ರಾಜ್ಯ

ವೈದ್ಯರ ಅನುಮಾನದಿಂದ ಪ್ರಕರಣದ ದಿಕ್ಕೇ ಬದಲು; ಸಾವಿರ ರೂಪಾಯಿಗಾಗಿ ಸ್ನೇಹಿತನ ಮರ್ಡರ್!

Lingaraj Badiger

ಬೆಂಗಳೂರು: ಜಸ್ಟ್ ಸಾವಿರ ರೂಪಾಯಿಗಾಗಿ ಸ್ನೇಹಿತನನ್ನೇ ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಆರಂಭದಲ್ಲಿ ಅನುಮಾನಾಸ್ಪದ ಸಾವು ಎನ್ನಲಾಗುತ್ತಿದ್ದ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕೋಣನಕುಂಟೆಯಲ್ಲಿ ನಡೆದ ಈ ಪ್ರಕರಣದ ಬಗ್ಗೆ ವೈದ್ಯರ ಅನುಮಾನ ಹಾಗೂ ಪೋಸ್ಟ್ ಮಾರ್ಟಮ್ ರಿಪೋರ್ಟ್ ಹತ್ಯೆ ಕೇಸ್ ನ ದಿಕ್ಕನ್ನೇ ಬದಲಿಸಿದೆ. ಪ್ರಕರಣವನ್ನು ಕೈಗೆತ್ತಿಕೊಂಡ ಕೋಣನಕುಂಟೆ ಪೊಲೀಸರು, ಆರೋಪಿಯನ್ನು ಬಲೆಗೆ ಕೆಡವಿದ್ದಾರೆ.

ಮೃತ ಮಂಜುನಾಥ್ ಮತ್ತು ಆರೋಪಿ ಆಕಾಶ್ ಇಬ್ಬರು ಸ್ನೇಹಿತರು. ಪ್ಲಂಬಿಂಗ್ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.
ಇತ್ತೀಚೆಗೆ ಇಬ್ಬರಿಗೂ ಸಂಬಳವೂ ಬಂದಿತ್ತು. ಆದ್ರೆ, 1,000 ರೂ. ಹೆಚ್ಚುವರಿ ಹಣಕ್ಕಾಗಿ ಇಬ್ಬರ ಮಧ್ಯೆ ಗಲಾಟೆ ನಡೆದಿತ್ತು. ಈ ವೇಳೆ ದೊಣ್ಣೆ ಹಾಗೂ ಕೈಯಿಂದ ಮಂಜುನಾಥನ ಮೇಲೆ ಸ್ನೇಹಿತ ಆಕಾಶ್ ಥಳಿಸಿದ್ದ.

ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಮಂಜುನಾಥ್ ಆಸ್ಪತ್ರೆಗೆ ದಾಖಲಾಗಿದ್ದ. ಅಲ್ಲದೆ, ವೈದ್ಯರ ಮುಂದೆ ಮಂಜುನಾಥ, ತನಗೆ ಆಕ್ಸಿಡೆಂಟ್ ಆಗಿದೆ ಅಂತ ಕಥೆ ಕಟ್ಟಿದ್ದ. ದುರುದೃಷ್ಟಾವಶಾತ್ ಚಿಕಿತ್ಸೆ ಫಲಕಾರಿಯಾಗದೆ ಮಂಜುನಾಥ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ. ಬಳಿಕ ಈ ಬಗ್ಗೆ ಕೋಣನಕುಂಟೆ ಠಾಣೆಯಲ್ಲಿ 174(c) ಅಡಿಯಲ್ಲಿ ಅನುಮಾನಾಸ್ಪದ ಸಾವು ಅಂತ ಪ್ರಕರಣ ದಾಖಲಾಗಿತ್ತು.

ಈ ಮಧ್ಯೆ, ಪೋಸ್ಟ್ ಮಾರ್ಟಮ್ ರಿಪೋರ್ಟ್ ನಲ್ಲಿನ ಅಂಶಗಳು ಮಂಜುನಾಥನ ಸಾವಿನ ಬಗ್ಗೆ ವೈದ್ಯರು ಸಂಶಯ ವ್ಯಕ್ತಪಡಿಸಿದರು. ಆತನಿಗೆ ಆಕ್ಸಿಡೆಂಟ್ ಸಂಬಂಧ ಗಾಯಗಳಾಗಿಲ್ಲ. ಅವು ಹಲ್ಲೆಗೆ ಸಂಬಂಧಿಸಿದ ಗಾಯಗಳು ಅಂತ ತಿಳಿಸಿದರು. ಬಳಿಕ ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ಘಟನೆಗೂ ಮುನ್ನ ಮಂಜುನಾಥ್ ಹಾಗೂ ಆರೋಪಿ ಆಕಾಶ್ ನಡುವೆ ಗಲಾಟೆಯಾಗಿರುವುದನ್ನು ಪತ್ತೆ ಹಚ್ಚಿದರು. ಅಲ್ಲದೆ, ಹಲ್ಲೆ ವಿಚಾರಕ್ಕೆ ಸಂಬಂಧಿಸಿದಂತೆ ಸ್ನೇಹಿತ ಆಕಾಶ್ ಸಹ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.

ಸಂಪೂರ್ಣ ತನಿಖೆಯ ಬಳಿಕ ಕೋಣನಕುಂಟೆ ಪೊಲೀಸರು, ಅನುಮಾನಾಸ್ಪದ ಕೇಸ್ ಬದಲು 302 ರಡಿ ಪ್ರಕರಣ ದಾಖಲಿಸಿ ಆರೋಪಿ ಆಕಾಶ್ ನನ್ನು ಬಂಧಿಸಿದ್ದಾರೆ. ಅಲ್ಲದೆ, ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎನ್ನಲಾದ ಇನ್ನೊಬ್ಬ ಆರೋಪಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

SCROLL FOR NEXT