ಬೆಂಗಳೂರು: ಎರಡು ನಗರಗಳ ನಡುವಿನ ಪ್ರಯಾಣದ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡುವ ಬಹು ನಿರೀಕ್ಷಿತ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಕಾಮಗಾರಿ ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ.
ಮೈಸೂರು- ಬೆಂಗಳೂರು ಎಕ್ಸ್ ಪ್ರೆಸ್ ಹೆದ್ದಾರಿ ಈ ವರ್ಷದ ಅಕ್ಟೋಬರ್ ವೇಳೆಗೆ ಸಿದ್ಧವಾಗುವ ಸಾಧ್ಯತೆ ಇಲ್ಲ ಎಂದು ಪಿಡಬ್ಲ್ಯುಡಿ ಸಚಿವ ಸಿಸಿ ಪಾಟೀಲ್ ಹೇಳಿದ್ದಾರೆ. ಬೆಂಗಳೂರಿನ ನೈಸ್ ಪ್ರವೇಶದ್ವಾರದಿಂದ ಮೈಸೂರಿನ ರಿಂಗ್ ರೋಡ್ ಜಂಕ್ಷನ್ವರೆಗೆ 117-ಕಿಮೀ ಹೆದ್ದಾರಿಯು ಸರಾಸರಿ ಪ್ರಯಾಣದ ಸಮಯವನ್ನು ಕಡಿತಗೊಳಿಸಲಿದ್ದು. 3 ಗಂಟೆಗಳಿಂದ ಕೇವಲ 90 ನಿಮಿಷಗಳಲ್ಲಿ ಪ್ರಯಾಣಿಸಬಹುದಾಗಿದೆ.
ಹತ್ತು ದಿನಗಳ ಮೈಸೂರು ದಸರಾ ಆಚರಣೆಗಳು ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 5 ರವರೆಗೆ ನಡೆಯಲಿವೆ. ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವು ಮಹತ್ವಾಕಾಂಕ್ಷೆಯ ಯೋಜನೆಯನ್ನು ಉದ್ಘಾಟಿಸಲು ಪ್ರಧಾನಿ ನರೇಂದ್ರ ಮೋದಿಯವರನ್ನು ಆಹ್ವಾನಿಸಲು ಯೋಜಿಸಿತ್ತು. ಮೈಸೂರು ಭಾಗದಲ್ಲಿ ಪಕ್ಷವನ್ನು ಬಲವರ್ಧಿಸುವ ನಿಟ್ಟಿನಲ್ಲಿ ಎಕ್ಸ್ ಪ್ರೆಸ್ ಹೆದ್ದಾರಿ ಕಾಮಗಾರಿಯನ್ನು ದಸರಾ ವೇಳೆಗೆ ಪೂರ್ಣಗೊಳಿಸಲು ಬಯಸಿತ್ತು, ಆದರೆ ಸದ್ಯ ನಡೆಯುತ್ತಿರುವ ಆಮಗತಿಯ ಕಾಮಗಾರಿಯಿಂದಾಗಿ ದಸರಾ ಮುನ್ನಕ್ಕೂ ಪೂರ್ಣಗೊಳ್ಳುವ ಸಾಧ್ಯತೆಯಿಲ್ಲ.
ರಸ್ತೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ, ಆದರೆ ಹೆಚ್ಚಿನ ಸ್ಥಳಗಳಲ್ಲಿ ಫ್ಲೈಓವರ್ಗಳು ಮತ್ತು ಅಂಡರ್ಪಾಸ್ಗಳಂತಹ ರಚನೆಗಳು ಅಪೂರ್ಣವಾಗಿವೆ. ಕಾರಿಡಾರ್ ನಲ್ಲಿ ಒಂಬತ್ತು ಪ್ರಮುಖ ಸೇತುವೆಗಳು, 44 ಸಣ್ಣ ಸೇತುವೆಗಳು ಮತ್ತು ನಾಲ್ಕು ರೈಲು ಮೇಲ್ಸೇತುವೆಗಳನ್ನು ಹೊಂದಿದೆ. ನಾವು 70 ಪ್ರತಿಶತದಷ್ಟು ಕೆಲಸವನ್ನು ಪೂರ್ಣಗೊಳಿಸಿದ್ದೇವೆ ಮತ್ತು ಉಳಿದವುಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲು ಪ್ರಯತ್ನಿಸುತ್ತಿದ್ದೇವೆ, ದಸರಾ ವೇಳೆಗೆ ಕಾಮಗಾರಿ ಮುಗಿಸಲು ಸಾಧ್ಯವಾಗದಿರಬಹುದು ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಾರ್ಚ್ನಲ್ಲಿ ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು 10 ಪಥಗಳ ಬೆಂಗಳೂರು-ಮೈಸೂರು ಆರ್ಥಿಕ ಕಾರಿಡಾರ್ ಕುರಿತು ಟ್ವೀಟ್ ಮಾಡಿದ್ದರು. ದಾಖಲೆಯ ವೇಗದಲ್ಲಿ ನಿರ್ಮಾಣವಾಗುತ್ತಿದ್ದು, 8,172 ಕೋಟಿ ರೂಪಾಯಿ ವೆಚ್ಚದ ಕಾರಿಡಾರ್ ಅಕ್ಟೋಬರ್ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದ್ದರು.
ಮಾರ್ಚ್ 2014 ರಲ್ಲಿ, ಕೇಂದ್ರ ಮೇಲ್ಮೈ ಸಾರಿಗೆ ಸಚಿವಾಲಯವು ದೇಶಾದ್ಯಂತ ಕೆಲವು ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿಯಾಗಿ ನವೀಕರಿಸಲಾಗುವುದು ಎಂದು ಘೋಷಿಸಿತು, ಅದರಲ್ಲಿ ಬೆಂಗಳೂರು-ಮೈಸೂರು ರಸ್ತೆ ಕೂಡ ಒಂದಾಗಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಆರು ಲೇನ್ ಎಕ್ಸ್ಪ್ರೆಸ್ವೇ ಸೇರಿದಂತೆ 10 ಲೇನ್ಗಳಾಗಿ ಪರಿವರ್ತಿಸುತ್ತಿದೆ. 2014 ರಲ್ಲಿ ಯೋಜನೆಯ ಅಂದಾಜು ವೆಚ್ಚ 4,100 ಕೋಟಿ ಆಗಿತ್ತು, ನಂತರ ಅದು ದುಪ್ಪಟ್ಟಾಯಿತು.