆಕಸ್ಮಿಕವಾಗಿ ನಡೆದಿರುವ ಘಟನೆ ಇದಾಗಿದ್ದು, ಉದ್ದೇಶಪೂರ್ವಕ ಕೃತ್ಯವಲ್ಲ ಎಂದು ಪೊಲೀಸರು ಹೇಳಿದ್ದಾರೆ. 

ಈ ಸಂಬಂಧ ಕಾರ್ಯಕ್ರಮ ಆಯೋಜಕರು ಹಾಗೂ ಸ್ಥಳೀಯರನ್ನು ವಿಚಾರಣೆ ನಡೆಸಿ ಹೇಳಿಕೆ ಸಂಗ್ರಹಿಸಲಾಗಿದೆ. ಭಯಪಡುವ ಅನಾಹುತ ನಡೆದಿಲ್ಲ. ಕಚ್ಚಾ ಬಾಂಬ್ ಬಳಕೆ ಎಂಬುದು ಊಹೆಯಷ್ಟೇ. ಅದರಲ್ಲಿ ಯಾವುದೇ ಸತ್ಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. 

ವಿವಾಕನಗರ ಸಮೀಪದ ವನ್ನಾರ್ ಪೇಟೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ನಿಗೂಢವಾಗಿ ವಸ್ತುವೊಂದು ಸ್ಫೋಟಗೊಂಡು ಶಾಸಕ ಹ್ಯಾರಿಕ್ ಹಾಗೂ ಅವರ ಮೂವರು ಬೆಂಬಲಿಗರು ಗಾಯಗೊಂಡಿದ್ದರು. ಇದೊಂದು ಪೂರ್ವನಿಯೋಜಿತ ಕೃತ್ಯ. ಸ್ಫೋಟಗೊಂಡಿದ್ದು ಕಚ್ಚಾ ಬಾಂಬ್ ಆಗಿರಬಹುದು ಎಂದು ಹ್ಯಾರಿಸ್ ಪುತ್ರ ನಲಪಾಡ್ ಈ ಹಿಂದೆ ಆರೋಪಿಸಿದ್ದರು. 

SCROLL FOR NEXT