ರಾಜ್ಯ

ಆನಂದರಾವ್ ವೃತ್ತದ ಮೇಲ್ಸೇತುವೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹೆಸರು: ಯಡಿಯೂರಪ್ಪ ಘೋಷಣೆ

Raghavendra Adiga

ಬೆಂಗಳೂರು: ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ನೆನಪನ್ನು ಚಿರಸ್ಥಾಯಿಯಾಗಿಸಲು ನಗರದ ಆನಂದರಾವ್ ವೃತ್ತದ ಮೇಲ್ಸೇತುವೆಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೇಲ್ಸೇತುವೆ ಎಂದು ನಾಮಕರಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಸಂಗೊಳ್ಳಿ ರಾಯಣ್ಣನವರ 189ನೇ ಸಂಸ್ಮರಣೆ ಸಮಾರಂಭದ ಪ್ರಯುಕ್ತ ನಗರದ ರೇಲ್ವೆ ನಿಲ್ದಾಣದ ಬಳಿ ಇರುವ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಭಾನುವಾರ ಪುಷ್ಪಾರ್ಚನೆ ಮಾಡಿ ನಂತರ ಮಾತನಾಡಿದ ಅವರು, ರಾಣಿ ಚೆನ್ನಮ್ಮನವರ ಬಲಗೈ ಭಂಟ ಸಂಗೊಳ್ಳಿ ರಾಯಣ್ಣ ಅವರು ಬ್ರಿಟಿಷರ ದಾಸ್ಯದಿಂದ ಈ ದೇಶವನ್ನು ಮುಕ್ತಗೊಳಿಸಲು ತನ್ನ ಪ್ರಾಣವನ್ನೇ ಲೆಕ್ಕಿಸದೆ ಹೋರಾಟ ಮಾಡಿದ ಅಪ್ಪಟ ದೇಶಪ್ರೇಮಿ. ಅವರ ಶೌರ್ಯ, ಪರಾಕ್ರಮ, ದೇಶಪ್ರೇಮ, ತ್ಯಾಗದ ಗುಣಗಳು ಪ್ರಶ್ನಾತೀತ. ಅವರ ಹೆಸರು ಚಿರಸ್ಥಾಯಿಯಾಗಿ ಉಳಿಯಲು ನಗರದ ಆನಂದರಾವ್ ವೃತ್ತದ ಬಳಿ ಇರುವ ಮೇಲ್ಸೇತುವೆಗೆ ಸಂಗೊಳ್ಳಿ ರಾಯಣ್ಣ ಮೇಲ್ಸೇತುವೆ ಎಂದು ನಾಮಕರಣ ಮಾಡುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸಂಗೊಳ್ಳಿ ರಾಯಣ್ಣ ಜನ್ಮಸ್ಥಳವಾದ ಸಂಗೊಳ್ಳಿ ಹಾಗೂ ಹುತಾತ್ಮರಾದ ಸ್ಥಳ ನಂದಘಡವನ್ನು ಯಾತ್ರಾ ಸ್ಥಳವನ್ನಾಗಿ ಅಭಿವೃದ್ಧಿಪಡಿಸಲು ನಿಗದಿ ಪಡಿಸಿರುವ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ಆಗ್ರಹಿಸಿದರು.

ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾನದ ಅಧ್ಯಕ್ಷ ಸಂಗೊಳ್ಳಿ ಕೃಷ್ಣ ಮೂರ್ತಿ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

SCROLL FOR NEXT