ರಾಜ್ಯ

ಉಡುಪಿ: ಕ್ಯಾಟರಿಂಗ್ ಮುಗಿಸಿ ಹಿಂತಿರುಗುತ್ತಿದ್ದವರ ದರೋಡೆ, ಅಪಹರಣ; 4 ಮಂದಿ ಬಂಧನ

Srinivasamurthy VN

ಉಡುಪಿ: ಕ್ಯಾಟರಿಂಗ್ ಮುಗಿಸಿ ಮಣಿಪಾಲ ಹೋಗುತ್ತಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಕಾರಿನಲ್ಲಿ ಬಂದ ತಂಡವೊಂದು ಅಪಹರಣ ಮಾಡಿ, ಹಲ್ಲೆ ನಡೆಸಿ ದರೋಡೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.

ಜಕ್ರೀಯಾ, ರಜೀಂ, ಖಾಲೀದ್, ರೆಹಮಾನ್‌  ಎಂಬ ನಾಲ್ವರು ತಡರಾತ್ರಿ ಮಣಿಪಾಲಕ್ಕೆ ತೆರಳುವ ವೇಳೆ ಈ ಅಪಹರಣ ಮತ್ತು ದರೋಡೆ ಯತ್ನ ನಡೆಸಿದ್ದು, ಉಡುಪಿ ನಗರ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಏನಿದು ಘಟನೆ?
ಮಣಿಪಾಲದ ಉಡುಪಿ ನರ್ಸಿಂಗ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿಕೊಂಡಿರುವ ವಿದ್ಯಾರ್ಥಿಗಳಾದ ಬ್ರೈಟಿಲ್ ಬಿಜು ಮತ್ತು ಮಹಮ್ಮದ್ ಸಿನಾನ್‌ ಕರಾವಳಿ ಬೈಪಾಸ್ ಬಳಿಯಿರುವ ಖಾಸಗಿ ಹೋಟೆಲಿನಲ್ಲಿ ಕ್ಯಾಟರಿಂಗ್ ಕೆಲಸ ಮುಗಿಸಿ ಮಣಿಪಾಲದ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಕಲ್ಸಂಕ ಜಂಕ್ಷನ್ ಬಳಿ ಕರಾವಳಿ ಬೈಪಾಸ್ ಕಡೆಯಿಂದ ಬಂದ ಕಾರನ್ನು ಕೈ ತೋರಿಸಿ ಡ್ರಾಪ್ ಕೇಳಿದ್ದಾರೆ. ಈ ವೇಳೆ ಕಾರನ್ನು ನಿಲ್ಲಿಸಿದ್ದು, ಚಾಲಕನು ಸೇರಿ ಕಾರಿನಲ್ಲಿ ನಾಲ್ವರಿದ್ದರು. ಕಾರಿನೊಳಗಿಂದ ಬಂದ ವಾಸನೆಯನ್ನು ಗಮನಿಸಿ ಕಾರಿನಲ್ಲಿ ತೆರಳಲು ವಿದ್ಯಾರ್ಥಿಗಳು ನಿರಾಕರಿಸಿದ್ದಾರೆ. ಆಗ ಕಾರಿನಲ್ಲಿದ್ದ ಒಬ್ಬಾತ ಇಳಿದು ಚಾಕು ತೋರಿಸಿ, ಕಾರಿನಲ್ಲಿ ಕುಳಿತುಕೊಳ್ಳದೇ ಇದ್ದರೇ ಕೊಲ್ಲುವುದಾಗಿ ಬೆದರಿಸಿ, ವಿದ್ಯಾರ್ಥಿಗಳಿಬ್ಬರನ್ನು ಅಪಹರಣ ಮಾಡಿದ್ದಾರೆ.

ನಂತರ ಇವರ ಮೊಬೈಲ್ ಕಿತ್ತುಕೊಂಡು ದೊಡ್ಡಣಗುಡ್ಡೆಯ ಪಾರ್ಕ್ ನಲ್ಲಿ ಇಬ್ಬರಿಗೆ ಹಲ್ಲೆ ನಡೆಸಿ 2 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾರೆ. ಅದರಲ್ಲಿ ಒಬ್ಬಾತ ತಪ್ಪಿಸಿಕೊಂಡು ಬಂದು ಠಾಣೆಯಲ್ಲಿ ದೂರು ನೀಡಿದ್ದಾನೆ. ಇನ್ನೊಬ್ಬ ವಿದ್ಯಾರ್ಥಿಯನ್ನು ಕಾಪು, ಶಿರ್ವದಲ್ಲಿ ಸುತ್ತಾಡಿಸಿ ಕಾರಿನಲ್ಲೇ ಹಲ್ಲೆ ನಡೆಸಿದ್ದಾರೆ. ಶಿರ್ವ ಬಳಿ ಪೋಲಿಸರು ಇವರನ್ನು ವಶಕ್ಕೆ ಪಡೆದಿದ್ದಾರೆ. ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

SCROLL FOR NEXT