ರಾಜ್ಯ

ಬೆಂಗಳೂರು: ಕಮಲಾನಗರದಲ್ಲಿ ರಾತ್ರೋರಾತ್ರಿ ವಾಲಿದ ಕಟ್ಟಡ, ಆತಂಕದಲ್ಲಿ ಜನತೆ; ಕಟ್ಟಡ ನೆಲಸಮಕ್ಕೆ ಕ್ರಮ

Manjula VN

ಬೆಂಗಳೂರು: ನಗರದ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರ, ಕಮಲಾನಗರದ ಶಂಕರ್ ನಾಗ್ ಬಸ್ ನಿಲ್ದಾಣದ ಹಿಂದಿರುವ ಕಟ್ಟಡದ ಅಡಿಪಾಯ ಮತ್ತು ನೆಲಮಹಡಿ ಕುಸಿದಿದ್ದು, ನಿವಾಸಿಗಳು ಮತ್ತು ನೆರೆಹೊರೆಯವರು ಭಯಭೀತರಾಗಿರುವ ಘಟನೆ ನಡೆದಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳ ಪ್ರಕಾರ, ರಾತ್ರಿ 10 ರ ಸುಮಾರಿಗೆ ಬಿರುಕುಗಳು ಮೂಡಿ ಅಡಿಪಾಯ ಕುಸಿಯಲಾರಂಭಿಸಿತು. ಕಟ್ಟಡವನ್ನು ಎತ್ತರದ ಸಮತಲದಲ್ಲಿ ನಿರ್ಮಿಸಲಾಗಿರುವುದರಿಂದ ಅದು ದುರ್ಬಲ ಸ್ಥಳದಲ್ಲಿತ್ತು.

ಬಿಬಿಎಂಪಿ ಕೆಡವಬೇಕಾದ ದುರ್ಬಲ ಕಟ್ಟಡ ಎಂದು ಪಟ್ಟಿ ಮಾಡಿದ ಮತ್ತು ಗುರುತಿಸಿದ ಕಟ್ಟಡಗಳಲ್ಲಿ ಇದೂ ಒಂದು. ಕಟ್ಟಡವು ನಾಲ್ಕು ಮಹಡಿಗಳನ್ನು ಹೊಂದಿದ್ದು, ಎಂಟು ಕುಟುಂಬಗಳು ಅದರಲ್ಲಿ ವಾಸಿಸುತ್ತಿದ್ದವು.

ಬಿಬಿಎಂಪಿ ಕಟ್ಟಡ ದುರ್ಬಲವಾಗಿದ್ದರಿಂದ ತೆರವುಗೊಳಿಸುವ ಸೂಚನೆ ನೀಡಿತ್ತು. ಎರಡು ಕುಟುಂಬಗಳು ತೆರವಾಗಿದ್ದವು, ಆರು ಕುಟುಂಬ ಇನ್ನೂ ಅಲ್ಲೇ ಉಳಿದುಕೊಂಡಿತ್ತು. ಖಾಲಿ ಮಾಡುವ ಮುನ್ನ ಮಾಲೀಕರು ತಮ್ಮ ಲೀಸ್ ಹಣ ಮತ್ತು ಸುಮಾರು 1-1.5 ಲಕ್ಷ ರೂ. ವರೆಗಿನ ಅಡ್ವಾನ್ಸ್ ಹಣವನ್ನು ಹಿಂದಿರುಗಿಸುವಂತೆ ಅವರು ಒತ್ತಾಯಿಸಿದ್ದರು.

ಸಿಂಡಿಕೇಟ್ ಬ್ಯಾಂಕಿನಿಂದ ಸಾಲ ಪಡೆದಿದ್ದ ಕಟ್ಟಡದ ಮಾಲೀಕರಾದ ರಾಜೇಶ್ವರಿ ಎಂಬುವವರಿಗೆ ಬಿಬಿಎಂಪಿ ಹುಡುಕುತ್ತಿದೆ.

ಸ್ಥಳೀಯ ಶಾಸಕ ಹಾಗು ಅಬಕಾರಿ ಸಚಿವ ಕೆ ಗೋಪಾಲಯ್ಯನವರು ಬಿಬಿಎಂಪಿ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದರು. ನಂತರ ಮಾಧ್ಯಮ ಗಳಿಗೆ ಮಾತನಾಡಿದ ಅವರು, ಎನ್‌ಡಿ‌ಆರ್‌ಎಫ್ ತಂಡ ಮನೆಯಲ್ಲಿ ಬಾಡಿಗೆಗೆ ಇದ್ದವರನ್ನು ಸುರಕ್ಷಿತವಾಗಿ ಬೇರೆಡೆಗೆ ಸ್ಥಳಾಂತರಿಸಿದೆ. ಅಕ್ಕಪಕ್ಕದ ಮನೆಯಲ್ಲಿ ವಾಸವಿದ್ದವರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದ್ದು, ಅವರಿಗೆ ವಸತಿ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ ಯಾರಿಗೂ ಹಾನಿ ಯಾಗದಂತೆ ತೆರವು ಪ್ರಕ್ರಿಯೆ ನಡಸುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಈ ಕಟ್ಟಡ ಈಗಾಗಲೇ ಬಿಬಿಎಂಪಿಯ ಅಪಾಯಕಾರಿ ಕಟ್ಟಡಗಳ ಪಟ್ಟಿಯಲ್ಲಿದ್ದು, ಅಲ್ಲಿನ ಜನರಿಗೆ ತೆರವುಗೊಳಿಸುವಂತೆ ನೋಟಿಸ್‌ ನೀಡಲಾಗಿದೆ. ಕೆಲವರು ಮನೆ ಖಾಲಿ ಮಾಡಿದ್ದಾರೆ. ಆದರೆ, ಕೆಲವರು ಮನೆಯನ್ನು ಭೋಗ್ಯಕ್ಕೆ ನೀಡಿ, ಲಕ್ಷಾಂತರ ರೂಪಾಯಿ ಹಣ ಪಡೆದು ನಾಪತ್ತೆಯಾಗಿದ್ದಾರೆ. ಪೊಲೀಸರು ಅವರ ಶೋಧಕಾರ್ಯ ಆರಂಭಿಸಿದ್ದಾರೆ. ನಿರಾಶ್ರಿತರಿಗೆ ಸರ್ಕಾರ ಕಡೆಯಿಂದ ನೆರವು ನೀಡಲಾಗುವುದು ಎಂದು ತಿಳಿಸಿದರು.

ರಾತ್ರಿ ಕಟ್ಟಡ ವಾಲಿರುವ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಮತ್ತು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಟ್ಟಡವನ್ನು ನೆಲಸಮಗೊಳಿಸಲು ಅಧಿಕಾರಿಗಳು ನಿರ್ಧರಿಸಿದ್ದು, ಇದಕ್ಕೆ ಸೂಕ್ತ ಯೋಜನೆಯನ್ನೂ ರೂಪಿಸಿದ್ದಾರೆ. ಈ ಕಟ್ಟಡದಲ್ಲಿ ಆರು ಮನೆಗಳಿವೆ.

ನಂತರ ಮಾತನಾಡಿದ ಗೌರವ್‌ ಗುಪ್ತ, ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕಟ್ಟಡದ ಪಾಯ ಕುಸಿದಿದೆ. ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ಪಟ್ಟಿಯನ್ನು ಈಗಾಗಲೇ ಸಿದ್ಧಗೊಳಿಸಿದ್ದೇವೆ. ನಮ್ಮ ಪಟ್ಟಿಯಲ್ಲಿ ಈ ಕಟ್ಟಡವೂ ಇತ್ತು. ಸದ್ಯ ನಿವಾಸಿಗಳನ್ನೆಲ್ಲಾ ಬೇರೆಡೆ ಸ್ಥಳಾಂತರಿಸಿದ್ದೇವೆ. ಕಟ್ಟಡ ನೆಲಸಮಗೊಳಿಸುವಂತೆ ಸೂಚಿಸಲಾಗಿದೆ ಎಂದಿದ್ದಾರೆ.

SCROLL FOR NEXT