ರಾಜ್ಯ

'ಜೈ ಮಹಾರಾಷ್ಟ್ರ'- ರಾಜ್ಯದ ಬಸ್ ಟಿಕೆಟ್ ಗಳಲ್ಲಿ 'ಮಹಾ' ಸರ್ಕಾರದ ಲಾಂಛನ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಎಡವಟ್ಟು!

Shilpa D

ಗದಗ:  ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್  ಟಿಕೆಟ್​ನಲ್ಲಿ ಕರ್ನಾಟಕ ಸರ್ಕಾರದ ಗಂಡ ಭೇರುಂಡ ಲಾಂಛನದ ಬದಲಾಗಿ ಮಹಾರಾಷ್ಟ್ರ ಸರ್ಕಾರ ಲಾಂಚನದ ಪ್ರಿಂಟ್ ಕಂಡುಬಂದಿದೆ.
    
ಮಹಾರಾಷ್ಟ್ರ ಸರ್ಕಾರದ ಲಾಂಛನ ಇರುವ ಟಿಕೆಟ್ ಗಳನ್ನು ಪ್ರಯಾಣಿಕರಿಗೆ ಕಂಡಕ್ಟರ್ ಗಳು ಹರಿದುಕೊಡ್ತಿದ್ದಾರೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ದೋಣಿ ಗ್ರಾಮದಿಂದ ಗದಗ ನಗರಕ್ಕೆ ಬರುವ ಸರ್ಕಾರಿ ಬಸ್ ನಲ್ಲಿ ಈ ಟಿಕೆಟ್ ಹಂಚಿಕೆಯಾಗಿದೆ. ಇದೊಂದೇ ಮಾರ್ಗವಲ್ಲ ಬದಲಾಗಿ ಗದಗ ದಿಂದ ಹುಬ್ಬಳ್ಳಿ , ಹುಲಕೋಟಿಯಿಂದ ಗದಗ ಹೀಗೆ ನಗರಗಳಿಗೆ, ಹಳ್ಳಿಗಳಿಗೆ ತಾಲೂಕುಗಳಿಗೆ ಹೋಗುವ ಬಸ್ ಗಳಲ್ಲಿ ಇದೇ ಲಾಂಛನ ಇರುವ ಟಿಕೆಟ್ ನೀಡಲಾಗುತ್ತಿದೆ.

ಡೋಣಿ ಮತ್ತು ಗದಗ ನಡುವಿನ ಬಸ್‌ನಲ್ಲಿ ಪ್ರಯಾಣಿಕರೊಬ್ಬರು ಟಿಕೆಟ್‌ನಲ್ಲಿರುವ ಲೋಪದೋಷ ಗಮನಿಸಿದ್ದಾರೆ.  ಲಾಂಛನದಲ್ಲಿ 'ಜೈ ಮಹಾರಾಷ್ಟ್ರ' ಘೋಷಣೆ ಇದೆ. ಗದಗ ಪಟ್ಟಣದ ಪುಟ್ಟರಾಜ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಾದ ಮಟ್ಟು ಬಿಳಿಯೇಲಿ ಕೆಲ ಕನ್ನಡ ಪರ ಸಂಘಟನೆಗಳಿಗೆ ಕರೆ ಮಾಡಿದರು. ಬಸ್ ಗದಗ ತಲುಪಿದ ನಂತರ ಪ್ರಯಾಣಿಕರು, ಕಾರ್ಯಕರ್ತರೊಂದಿಗೆ ಸೇರಿ ಪ್ರತಿಭಟನೆ ನಡೆಸಿದರು. ಇದು ಎನ್‌ಡಬ್ಲ್ಯುಕೆಆರ್‌ಟಿಸಿ ಅಧಿಕಾರಿಗಳ ಗಂಭೀರ ಲೋಪವಾಗಿದ್ದು, ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಟಿಕೆಟ್ ಕೊಡುವ ರೋಲ್ ಗಳು ವಿಶಾಖಪಟ್ಟಣದಿಂದ ಸರಬರಾಜು ಆಗುತ್ತವೆ. ವಿಶಾಖಪಟ್ಟಣದಿಂದ ಮಹಾರಾಷ್ಟ್ರ , ಕರ್ನಾಟಕ ಸೇರಿದಂತೆ ಅನೇಕ ರಾಜ್ಯಕ್ಕೆ ರೋಲ್ ಗಳು ಸರಬರಾಜು ಆಗುತ್ತಿವೆ. ಗದುಗಿಗೆ ಕೂಡ ಅಲ್ಲಿಂದಲೇ ಸರಬರಾಜು ಆಗಿದೆ. ಆದರೆ ಸರಬರಾಜು ಮಾಡುವೆ ವೇಳೆ ಕರ್ನಾಟಕದ ರೋಲ್ ಗಳ ಜೊತೆಗೆ ಒಂದು ಬಾಕ್ಸ್ ಮಹಾರಾಷ್ಟ್ರ ದ್ದು ಬಂದಿದೆ. ಅದನ್ನು ಸಂಬಂಧಿಸಿದ ಅಧಿಕಾರಿಗಳು, ಸಿಬ್ಬಂದಿ ಪರಿಶೀಲಿಸಿ ಕಂಡಕ್ಟರ್ ಗಳಿಗೆ ಕೊಡಬೇಕಿತ್ತು. ಆದ್ರೆ ಪರಿಶೀಲಿಸದೆ ಕೊಟ್ಟಿದ್ದಾರೆ. ಇದು ತಪ್ಪಾಗಿದೆ ತಪ್ಪು ಮಾಡಿದವರ ಮೇಲೆ ಕ್ರಮ ಕೈಗೊಳ್ಳುವುದಾಗಿ ಗದಗ ವಿಭಾಗೀಯ ನಿಯಂತ್ರಣಾಧಿಕಾರಿ ಎಫ್‌ಸಿ ಹಿರೇಮಠ  ತಿಳಿಸಿದ್ದಾರೆ.

SCROLL FOR NEXT