ರಾಜ್ಯ

ರಾಜ್ಯದಲ್ಲಿ ಇಳಿಕೆಯಾದ ಕೋವಿಡ್ ಸಾವಿನ ಪ್ರಮಾಣ

Manjula VN

ಬೆಂಗಳೂರು: ಕರ್ನಾಟಕದಲ್ಲಿ ಕೋವಿಡ್ ಸಾವಿನ ಪ್ರಮಾಣ ಕ್ರಮೇಣ ತಗ್ಗುತ್ತಿದ್ದು, ಶನಿವಾರ ಕೇವಲ ನಾಲ್ಕು ಕೋವಿಡ್-19 ಸಾವುಗಳು ಮಾತ್ರ ವರದಿಯಾಗಿದೆ.

ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಂದ ತಲಾ ಒಬ್ಬರು ಮತ್ತು ಉತ್ತರ ಕನ್ನಡದಿಂದ ಇಬ್ಬರು ಸಾವನ್ನಪ್ಪಿದ್ದು, ಆ ಮೂಲಕ ದಿನದ ಕೋವಿಡ್ ಸಾವಿನ ಅನುಪಾತ (CFR) ಕೂಡ 0.62%ನಷ್ಟು ಕಡಿಮೆಯಾಗಿದೆ.

ಕಳೆದ ಐದು ದಿನಗಳಲ್ಲಿ, ರಾಜ್ಯದಲ್ಲಿ 13 ರಿಂದ 20 ದೈನಂದಿನ ಸಾವುಗಳು ಸಂಭವಿಸುತ್ತಿವೆ. ಶನಿವಾರದ ಸೇರ್ಪಡೆಯೊಂದಿಗೆ, ಒಟ್ಟು ಸಾವಿನ ಸಂಖ್ಯೆ ಈಗ 37,811 ಕ್ಕೆ ಏರಿದೆ. ಆಗಸ್ಟ್ 6 ರಂದು, ರಾಜ್ಯದ ಸಿಎಫ್‌ಆರ್ 1.26% ಕ್ಕೆ ಏರಿಕೆಯಾಗಿತ್ತು. ಸೆಪ್ಟೆಂಬರ್ 30 ರವರೆಗೆ ಆ ಮಟ್ಟದಲ್ಲಿಯೇ ಇತ್ತು.  ಅಕ್ಟೋಬರ್ 1 ರಂದು ಅದು 1.27% ಕ್ಕೆ ಏರಿತು ಮತ್ತು ಅಕ್ಟೋಬರ್ 2 ರಂದು ಹಾಗೆಯೇ ಉಳಿಯಿತು. 

ಇನ್ನು ಶನಿವಾರ, ರಾಜ್ಯದಲ್ಲಿ 636 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿದ್ದು, ಅಕ್ಟೋಬರ್ 1 ರಂದು ಮತ್ತೆ 589 ಪ್ರಕರಣಗಳು ದಾಖಲಾಗಿತ್ತು. ಒಟ್ಟು ಸೋಂಕು ಪ್ರಕರಣಗಳು ಈಗ 29,77,225 ಕ್ಕೆ ತಲುಪಿದ್ದು, ರಾಜ್ಯದ ಸೋಂಕು ಸಕಾರಾತ್ಮಕ ದರವು 6.31%ಕ್ಕೆ ಇಳಿದಿದೆ.

ಏತನ್ಮಧ್ಯೆ, ಶನಿವಾರ 745 ಸೋಂಕಿತರು ಗುಣಮುಖರಾಗಿದ್ದು, ಆ ಮೂಲಕ ಒಟ್ಟು ಈಗ 29,27,029 ಮಂದಿ ಗುಣಮುಖರಾಗಿದ್ದಾರೆ. ಅಂತೆಯೇ ರಾಜ್ಯದ ಚೇತರಿಕೆಯ ಪ್ರಮಾಣವು 98.31%ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳು 12,356 ರಷ್ಟಿವೆ. ಸೆಪ್ಟೆಂಬರ್ 26 ರಂದು, 13,213 ಸಕ್ರಿಯ ಪ್ರಕರಣಗಳು ಇದ್ದವು  ಮತ್ತು ಅಂದಿನಿಂದ ನಿರಂತರ ಕುಸಿತ ಕಂಡುಬಂದಿದೆ.

ಏತನ್ಮಧ್ಯೆ, ಬೆಂಗಳೂರು ನಗರವು 245 ಹೊಸ ಪ್ರಕರಣಗಳನ್ನು ವರದಿ ಮಾಡಿದ್ದು, ಒಂದು ಸಾವು ಮತ್ತು 206 ಮಂದಿ ಗುಣಮುಖರಾಗಿದ್ದಾರೆ. ಬೆಂಗಳೂರು ಅರ್ಬನ್ ನಂತರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 100 ಹೊಸ ಪ್ರಕರಣಗಳು ಶನಿವಾರ ವರದಿಯಾಗಿವೆ. ಒಟ್ಟು ಸೋಂಕು ಪ್ರಕರಣಗಳು ಈಗ 12,46,896 ಮತ್ತು  ಒಟ್ಟು ಡಿಸ್ಚಾರ್ಜ್ 12,23,069ಕ್ಕೆ ಏರಿಕೆಯಾಗಿದೆ ಎಂದು ಸರ್ಕಾರದ ದತ್ತಾಂಶಗಳಿಂದ ತಿಳಿದುಬಂದಿದೆ.
 

SCROLL FOR NEXT