ರಾಜ್ಯ

ಮತಾಂತರ ಸಮಾಜಕ್ಕೆ ಒಳ್ಳೆಯದಲ್ಲ, ಅದನ್ನು ನಿಷೇಧಿಸಲು ಕಾನೂನು ತರಲು ಸರ್ಕಾರ ಪ್ರಯತ್ನ: ಸಿಎಂ ಬೊಮ್ಮಾಯಿ

Sumana Upadhyaya

ಹುಬ್ಬಳ್ಳಿ: ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುವ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದೆ. ಹಲವು ಮಠಾಧೀಶರು ಮತ್ತು ಹಿಂದೂಪರ ಸಂಘಟನೆಗಳು ಮತಾಂತರ ನಿಷೇಧ ಕಾಯ್ಗೆ ಜಾರಿಗೆ ತರಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತಿದ್ದರೆ, ಮತಾಂತರ ನಿಷೇಧ ಕಾನೂನು ತರಬಾರದು ಎಂದು ಹಲವು ಕ್ರೈಸ್ತ ಮಿಷನರಿಗಳು, ಪಾದ್ರಿಗಳು ಸರ್ಕಾರವನ್ನು ಆಗ್ರಹಿಸುತ್ತಿವೆ. ಈ ಕುರಿತು ಮುಖ್ಯಮಂತ್ರಿಗಳನ್ನು ಸಹ ಭೇಟಿ ಮಾಡಿ ಮನವಿ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಇಂದು ಹುಬ್ಬಳ್ಳಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮತಾಂತರ ನಿಷೇಧ ಕಾಯ್ದೆ ಕರಡಿಗೆ ಒಪ್ಪಿಗೆ ನೀಡಿ ಅದನ್ನು ನಾವು ಅಧಿವೇಶನದಲ್ಲಿ ತರುತ್ತೇವೆ ಎಂದಿದ್ದಾರೆ. ಮತಾಂತರ ನಿಷೇಧ ಸಮಾಜಕ್ಕೆ ಒಳ್ಳೆಯದಲ್ಲ, ಮಾರಕ, ಕ್ರೈಸ್ತ, ಮುಸ್ಲಿಂ, ಬೌದ್ಧ, ಸಿಖ್ ಧರ್ಮದವರಿಗೆ ಈ ಬಗ್ಗೆ ಆತಂಕ ಬೇಡ ಎಂದು ಕೂಡ ಸಿಎಂ ಹೇಳಿದ್ದಾರೆ.

ಮತಾಂತರ ಸಮಾಜಕ್ಕೆ ಎಷ್ಟು ಮಾರಕ ಎಂಬ ಬಗ್ಗೆ ವ್ಯಾಖ್ಯಾನ ನೀಡಿದ ಮುಖ್ಯಮಂತ್ರಿ ಬೊಮ್ಮಾಯಿ, ಕ್ರೈಸ್ತ, ಮುಸಲ್ಮಾನ, ಸಿಖ್, ಬೌಧ್ಧ, ಹಿಂದೂ ಹೀಗೆ ಈ ಎಲ್ಲಾ ಧರ್ಮಗಳು ಸಂವಿಧಾನಾತ್ಮಕವಾಗಿ ಗುರುತು ಪಡೆದಿರುವ ಧರ್ಮಗಳು. ಅವುಗಳಿಗೆ, ಆ ಜನಾಂಗದವರಿಗೆ ಯಾವುದೇ ಆತಂಕ ಬೇಡ, ಅವರ ಪ್ರಾರ್ಥನೆ, ಅವರ ಧರ್ಮ, ನಂಬಿಕೆಗಳಿಗೆ ಯಾವುದೇ ಅಡ್ಡಿಯಾಗುವುದಿಲ್ಲ, ಆದರೆ ಬಡತನ, ಜನರ ಕಷ್ಟದ ಪರಿಸ್ಥಿತಿಯನ್ನು ದುರುಪಯೋಗ ಮಾಡಿಕೊಂಡು ಆಸೆ, ಆಮಿಷಗಳನ್ನೊಡ್ಡಿ ಮತಾಂತರ ಮಾಡುವುದಕ್ಕೆ ಅವಕಾಶವಿಲ್ಲ. ಆದ್ದರಿಂದ ಈ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ. ಈ ಚರ್ಚೆಯ ಸ್ವರೂಪದಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿ ಕಾನೂನು ಜಾರಿಗೆ ಬಂದಿದೆ ಎಂದರು.

ಎಲ್ಲವನ್ನೂ ಅವಲೋಕನ ಮಾಡಿ ಕರ್ನಾಟಕದಲ್ಲಿ ಕೂಡ ಕಾನೂನು ತರಬೇಕೆಂದು ಬಹುಜನರ ಅಪೇಕ್ಷೆಯಾಗಿದೆ. ಈ ಹಿನ್ನೆಲೆಯಲ್ಲಿ ಕಾನೂನು ಇಲಾಖೆಯ ಪರಿಶೀಲನಾ ಸಮಿತಿ ಪರಿಶೀಲನೆ ಮಾಡಿ ಸಂಪುಟಕ್ಕೆ ತರಲಾಗುತ್ತದೆ. ಬೆಳಗಾವಿಯಲ್ಲಿ ಸಂಪುಟ ಸಭೆ ನಡೆಸಿ ಬೆಳಗಾವಿ ಅಧಿವೇಶನದಲ್ಲಿ ಮಂಡಿಸಲು ಮುಂದಾಗುತ್ತೇವೆ ಎಂದರು.

ಕಾನೂನು ಇಲಾಖೆ ಮತಾಂತರ ನಿಷೇಧ ಕಾನೂನಿನ ಬಗ್ಗೆ ಪರಿಶೀಲನೆ ಮಾಡುತ್ತಿದೆ. ಇದು ಜಾರಿಗೆ ಬಂದರೆ ಯಾವ ಧರ್ಮಕ್ಕೂ ತೊಂದರೆಯಾಗುವುದಿಲ್ಲ, ಮತಾಂತರ ಸಮಾಜಕ್ಕೆ ಒಳ್ಳೆಯದಲ್ಲ. ಮತಾಂತರವಾದರೆ ಕುಟುಂಬಗಳಿಗೆ ಬಹಳ ತೊಂದರೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಕಾನೂನು ತರುವ ಪ್ರಯತ್ನ ಸರ್ಕಾರ ಮಾಡುತ್ತಿದೆ ಎಂದರು.

ಎರಡು ವರ್ಷಗಳ ನಂತರ ನಾಳೆ ಬೆಳಗಾವಿಯಯಲ್ಲಿ ಚಳಿಗಾಲ ಅಧಿವೇಶನ ಆರಂಭವಾಗುತ್ತಿದೆ. ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳಲಾಗಿದೆ. ಅಧಿವೇಶನದಲ್ಲಿ ಜನರಿಗೆ ಈ ರಾಜ್ಯದ ಅಭಿವೃದ್ಧಿಗೆ ಉಪಯೋಗವಾಗುವಂತಹ ಚರ್ಚೆಗಳಾಗಲಿ ಎಂದು ನಾವು ಬಯಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. 

ಉತ್ತರ ಕರ್ನಾಟಕ ಭಾಗದ ಬಗ್ಗೆ ಅರ್ಥಪೂರ್ಣ ಮಹತ್ವದ ಚರ್ಚೆಯಾಗಬೇಕೆಂದು ಈ ಭಾಗದ ಜನರ ಅಪೇಕ್ಷೆಯಾಗಿದೆ. ಸರ್ಕಾರ ಸಮಗ್ರ ಕರ್ನಾಟಕ ಅದರಲ್ಲೂ ಉತ್ತರ ಕರ್ನಾಟಕ ಅಭಿವೃದ್ಧಿಗೆ ಅರ್ಥಪೂರ್ಣ ಸಮಗ್ರ ಚರ್ಚೆ ಮತ್ತು ನಿಷ್ಕರ್ಷ ಚರ್ಚೆಯನ್ನು ಸರ್ಕಾರ ಸ್ವಾಗತಿಸುತ್ತದೆ ಎಂದರು.

SCROLL FOR NEXT