ಬೆಂಗಳೂರು: ಕೇಂದ್ರ ಸರ್ಕಾರದ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ 'ಭಾರತ್ ಬಂದ್' ಭದ್ರತೆಯಲ್ಲಿದ್ದ ನಗರ ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ಅವರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ರೈತ ಸಂಘಟನೆಗಳಿಂದ ಬಂದ್ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿಬೆಂಗಳೂರು ನಗರದ ಗೊರಗುಂಟೆ ಪಾಳ್ಯ ಜಂಕ್ಷನ್ನಲ್ಲಿ ಪ್ರತಿಭಟನಾ ಜಾಥಾ ನಡೆಯುತ್ತಿತ್ತು. ಈ ವೇಳೆ ಕೆಲ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆಯಲು ಮುಂದಾಗಿದ್ದಾರೆ.
ಈ ವೇಳೆ ರೈತ ಮುಖಂಡನ ಕಾರನ್ನು ಅಡ್ಡ ಹಾಕಲು ಡಿಸಿಪಿ ಧರ್ಮೇಂದ್ರ ಕುಮಾರ್ ಮುಂದಾಗಿದ್ದಾರೆ. ಆಗ ಕಾರು ಚಾಲಕ ವಾಹನವನ್ನು ನಿಲ್ಲಿಸದೇ ಮುನ್ನುಗ್ಗಿಸಿದ್ದಾನೆ. ಇದರಿಂದ ಕಾರಿನ ಟೈರ್ ಡಿಸಿಪಿ ಎಡಗಾಲಿನ ಮೇಲೆ ಹರಿದಿದೆ. ಕೂಡಲೇ ಎಚ್ಚೆತ್ತ ಧರ್ಮೇಂದ್ರ ಕುಮಾರ್ ತಮ್ಮ ಕಾಲನ್ನು ಎಳೆದುಕೊಂಡು ಅಪಾಯದಿಂದ ಪಾರಾಗಿದ್ದಾರೆ.
ಇದನ್ನೂ ಓದಿ: ಭಾರತ್ ಬಂದ್: ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ, ಮೆಜೆಸ್ಟಿಕ್ನಲ್ಲಿ ಬಸ್ಗೆ ಅಡ್ಡ ಮಲಗಿ ಕರವೇ ಆಕ್ರೋಶ
ಗಾಯಗೊಂಡಿದ್ದ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ಅವರು ಸ್ಥಳದಲ್ಲೇ ಕುಳಿತು ಸ್ವಲ್ಪ ಚೇತರಿಸಿಕೊಂಡರು. ಬಳಿಕ ಪ್ರಾಥಮಿಕ ಚಿಕಿತ್ಸೆ ಪಡೆದುಕೊಂಡು ತಮ್ಮ ಕರ್ತವ್ಯದಲ್ಲಿ ತೊಡಗಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸದ್ಯ RMC ಪೊಲೀಸರು ಕಾರು ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಸ್ಥಳದಲ್ಲಿನ ಗದ್ದಲದ ಪರಿಸ್ಥಿತಿಯನ್ನು ತಿಳಿಗೊಳಿಸಲಾಗಿದೆ.