ರಾಜ್ಯ

ಮೈಸೂರಿನಲ್ಲಿ ಮಳೆಯಿಂದ ತೊಂದರೆಗೊಳಗಾದ ಕುಟುಂಬಗಳಿಗೆ 'ಅಂಬಿಗ'ನ ನೆರವು!

Srinivasamurthy VN

ಮೈಸೂರು: ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆ ಹಾಗೂ ಕಾವೇರಿ ನದಿ ಪ್ರವಾಹದಿಂದಾಗಿ ಶ್ರೀರಂಗಪಟ್ಟಣದ ಖಾಸಗಿ ಲೇಔಟ್‌ನ 25 ಕುಟುಂಬಗಳು ಪಟ್ಟಣದ ಉಳಿದ ಭಾಗಗಳಿಂದ ಸಂಪರ್ಕ ಕಳೆದುಕೊಂಡಿದ್ದು, ಈ ಕುಟುಂಬಗಳಿಗೆ ಚಿಕನ್ ಮಾರಾಟಗಾರ ಅಂಬಿಗನಾಗಿ ನೆರವು ನೀಡುತ್ತಿದ್ದಾರೆ.

ಹೌದು.. ಶ್ರೀರಂಗಪಟ್ಟಣದ ವೆಲ್ಲೆಸ್ಲಿ ಸೇತುವೆ ಬಳಿ ಚಿಕನ್ ಸ್ಟಾಲ್ ನಡೆಸುತ್ತಿರುವ ಮುಜಾಹಿದ್ ಪಾಷಾ ಸಂತ್ರಸ್ತ ಕುಟುಂಬಗಳಿಗೆ ನೆರವಾಗುತ್ತಿದ್ದು, 40ರ ಹರೆಯದ ಪಾಶಾ, ಪ್ರವಾಹದಲ್ಲಿ ಸಿಕ್ಕಿಬಿದ್ದ ಕುಟುಂಬಗಳು ಮತ್ತು ಅವರ ಮಕ್ಕಳನ್ನು ಉಚಿತವಾಗಿ ಒಂದು ದಡದಿಂದ ಮತ್ತೊಂದು ದಡಕ್ಕೆ ಸಾಗಿಸಲು ತನ್ನ ತೆಪ್ಪವನ್ನು ಬಳಸುತ್ತಿದ್ದಾರೆ. ಈ ಹಿಂದೆ ಪಾಷಾ ಅವರು ತೆಪ್ಪವನ್ನು 6 ಸಾವಿರ ರೂ.ಗೆ ಖರೀದಿಸಿ ಕಾವೇರಿಯಲ್ಲಿ ಮೀನುಗಾರಿಕೆಗೆ ಬಳಸುತ್ತಿದ್ದರು. ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ 80,000 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡುವುದರೊಂದಿಗೆ ಇಲ್ಲಿ ಪ್ರವಾಹ ಪರಿಸ್ಥಿತಿ ಏರ್ಪಟ್ಟಿದ್ದು, ಈ ಸಂತ್ರಸ್ಥ ಕುಟುಂಬಗಳಿಗೆ ಆಹಾರ ಮತ್ತು ಇತರ ಅಗತ್ಯ ವಸ್ತುಗಳನ್ನು ತಲುಪಿಸಲು ಮತ್ತು ವಿದ್ಯಾರ್ಥಿಗಳನ್ನು ಶಾಲೆಗಳಿಗೆ ಕರೆದೊಯ್ಯಲು ಅವರು ಈಗ ಈ ತೆಪ್ಪವನ್ನು ಬಳಸುತ್ತಿದ್ದಾರೆ. 

ಬಡಾವಣೆಯಲ್ಲಿ ಮನೆ ನಿರ್ಮಿಸಿಕೊಂಡಿರುವ ಹಲವರಿಗೆ ಇಷ್ಟು ವರ್ಷ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ ಪ್ರವಾಹ ಮತ್ತು ಮಳೆಯಿಂದಾಗಿ ದಿಢೀರ್ ಸಮಸ್ಯೆ ಎದುರಾಗಿದೆ. ಕಚೇರಿಗೆ ಹೋಗುವವರು ಮತ್ತು ಮಕ್ಕಳು ಅವರ ಸೇವೆಗಳನ್ನು ಬಳಸುತ್ತಾರೆ, ಆದರೆ ಅನಾರೋಗ್ಯದ ಜನರು ವೈದ್ಯರೊಂದಿಗೆ ಅಪಾಯಿಂಟ್ಮೆಂಟ್ ತೆಗೆದುಕೊಳ್ಳುವ ಮೊದಲು ಪಾಷಾಗೆ ಕರೆ ಮಾಡುತ್ತಾರೆ.  ಕೃಷ್ಣರಾಜ ಸಾಗರ ಜಲಾಶಯದಿಂದ ನೀರು ಬಿಟ್ಟಿದ್ದರಿಂದ ಬಡಾವಣೆ ಹಾಗೂ ಪಂಪ್‌ಹೌಸ್‌ಗೆ ಸಂಪರ್ಕ ಕಲ್ಪಿಸುವ ತಾತ್ಕಾಲಿಕ ಸೇತುವೆ ಹಾಳಾಗಿದ್ದು ಪರಿಸ್ಥಿತಿ ಹದಗೆಟ್ಟಿದೆ. ಇದರಿಂದ ನಿವಾಸಿಗಳು ಮನೆಯೊಳಗೆ ಇರಬೇಕಾದ ಅನಿವಾರ್ಯತೆ ಉಂಟಾಗಿದ್ದು, ಹಾಲು, ತರಕಾರಿ, ಆಹಾರ ಧಾನ್ಯಗಳಂತಹ ಅಗತ್ಯ ವಸ್ತುಗಳನ್ನು ಖರೀದಿಸಲು ಹರಸಾಹಸ ಪಡಬೇಕಾಗುತ್ತಿದೆ. ಇದೀಗ ಪಾಶಾ ನದಿಯನ್ನು ದಾಟಲು ಮತ್ತು ಅಗತ್ಯ ವಸ್ತುಗಳನ್ನು ತಲುಪಿಸಲು ತಮ್ಮ ತೆಪ್ಪವನ್ನು ಬಳಸಿ ಇತರರಿಗೆ ನೆರವಾಗುತ್ತಿದ್ದಾರೆ.

ಈ ಕುರಿತು ಮಾತನಾಡುವ ಪಾಷಾ, "ಲೇಔಟ್ ಅನ್ನು ಸಂಪರ್ಕಿಸುವ ಸೇತುವೆ ಕುಸಿದಿದೆ ಮತ್ತು ಜನರು ಮುಖ್ಯ ಸ್ಥಳದಿಂದ ಸಂಪರ್ಕ ಕಡಿತಗೊಂಡಿದ್ದಾರೆ. ನನ್ನ ತೆಪ್ಪ ಬಳಸಿ ಅವರಿಗೆ ಸಹಾಯ ಮಾಡಲು ನಾನು ನಿರ್ಧರಿಸಿದೆ. ಶಾಲಾ ಮಕ್ಕಳು ಮತ್ತು ಕಚೇರಿಗೆ ಹೋಗುವವರು ತಮ್ಮ ಮನೆಗಳಿಗೆ ಉಚಿತವಾಗಿ, ತಲುಪಲು ಸಹಾಯ ಮಾಡಲು ನಾನು ಪಂಪ್ ಹೌಸ್‌ನಿಂದ ಲೇಔಟ್‌ಗೆ ಎಂಟರಿಂದ ಹತ್ತು ಟ್ರಿಪ್‌ಗಳನ್ನು ಮಾಡುತ್ತೇನೆ. ಅವರು ನನಗಾಗಿ ಕಾಯುತ್ತಿರುತ್ತಾರೆ. ನಾನು ಜ್ವರದಿಂದ ಬಳಲುತ್ತಿರುವ ಅವರಲ್ಲಿ ಕೆಲವರನ್ನು ಹತ್ತಿರದ ಕ್ಲಿನಿಕ್‌ಗೆ ಕರೆದೊಯ್ದಿದ್ದೇನೆ ಎಂದು ಹೇಳಿದ್ದಾರೆ.

ಪಾಷಾ ಅವರು ಕೆಲವು ಅರ್ಚಕರಿಂದ ಹಣವನ್ನು ತೆಗೆದುಕೊಳ್ಳಲು ನಿರಾಕರಿಸಿದ್ದು, ಅವರು ಕೊಡಲೆತ್ನಿಸಿದ ಹಣವನ್ನು ದೇವಸ್ಥಾನದ ಹುಂಡಿಗೆ ಹಾಕಿದ್ದಾರೆ. ಕಷ್ಟದಲ್ಲಿರುವ ಜನರ ಸೇವೆ ಮಾಡಲು ದೇವರು ನನ್ನನ್ನು ನಿಯೋಜಿಸಿದ್ದಾನೆ. ನಾನು ಅದನ್ನು ಮನುಕುಲದ ಒಳಿತಿಗಾಗಿ ಮಾಡುತ್ತಿದ್ದೇನೆಯೇ ಹೊರತು ಯಾವುದೇ ಹಣದ ಲಾಭಕ್ಕಾಗಿ ಅಲ್ಲ ಪಾಷಾ ಹೇಳಿದ್ದಾರೆ. ಬಡಾವಣೆಯಲ್ಲಿ ಸಿಲುಕಿರುವ ಎಲ್ಲ ಕುಟುಂಬಗಳಿಗೆ ಮೊಬೈಲ್‌ ನಂಬರ್‌ ಹಂಚಿಕೊಂಡಿದ್ದು, ನಮ್ಮ ಮಕ್ಕಳು ತರಗತಿಗಳನ್ನು ತಪ್ಪಿಸದಿರುವುದು ನಮಗೆ ಸಂತಸ ತಂದಿದೆ, ಇದಕ್ಕೆಲ್ಲ ಪಾಷಾ ಕಾರಣ ಎಂದು ನಿವಾಸಿ ಶಂಕರ್ ಹೇಳಿದ್ದಾರೆ.

SCROLL FOR NEXT