ಶಿವಮೊಗ್ಗ: ಅಡಕೆ ಮರದ ಹಾಳೆಗಳಿಂದ ಅಲಂಕಾರಿಕ ವಸ್ತುಗಳನ್ನು ತಯಾರಿಸಿ, ಅದನ್ನು ವಿದೇಶಗಳಿಗೆ ರಫ್ತು ಮಾಡುವ ಮಲೆನಾಡಿನ ಶಿವಮೊಗ್ಗದ ದಂಪತಿಗಳಾದ ಸುರೇಶ್ ಹಾಗೂ ಮೈಥಿಲಿ ಬಗ್ಗೆ ಮನ್ ಕಿ ಬಾತ್ ನಲ್ಲಿ ಪ್ರಧಾನಮಂಮತ್ರಿ ನರೇಂದ್ರ ಮೋದಿಯವರು ಭಾನುವಾರ ಮೆಚ್ಚುಗೆ ವ್ಯಕ್ತಪಡಿಸಿದರು.
ಶಿವಮೊಗ್ಗದ ಈ ದಂಪತಿಗಳು ಅಡಕೆ ಹಾಳೆಯಿಂದ ತಟ್ಟೆ, ಟ್ರೇ, ಚಪ್ಪಲಿಯಂತ ಆಕರ್ಷಕ ಉತ್ಪನ್ನಗಳನ್ನು ತಯಾರಿಸುತ್ತಿದ್ದು, ಈ ವಸ್ತುಗಳು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.
ಮನ್ ಕಿ ಬಾತ್ ನಲ್ಲಿ ಈ ದಂಪತಿಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಮೋದಿಯವರು, ದೇಶವಾಸಿಗಳು ಇಂತಹ ಸ್ವದೇಶಿ ಉತ್ಪನ್ನಗಳನ್ನು ಬಳಸಬೇಕು ಮತ್ತು ಇತರರಿಗೂ ಉಡುಗೊರೆಯಾಗಿ ನೀಡಬೇಕು ಎಂದು ಹೇಳಿದರು.
ಇದನ್ನೂ ಓದಿ: ವಿಶ್ವದ ಹಲವು ರಾಷ್ಟ್ರಗಳಲ್ಲಿ ಕೋವಿಡ್ ಹೆಚ್ಚಾಗುತ್ತಿದ್ದು, ನಾವು ಎಚ್ಚರವಹಿಸಬೇಕಿದೆ: ಮನ್ ಕಿ ಬಾತ್'ನಲ್ಲಿ ಪ್ರಧಾನಿ ಮೋದಿ
ಸುರೇಶ್ ಮತ್ತು ಮೈಥಿಲಿ, ತಮ್ಮ ಸ್ಟಾರ್ಟಪ್ ಭೂಮಿ ಅಗ್ರಿ ವೆಂಚರ್ಸ್ ಮೂಲಕ ಅಡಿಕೆ ಹಾಳೆಗಳಿಂದ ಉತ್ಪನ್ನಗಳನ್ನು ತಯಾರಿಸಿ ರಫ್ತು ಮಾಡುತ್ತಿದ್ದಾರೆ. ಪ್ರಾಣಿಗಳ ಚರ್ಮ, ಪ್ಲಾಸ್ಟಿಕ್ ಮತ್ತು ರಬ್ಬರ್ಗಳಿಗೆ ಬದಲಾಗಿ ಪಾಮ್ ಲೆದರ್ ಯೋಜನೆಯನ್ನು ಪ್ರಾರಂಭಿಸಿದ್ದಾರೆ.
ದಂಪತಿಗಳು ಅಡಿಕೆ ನಾರಿನಿಂದ ತಯಾರಿಸಿದ ಅನೇಕ ವಿಶಿಷ್ಟ ಉತ್ಪನ್ನಗಳನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಕಳುಹಿಸುತ್ತಿದ್ದಾರೆ. ಅಡಿಕೆ ನಾರಿನಿಂದ ಟ್ರೇಗಳು, ತಟ್ಟೆಗಳು ಮತ್ತು ಕೈಚೀಲಗಳಿಂದ ಹಿಡಿದು ಅಲಂಕಾರಿಕ ವಸ್ತುಗಳನ್ನು ತಯಾರಿಸುತ್ತಿದ್ದಾರೆ. ಈ ನಾರಿನಿಂದಲೇ ತಯಾರಿಸಿದ ಚಪ್ಪಲ್ ಗಳೂ ಇಂದು ಬಹಳಷ್ಟು ಜನರಿಗೆ ಇಷ್ಟವಾಗುತ್ತಿವೆ. ಇಂದು, ಅವರ ಉತ್ಪನ್ನಗಳನ್ನು ಲಂಡನ್ ಮತ್ತು ಯುರೋಪಿನ ಇತರ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲಾಗುತ್ತಿದೆ.
ಇದು ನಮ್ಮ ನೈಸರ್ಗಿಕ ಸಂಪನ್ಮೂಲಗಳು ಮತ್ತು ಸಾಂಪ್ರದಾಯಿಕ ಕೌಶಲ್ಯಗಳ ಗುಣಮಟ್ಟವಾಗಿದೆ, ಇದು ಎಲ್ಲರಿಗೂ ಇಷ್ಟವಾಗುತ್ತಿದೆ. ಭಾರತದ ಸಾಂಪ್ರದಾಯಿಕ ಜ್ಞಾನದೊಂದಿಗೆ, ಜಗತ್ತು ಸುಸ್ಥಿರ ಭವಿಷ್ಯದ ಮಾರ್ಗಗಳನ್ನು ನೋಡುತ್ತಿದೆ. ನಾವೂ ಕೂಡ ಈ ಬಗ್ಗೆ ಹೆಚ್ಚೆಚ್ಚು ಜಾಗೃತರಾಗಬೇಕು. ನಾವು ಅಂತಹ ಸ್ವದೇಶಿ ಮತ್ತು ಸ್ಥಳೀಯ ಉತ್ಪನ್ನಗಳನ್ನು ಬಳಸಬೇಕು ಮತ್ತು ಇತರರಿಗೂ ಉಡುಗೊರೆಯಾಗಿ ನೀಡಬೇಕು. ಇದು ನಮ್ಮ ಗುರುತನ್ನು, ಸ್ಥಳೀಯ ಆರ್ಥಿಕತೆಯನ್ನು ಬಲಪಡಿಸುತ್ತದೆ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಜನರ ಭವಿಷ್ಯವನ್ನು ಉಜ್ವಲಗೊಳಿಸುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ: ಅಟಲ್ ಬಿಹಾರಿ ವಾಜಪೇಯಿ ಜನ್ಮದಿನ: 'ಸದೈವ್ ಅಟಲ್' ಸ್ಮಾರಕಕ್ಕೆ ರಾಷ್ಟ್ರಪತಿಗಳು, ಪ್ರಧಾನಿ ಮೋದಿ ಸೇರಿ ಗಣ್ಯರಿಂದ ಪುಷ್ಪ ನಮನ
ರೇಡಿಯೊ ಕಾರ್ಯಕ್ರಮದಲ್ಲಿ ಮೋದಿ ತಮ್ಮ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಸುರೇಶ್ ಅವರು ಬಹಳಷ್ಟು ಸಂತಸ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರದ ಯೋಜನೆಗಳಿಂದ ನಾವು ಇಂತಹ ವಿಧಾನಗಳ ಅನುಸರಿಸಲು ಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ.