ರಾಜ್ಯ

ಚಿಕ್ಕಮಗಳೂರು: ಹಸುವಿನ ಹೊಟ್ಟೆಯಿಂದ 21 ಕೆಜಿ ಪ್ಲಾಸ್ಟಿಕ್ ಹೊರ ತೆಗೆದ ವೈದ್ಯರು!

Sumana Upadhyaya

ಬೆಂಗಳೂರು: ಮಣ್ಣಿನಲ್ಲಿ ಕರಗಿ ಹೋಗದ ವಸ್ತುಗಳ ಬಗ್ಗೆ ಪರಿಸರ ಕಾಳಜಿಯುಳ್ಳವರು ಆಗಾಗ ಎಚ್ಚರಿಕೆ ನೀಡುತ್ತಲೇ ಇರುತ್ತಾರೆ, ಇದರಿಂದ ಮನುಷ್ಯರಿಗೆ ಮಾತ್ರವಲ್ಲದೆ ಪ್ರಾಣಿ-ಪಕ್ಷಿಗಳಿಗೂ ಅಪಾಯ ಎಂದು ಹೇಳುತ್ತಲೇ ಇದ್ದರೂ ಪ್ಲಾಸ್ಟಿಕ್ ವಸ್ತುಗಳನ್ನು, ಪ್ಲಾಸ್ಟಿಕ್ ಗಳನ್ನು ಸಿಕ್ಕಾಪಟ್ಟೆ ಬಿಸಾಕುವುದು, ಎಲ್ಲೆಂದರಲ್ಲಿ ಎಸೆಯುವುದು ನಡೆಯುತ್ತಲೇ ಇರುತ್ತದೆ.

ಚಿಕ್ಕಮಗಳೂರಿನ ಕಡೂರು ತಾಲೂಕಿನ ಪಶುಸಂಗೋಪನೆ ಇಲಾಖೆ ವೈದ್ಯರು ಹಸುವಿನ ಹೊಟ್ಟೆಯಿಂದ ಬರೋಬ್ಬರಿ 21 ಕೆಜಿ ಪ್ಲಾಸ್ಟಿಕ್ ನ್ನು ಹೊರತೆಗೆದಿದ್ದಾರೆ. ಹಲವು ಸಮಯಗಳಿಂದ ತಿಂದ ಪ್ಲಾಸ್ಟಿಕ್ ಹಸುವಿನ ಹೊಟ್ಟೆಯಲ್ಲಿ ಸಂಗ್ರಹವಾಗಿತ್ತು.

3ರಿಂದ 4 ವರ್ಷದ ಹಸುವಿಗೆ ಅನಾರೋಗ್ಯ ಸಮಸ್ಯೆ ಕಾಡಲಾರಂಭಿಸಿತು. ಅದರ ಜೀರ್ಣಕ್ರಿಯೆಯ ಸಾಮರ್ಥ್ಯ ಕಡಿಮೆಯಾದಂತೆ ಹೊಟ್ಟೆ ಉಬ್ಬಿದಂತೆ ಕಂಡುಬಂತು. ದೇಹದಲ್ಲಿ ನಿಶ್ಯಕ್ತಿ, ಪೌಷ್ಟಿಕಾಂಶದ ಕೊರತೆಯೂ ಕಂಡುಬಂತು ಎಂದರು. ವೈದ್ಯರ ಬಳಿಗೆ ಹೋಗಿ ತೋರಿಸಿದಾಗ ತಿಂದ ಆಹಾರ ಜೀರ್ಣವಾಗಿಲ್ಲವೆಂದು ಕಂಡುಬಂದು ವೈದ್ಯರು ಸರ್ಜರಿ ಮಾಡಲು ಮುಂದಾದರು. 4 ಗಂಟೆಗಳ ಕಾಲ ನಡೆದ ಸರ್ಜರಿಯಲ್ಲಿ ಹಸುವಿನ ಹೊಟ್ಟೆಯಲ್ಲಿದ್ದ ಎಲ್ಲಾ ಪ್ಲಾಸ್ಟಿಕ್ ನ್ನು ಹೊರತೆಗೆಯಲಾಯಿತು.

ಒಂದು ಹಸು ಪ್ಲಾಸ್ಟಿಕ್ ತಿನ್ನುವಾಗ, ಅದನ್ನು ಜಗಿದು ಜೀರ್ಣಾಂಗ ವ್ಯವಸ್ಥೆಯ ಅಂಗಕ್ಕೆ ರವಾನಿಸಲು ಸಾಧ್ಯವಿಲ್ಲ. ಇದರಿಂದ ಹಸುವಿಗೆ ಬಹಳ ಸಮಸ್ಯೆಯಾಗುತ್ತದೆ. ಹೊಟ್ಟೆಯೊಳೆ ಉಷ್ಣತೆ ಹೆಚ್ಚಾಗುತ್ತದೆ ಮತ್ತು ಪ್ಲಾಸ್ಟಿಕ್ ಒಳಗೆ ಕರಗುತ್ತದೆ ಆಗ ಬೇರೆ ಆಹಾರಗಳಿಗೆ ಜೀರ್ಣಿಸಿಕೊಳ್ಳಲು ಸ್ಥಳವಿರುವುದಿಲ್ಲ. ರಕ್ತಕ್ಕೆ ಬೇಕಾದ ಪೋಷಕಾಂಶಗಳು ಸಿಗುವುದಿಲ್ಲ ಎಂದು ಕಡೂರು ಸರ್ಕಾರಿ ಪಶುಸಂಗೋಪನೆ ಆಸ್ಪತ್ರೆಯ ಮುಖ್ಯ ಪಶುಸಂಗೋಪನಾ ಅಧಿಕಾರಿ ಡಾ ಬಿ ಇ ಅರುಣ್ ತಿಳಿಸಿದ್ದಾರೆ.

ಸರ್ಜರಿ ಮಾಡುವಾಗ ಹಸುವನ್ನು ನಿಲ್ಲಿಸಿ ಲೋಕಲ್ ಅನಸ್ತೇಷಿಯಾ ನೀಡಲಾಯಿತು. ಈಗ ಹಸು ಆರೋಗ್ಯವಾಗಿದೆ. ಇನ್ನು ನಾಲ್ಕೈದು ದಿನ ಆಂಟಿಬಯೊಟಿಕ್ ಮತ್ತು ನೋವು ನಿವಾರಕಗಳನ್ನು ನೀಡಲಾಗುತ್ತದೆ. ಕಡೂರು ತಾಲ್ಲೂಕಿನಲ್ಲಿ ಇಂತಹ 10-15 ಪ್ರಕರಣಗಳು ವರದಿಯಾಗಿ ಡಾ ಅರುಣ್ ಅವರು ಚಿಕಿತ್ಸೆ ನೀಡಿದ್ದರಂತೆ. ಇಂತಹ ಘಟನೆ ಮರುಕಳಿಸದಂತೆ ನೋಡಿಕೊಳ್ಳಲು ಜನರು ಪ್ಲಾಸ್ಟಿಕ್ ಒಳಗೆ ಆಹಾರವನ್ನು ಎಸೆಯುವುದು, ಪ್ಲಾಸ್ಟಿಕ್ ಚೀಲಗಳನ್ನು ಎಲ್ಲೆಂದರಲ್ಲಿ ಎಸೆಯಬಾರದು ಎಂದು ಒತ್ತಾಯಿಸಿದ್ದಾರೆ.

ಮಣ್ಣಿನಲ್ಲಿ ಕರಗುವ ವಸ್ತುಗಳಲ್ಲಿ ಆಹಾರ ವಸ್ತುಗಳನ್ನು ಹಾಕಿ ಬಿಸಾಕಿದರೆ ಪರವಾಗಿಲ್ಲ, ಆದರೆ ಪ್ಲಾಸ್ಟಿಕ್ ಒಳಗೆ ಆಹಾರವಿದ್ದರೆ ಪ್ರಾಣಿಗಳು ಅದನ್ನು ವಾಸನೆ ಮಾಡಿ ತಿನ್ನಲು ಪ್ರಯತ್ನಿಸುತ್ತವೆ. ಈ ಸಮಸ್ಯೆಯು ಕಾಡು ಪ್ರಾಣಿಗಳ ಮೇಲೂ ಪರಿಣಾಮ ಬೀರುತ್ತದೆ. ಇದು ನಿಧಾನವಾಗಿ ಮಣ್ಣಿನಲ್ಲಿ ವಿಷವಾಗಿ ಕಾಡುತ್ತದೆ ಎನ್ನುತ್ತಾರೆ.

ಕಳೆದ ವರ್ಷ ವೈದ್ಯರು ಕಡೂರು ತಾಲ್ಲೂಕಿನಲ್ಲಿ 30 ಕೆಜಿ ಪ್ಲಾಸ್ಟಿಕ್ ಮತ್ತು ಕಬ್ಬಿಣದ ತುಂಡುಗಳನ್ನು ಗರ್ಭಿಣಿ ಹಸುವಿನ ಹೊಟ್ಟೆಯಿಂದ ಹೊರತೆಗೆದಿದ್ದರು, ಅಂದರೆ ಪ್ಲಾಸ್ಟಿಕ್, ಕಬ್ಬಿಣದ ನಿರುಪಯೋಗಿ ವಸ್ತುಗಳು ಪರಿಸರ, ಪ್ರಾಣಿಗಳ ಮೇಲೆ ಎಷ್ಟು ಹಾನಿಕಾರಕವಾಗಿದೆ ಎಂಬುದು ಗೊತ್ತಾಗುತ್ತದೆ ಎನ್ನುತ್ತಾರೆ.

SCROLL FOR NEXT