ರಾಜ್ಯ

ದೇವಾಲಯ ಒಡೆದದ್ದು, ಅದರಲ್ಲೂ ಬಿಜೆಪಿ ಸರ್ಕಾರ ಇರುವಾಗ ಈ ರೀತಿ ಮಾಡಿದ್ದು ತಪ್ಪು: ಸಚಿವ ಕೆ.ಎಸ್. ಈಶ್ವರಪ್ಪ

Sumana Upadhyaya

ಬೆಂಗಳೂರು: ಇಡೀ ರಾಜ್ಯದಲ್ಲಿ ದೇವಸ್ಥಾನ ಒಡೆಯುವ ಆತಂಕ ಶುರುವಾಗಿದೆ. ಬಿಜೆಪಿ ಸರ್ಕಾರವಿರುವ ಇಂತಹ ಸಂದರ್ಭದಲ್ಲಿ ದೇವಾಲಯ ಒಡೆದಿದ್ದು ತಪ್ಪು, ಜಿಲ್ಲಾಧಿಕಾರಿ ದೇವಸ್ಥಾನ ಒಡೆಯಲು ಆದೇಶ ನೀಡಿದ್ದು ತಪ್ಪೇ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ನ ಆದೇಶಗಳು ಬೇಕಾದಷ್ಟಿವೆ, ಪಟ್ಟಿ ಮಾಡಲಿ, ಆದರೆ ಯಾವ ದೇವಸ್ಥಾನಗಳನ್ನೂ ಒಡೆಯಬಾರದು, ಬಿಜೆಪಿ ಭಾರತೀಯ ಸಂಸ್ಕೃತಿ, ಪರಂಪರೆಗೆ ಒತ್ತು ನೀಡುವ ಪಕ್ಷ, ಸಂಸ್ಕೃತಿ-ಸಂಬಂಧ, ಹಿಂದುತ್ವವನ್ನು ರಕ್ಷಿಸಲೆಂದೇ ಜನರು ಭಾರತೀಯ ಜನತಾ ಪಾರ್ಟಿಯನ್ನು ಆಯ್ಕೆ ಮಾಡಿರುವುದು. ಅದು ಅಧಿಕಾರದಲ್ಲಿರುವಾಗ ಈ ರೀತಿ ಆಗಿದ್ದು ತಪ್ಪು ಎಂದು ಖಂಡಿಸಿದ್ದಾರೆ.

ಇಡೀ ರಾಜ್ಯದಲ್ಲಿ ದೇವಸ್ಥಾನಗಳನ್ನು ಯಾರೂ ಒಡೆಯಬಾರದು. ಯಾಕೆ ದೇವಾಲಯ ಮಾತ್ರ ಮುಟ್ಟಿದರು ಎಂಬ ಪ್ರಶ್ನೆ ಎದುರಾಗಿದೆ, ಕಾಂಗ್ರೆಸ್ ನಾಯಕರು ಹೇಳುವುದರಲ್ಲಿ ಏನೂ ತಪ್ಪಿಲ್ಲ, ಈಗಲಾದರೂ ಕಾಂಗ್ರೆಸ್ ನಾಯಕರಿಗೆ ದೇವಸ್ಥಾನಗಳು ಉಳಿಯಬೇಕು ಎಂದು ಅನಿಸಿದೆಯಲ್ಲ ಎಂದರು.

ಇಡೀ ರಾಜ್ಯದಲ್ಲಿ ದೇವಸ್ಥಾನಗಳನ್ನು ಒಡೆಯುತ್ತಾರೆಯೇ ಎಂಬ ಭಯ ರಾಜ್ಯದ ಜನರಲ್ಲಿ ಶುರುವಾಗಿದೆ. ಮೈಸೂರಿನಲ್ಲಿ ದೇವಾಲಯ ಒಡೆಯುವ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಸಂಬಂಧಪಟ್ಟ ಸಚಿವರನ್ನು ಕೇಳದೆಯೇ ಜಿಲ್ಲಾಧಿಕಾರಿಗಳು ಏಕಾಏಕಿ ನಿರ್ಧಾರ ತೆಗೆದುಕೊಂಡಿದ್ದು ತಪ್ಪು, ಇದನ್ನು ಒಪ್ಪುವುದಿಲ್ಲ ಎಂದರು.

ಮುಂದಿನ ದಿನಗಳಲ್ಲಿ ಒಂದೇ ಒಂದು ದೇವಾಲಯವನ್ನೂ ಒಡೆಯಬಾರದು ಎಂದು ನಾನು ಮುಖ್ಯಮಂತ್ರಿಗಳಲ್ಲಿ ಮಾತನಾಡುತ್ತೇನೆ, ಈ ಬಗ್ಗೆ ಜನರಿಗೆ ಆತಂಕ ಬೇಡ ಎಂದು ಭರವಸೆ ನೀಡಿದರು.

SCROLL FOR NEXT