ರಾಜ್ಯ

ಮಂಗಳೂರು ಸ್ಫೋಟ ಪ್ರಕರಣ: ಹೌದು ಹ್ಯಾಂಡ್ಲರ್'ಗಳು ಇದ್ದಾರೆ, ವಿಚಾರಣೆ ವೇಳೆ ಹಲವರ ಹೆಸರು ಬಾಯ್ಬಿಟ್ಟ ಶಾರಿಕ್!

Manjula VN

ಬೆಂಗಳೂರು: ಮಂಗಳೂರು ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಶಾರಿಕ್ (24) ತನಗೆ ಹ್ಯಾಂಡ್ಲರ್ ಇದ್ದಾನೆಂಬುದನ್ನು ವಿಚಾರಣೆ ವೇಳೆ ಒಪ್ಪಿಕೊಂಡಿದ್ದು, ಷರತ್ತುಗಳ ಮೇಲೆ ಹಲವರ ಹೆಸರನ್ನು ಬಾಯ್ಬಿಟ್ಟಿದ್ದಾನೆಂದು ಮೂಲಗಳಿಂದ ತಿಳಿದುಬಂದಿದೆ.

ನನ್ನಂತೆಯೇ ಇನ್ನೂ ಹಲವು ಯುವಕರಿದ್ದಾರೆ. ಅವರು ಹೆಚ್ಚು ಮೂಲಭೂತವಾದಿಗಳಾಗಿದ್ದಾರೆ ಮತ್ತು ಭಾರತದಲ್ಲಿ ಶರಿಯತ್ ಆಡಳಿತವನ್ನು ಸ್ಥಾಪಿಸಲು ಯಾವುದೇ ಹಂತಕ್ಕೆ ಬೇಕಾದರೂ ಅವರು ಹೋಗುತ್ತಾರೆಂದು ಹೇಳಿದ್ದಾನೆಂದು ಮೂಲಗಳು ತಿಳಿಸಿವೆ.

ಮಂಗಳೂರಿನ ಪ್ರಸಿದ್ಧ ಕದ್ರಿ ಮಂಜುನಾಥ್ ದೇವಸ್ಥಾನದಲ್ಲಿ ಐಇಡಿ ಸ್ಫೋಟಗೊಳಿಸಲು ಸಂಚು ರೂಪಿಸಲಾಗಿತ್ತು. ಆದರೆ, ಆಟೋದಲ್ಲಿಯೇ ಅದು ಸ್ಫೋಟ ಗೊಂಡಿತ್ತು ಎಂದು ಶಾರೀಕ್ ತಪ್ಪೊಪ್ಪಿಕೊಂಡಿದ್ದಾನೆಂದು ಮೂಲಗಳು ತಿಳಿಸಿವೆ.

ಈ ಹಿಂದೆ, ಭಯೋತ್ಪಾದಕ ಶಂಕಿತ ಆರೋಪಿಗಳಾದ ಶಿವಮೊಗ್ಗದ ಅರಾಫತ್ ಅಲಿ, ಮುಸ್ಸಾಬಿರ್ ಹುಸೇನ್ ಮತ್ತು ಅಬ್ದುಲ್ ಮಥೀನ್ ತಾಹಾ ಎಂಬ ಹ್ಯಾಂಡ್ಲರ್‌ಗಳ ಹೆಸರನ್ನು ಪೊಲೀಸರು ಬಹಿರಂಗಪಡಿಸಿದ್ದರು. ಆದರೆ ಶಾರಿಕ್ ಅನ್ನು ನಿರ್ವಹಿಸುತ್ತಿರುವ ವ್ಯಕ್ತಿ ಬೇರೊಬ್ಬರು ಇದ್ದಾನೆಂದು ಶಂಕಿಸಿದ್ದರು.

ಈ ವ್ಯಕ್ತಿ ಶಾರಿಕ್ ಜೊತೆ ನಿರಂತರ ಸಂಪರ್ಕದಲ್ಲಿದ್ದಾನೆ. ಆತ ರಹಸ್ಯ ಸಂಭಾಷಣೆಗಳಿಗಾಗಿ ವಿಪಿಎನ್-ಸಕ್ರಿಯಗೊಳಿಸಿದ ಅಪ್ಲಿಕೇಶನ್‌ಗಳಲ್ಲಿ ಇತರರೊಂದಿಗೆ ಸಂವಹನ ನಡೆಸುತ್ತಿದ್ದಾರೆ, ಕ್ರಿಪ್ಟೋಕರೆನ್ಸಿ ಮೂಲಕ ಭಯೋತ್ಪಾದಕ ಚಟುವಟಿಕೆಗಳಿಗೆ ಹಣಕಾಸು ಒದಗಿಸುತ್ತಿದ್ದಾನೆ. ಜಿಹಾದ್‌ಗಾಗಿ ದೊಡ್ಡ ಕಾರ್ಯಯೋಜನೆಗಾಗಿ ಸಣ್ಣ ಸಣ್ಣ ಕಾರ್ಯಗಳನ್ನು ಇಂತಹವರಿಗೆ ನೀಡುತ್ತಿದ್ದಾನೆಂದು ಮೂಲಗಳು ತಿಳಿಸಿವೆ.

ಆನ್‌ಲೈನ್‌ನಲ್ಲಿ ಸಂಶೋಧನೆ ನಡೆಸಿದ್ದ ಶಾರಿಕ್
ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಶಾರಿಕ್, ಯೋಜಿತ ಕೃತ್ಯಕ್ಕೂ ಮುನ್ನ ದೇಶದ ಪ್ರಾಮುಖ್ಯತೆಯ ದಿನಗಳು ಮತ್ತು ಕರ್ನಾಟಕದ ಹಿಂದೂ ಧಾರ್ಮಿಕ ಸಭೆಗಳ ಕುರಿತು ಆನ್‌ಲೈನ್‌ನಲ್ಲಿ ಸಂಶೋಧನೆ ನಡೆಸಿದ್ದ ಎಂದು ವರದಿಗಳಿಂದ ತಿಳಿದುಬಂದಿದೆ.

ಉದ್ದೇಶಿತ ಸ್ಥಳಗಳಲ್ಲಿ ದೇಶದ ಪ್ರಮುಖ ದಿನಗಳಲ್ಲಿ ಸ್ಫೋಟ ನಡೆಸಲು ಯೋಜನೆ ನಡೆಸಿದ್ದ ಎಂದು ಮೂಲಗಳು ಮಾಹಿತಿ ನೀಡಿವೆ.

ಅಲಿ, ಹುಸೇನ್ ಮತ್ತು ತಾಹಾ ಭಯೋತ್ಪಾದನೆ ಸಂಬಂಧಿತ ಪ್ರಕರಣಗಳಲ್ಲಿ ಬೇಕಾಗಿರುವ ವ್ಯಕ್ತಿಗಳಾಗಿದ್ದೂ, ಮೂವರು ತಲೆಮರೆಸಿಕೊಂಡಿದ್ದಾರೆ. ಅಲಿ ಸೌದಿ ಅರೇಬಿಯಾದಲ್ಲಿದ್ದಾನೆಂದು ತಿಳಿದುಬಂದಿದೆ.

ಸ್ಫೋಟ ಪ್ರಕರಣದಲ್ಲಿ ಗಾಯಗೊಂಡಿರುವ ಶಾರೀಕ್ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದ್ದು, ಆತನನ್ನು ಪೊಲೀಸರು ಇನ್ನೂ ವಶಕ್ಕೆ ಪಡೆದುಕೊಳ್ಳಲು ಸಾಧ್ಯವಾಗಿಲ್ಲ.

ಪ್ರಕರಣದ ತನಿಖೆಯನ್ನು ಅಧಿಕೃತವಾಗಿ ಈಗಾಗಲೇ ಸ್ವೀಕರಿಸಿರುವ ಎನ್ಐಎ ಅಧಿಕಾರಿಗಳು ಶಾರೀಕ್ ಸಂಪೂರ್ಣ ಚೇತರಿಸಿಕೊಳ್ಳುವುದಕ್ಕಾಗಿ ಕಾಯುತ್ತಿದ್ದಾರೆಂದು ತಿಳಿದುಬಂದಿದೆ.

SCROLL FOR NEXT